ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?
ಒಂದು ಮಾತು ಮಾತ್ರ ಸತ್ಯ. ಜಯಲಲಿತಾ ಯುಗಾಂತ್ಯವಾಗಿರುವುದರಿಂದ ಮತ್ತು ಕರುಣಾನಿಧಿ ಆಟ ಮುಗಿದಿರುವುದರಿಂದ ಅವರಿಬ್ಬರ ಹತ್ತಿರಕ್ಕೆ ಬರುವಂಥ ಒಬ್ಬೇ ಒಬ್ಬ ವ್ಯಕ್ತಿ ತಮಿಳುನಾಡಿನಲ್ಲಿಲ್ಲ. ಇದ್ದರೆ ಅದು ರಜನಿಕಾಂತ್ ಮಾತ್ರ.
ಅಧಿಕಾರಕ್ಕಾಗಿ ಶರಂಪರ ಕಿತ್ತಾಡುತ್ತಿರುವ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು, ನಾಯಕರು ಗಪ್ ಚಿಪ್ ಆಗುವಂಥ ಸುದ್ದಿಯೊಂದು ರೆಕ್ಕೆಪುಕ್ಕ ಕಟ್ಟಿಕೊಂಡು ತಮಿಳುನಾಡಿನಲ್ಲಿ ಹರಿದಾಡುತ್ತಿದೆ. ಅದೇನಾದರೂ ನಿಜವಾದರೆ ತಮಿಳುನಾಡಿನಲ್ಲಿ ಹೊಸ ಕ್ರಾಂತಿ ಉಂಟಾಗಲಿದೆ.
ಅದೇನೆಂದರೆ, ದಕ್ಷಿಣ ಭಾರತದ ಸೂಪರ್ ಸ್ಟಾರ್, ಸ್ಟೈಲ್ ಕಿಂಗ್ ರಜನಿಕಾಂತ್ ಅವರು ಹೊಸ ಪಕ್ಷದ ಉದಯಕ್ಕೆ ನಾಂದಿ ಹಾಡಲಿದ್ದಾರೆ ಅಥವಾ ಭಾರತೀಯ ಜನತಾ ಪಕ್ಷವನ್ನು ಸೇರಿ ರಾಜಕೀಯಕ್ಕೆ ಸದ್ಯದಲ್ಲೇ ಧುಮುಕಲಿದ್ದಾರೆ. ಈ ಸುದ್ದಿ ಹಿಂದೆ ಇತ್ತಾದರೂ ಇಂದಿನ ಪರಿಸ್ಥಿತಿಯಲ್ಲಿ ಬ್ರೇಕಿಂಗ್ ನ್ಯೂಸೇ.
ಡಿಸೆಂಬರ್ 12ರಂದು 66 ವರ್ಷ ಪೂರೈಸಿದ, ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ನಿಜವಾದರೆ ಅದಕ್ಕಿಂತ ಅಚ್ಚರಿಯ, ಆಘಾತಕರ ಸುದ್ದಿ ಇನ್ನೊಂದು ಇರಲಾರದು. ಆದರೆ, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎನ್ನುವುದೇ ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.
ಸದ್ಯದ ಪರಿಸ್ಥಿತಿ ರಜನಿಕಾಂತ್ ರಾಜಕೀಯದ ಆರಂಗೇಟ್ರಂ ಮಾಡಲು ಪ್ರಶಸ್ತವಾಗಿದೆ. ಮೊದಲು ಜಯಲಲಿತಾ ಮತ್ತು ಕರುಣಾನಿಧಿ ಎಂಬ ಇಬ್ಬರು ದಿಗ್ಗಜರು ಇದಕ್ಕೆ ಅವಕಾಶವನ್ನೇ ನೀಡಿರಲಿಲ್ಲ. ಈಗ ಜಯಲಲಿತಾ ಅಸುನೀಗಿದ್ದಾರೆ, ಕರುಣಾನಿಧಿಯ ವಯಸ್ಸೀಗ 92! [ಮೆಗಾಸ್ಟಾರ್ ಅಮಿತಾಬ್ ಸೂಪರ್ ಸ್ಟಾರ್ ರಜನಿಗೆ ಕೊಟ್ಟ ಸಲಹೆ ಏನು?]
