ಜಯಲಲಿತಾ ಆಪ್ತ ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ
ಚೆನ್ನೈ, ಸೆ.28: 'ಇತಿಹಾಸ ಮರುಕಳಿಸುತ್ತದೆ' ಎಂಬ ಮಾತಿದೆ ಅದು ತಮಿಳುನಾಡಿನ ಹಾಲಿ ವಿತ್ತ ಸಚಿವ ಓ ಪನ್ನೀರ್ ಸೆಲ್ವಂ ಪಾಲಿಗೆ ನಿಜವಾಗುತ್ತಿದೆ. ಪುರುಚ್ಚಿ ತಲೈವಿ, ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರು ಜೈಲುಪಾಲಾದ ಹಿನ್ನೆಲೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಮತ್ತೆ ಸೆಲ್ವಂಗೆ ಸಿಗುತ್ತಿದೆ.
ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ನೂತನ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಲು ಎಐಎಡಿಎಂಕೆ ಶಾಸಕಾಂಗ ಸಭೆ ನಡೆಸಲಾಯಿತು. ದೀರ್ಘಕಾಲ ನಡೆದ ಸಭೆಯಲ್ಲಿ ವಿತ್ತ ಸಚಿವ, ಪೆರಿಯಕುಲಂ ಕ್ಷೇತ್ರದ ಶಾಸಕ ಪನ್ನೀರ್ ಸೆಲ್ವಂ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಂದಿನ ಸಿಎಂ ಎಂದು ಆಯ್ಕೆ ಮಾಡಲಾಗಿದೆ. ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಭೇಟಿ ಮಾಡಲಿರುವ ಶಾಸಕರು ನಂತರ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಲಿದ್ದಾರೆ.

ಹಿಸ್ಟರಿ ರಿಪೀಟ್ಸ್: 2001ರಲ್ಲಿ ತಾನ್ಸಿ ಭೂ ಹಗರಣ ಪ್ರಕರಣದಲ್ಲಿ ಸೆ.21, 20೦1ರಂದು ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆ ಆನ್ವಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2003ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಜಯಲಲಿತಾ ಆರೋಪ ಮುಕ್ತಗೊಂಡು ಖುಲಾಸೆ ಹೊಂದಿದ್ದರು.
ಅಂದು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಿರಿತನದ ಆಧಾರವನ್ನು ಲೆಕ್ಕಿಸದೆ ಥೇವರ್ ಸಮುದಾಯಕ್ಕೆ ಸೇರಿದ ತನ್ನ ನಿಷ್ಠಾವಂತ ಸೇವಕ ಪನ್ನೀರ್ ಸೆಲ್ವಂರನ್ನು ಸಿಎಂ ಸ್ಥಾನದಲ್ಲಿ ಜಯಾ ಕೂರಿಸಿ ರಿಮೋಟ್ ಕಂಟ್ರೋಲ್ ಸಿಎಂ ಆಗಿ ವರ್ತಿಸಿದ್ದರು.
ಓಪಿಎಸ್ ಎಂದು ಕರೆಯಲ್ಪಡುವ ಸೆಲ್ವಂ ಅವರು ಮುಖ್ಯಮಂತ್ರಿ ಅಲ್ಲದೆ ಲೋಕೋಪಯೋಗಿ ಸಚಿವ, ವಿತ್ತ ಸಚಿವ, ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.ಇಂದಿಗೂ ಊರಿಗೆ ತೆರಳಿದಾಗ ರಾಜಕೀಯ ಮರೆಯುವ ಸೆಲ್ವಂ ಕೃಷಿಕರಾಗಿ, ಚಹಾ ಅಂಗಡಿ ಮಾಲೀಕರಾಗಿ ನಿಮಗೆ ಕಾಣ ಸಿಗುತ್ತಾರೆ.












Click it and Unblock the Notifications