ರಜನಿ ರಾಜಕೀಯಕ್ಕೆ ಬರಬೇಕೆಂಬ ಒತ್ತಾಸೆ
ಎಂದು ಜಯಲಲಿತಾ ಅವರು ಡಿಸೆಂಬರ್ 5ರಂದು 'ಅಧಿಕೃತ'ವಾಗಿ ಕಣ್ಣುಮುಚ್ಚಿದರೋ, ಅಂದಿನಿಂದಲೇ ರಜನಿಕಾಂತ್ ಅವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಸೆ ಬಲವಾಗುತ್ತಿದೆ. ಎರಡೇ ದಿನಗಳ ನಂತರ ಚೋ ರಾಮಸ್ವಾಮಿ ಅಸುನೀಗಿದ ನಂತರ ಅವರ ಶ್ರದ್ಧಾಂಜಲಿ ಸಮಯದಲ್ಲಿ ತುಘಲಕ್ ಸಂಪಾದಕರಾಗಿರುವ ಎಸ್ ಗುರುಮೂರ್ತಿ ಅವರು, ರಜನಿಕಾಂತ್ ಹೊಸ ಪಕ್ಷವನ್ನು ಹುಟ್ಟುಹಾಕಬೇಕು ಎಂದು ಅಪ್ಪಣೆ ಹೊರಡಿಸಿದ್ದರು.
ನನಗೆ ಅಧಿಕಾರ ಅಂದ್ರೆ ಬಲು ಪ್ರೀತಿ
ನಂತರ, ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ 'ನನಗೆ ಪವರ್ ಅಂದ್ರೆ ಬಲು ಪ್ರೀತಿ' ಎಂದು ಎಲ್ಲರೂ ಹುಬ್ಬೇರುವಂತೆ ರಜನಿ ಮಾಡಿದ್ದರು. ಸಭಿಕರು ಗಲಿಬಿಲಿಗೊಳಗಾದಾಗ, 'ಸ್ಪಿರಿಚುವಲ್ ಪವರ್' ಎಂದು ಸ್ಪಷ್ಟನೆ ನೀಡಿ ಎಲ್ಲರೂ ಮತ್ತೆ ತಣ್ಣಗಾಗುವಂತೆ ಮಾಡಿದ್ದರು. ರಜನಿ ಮನದಲ್ಲಿ ಏನಿದೆಯೋ ಬಲ್ಲವರಾರು?
ರಜನಿಗೆ ಗಾಳ ಹಾಕಲು ಬಿಜೆಪಿ ಸಿದ್ಧ
ಇನ್ನು ರಜನಿಕಾಂತ್ ಅವರಿಗೆ ಗಾಳ ಹಾಕಲು ಭಾರತೀಯ ಜನತಾ ಪಕ್ಷ ಸಿದ್ಧವಾಗಿಯೇ ಇದೆ. ಒಂದು ವೇಳೆ ಬಿಜೆಪಿ ಸೇರಿದರೆ ನೀವೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತೀರಿ ಎಂದು ಆಮಿಷ ಒಡ್ಡುತ್ತಲೇ ಇದೆ. ಇದಕ್ಕೆ ಇಲ್ಲಿಯವರೆಗೆ ರಜನಿಕಾಂತ್ ಸೊಪ್ಪು ಹಾಕಿಲ್ಲ.
ರಜನಿ ಅವರ ಮನೆಗೆ ಮೋದಿ ಭೇಟಿ
ಅಸಲಿ ಸಂಗತಿಯೇನೆಂದು ಬಲ್ಲವರಾರು? ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಅವರು ಚೆನ್ನೈಗೆ ಬಂದಿದ್ದಾಗ ರಜನಿ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಮೋದಿ ಅವರ ಮನದಲ್ಲೇನಿದೆ ಎಂಬುದು ಊಹಿಸುವುದು ಕಷ್ಟಕರ ಸಂಗತಿಯೇನಾಗಿರಲಿಲ್ಲ.
ಬಿಜೆಪಿ ಸೇರಿ, ಚುನಾವಣೆಯಲ್ಲಿ ಸೋತು...
ಹಾಗೆ ನೋಡಿದರೆ ಬಿಜೆಪಿಗೆ ತಮಿಳುನಾಡಿನಲ್ಲಿ ಅಸ್ತಿತ್ವವೇ ಇಲ್ಲ. ಇದು ರಜನಿ ಅವರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಬಿಜೆಪಿ ಪಕ್ಷ ಸೇರಿಕೊಂಡು ಚುನಾವಣೆಯಲ್ಲಿ ಧುಮುಕಿ ಸೋತು ಮುಖ ಕೆಡಿಸಿಕೊಳ್ಳುವ ಕೆಲಸವನ್ನು ಅವರು ಸದ್ಯಕ್ಕೆ ಖಂಡಿತ ಮಾಡಲಾರರು.
ನಂತರ ನೋಡುವಾ ಎಂದಿದ್ದಾರಂತೆ ರಜನಿ
ಇನ್ನು ರಾಜಕೀಯ ಸೇರುವ ಬಗ್ಗೆ ತಮ್ಮ ಆತ್ಮೀಯರಲ್ಲಿ ಕೆಲ ಮಾತುಗಳನ್ನು ಅವರಾಡಿದ್ದಾರೆ ಎಂಬ ಪಿಸುಪಿಸು ಕೂಡ ಇದೆ. ಮಗಳು ಸೌಂದರ್ಯಗೊಂದು ಸಿನೆಮಾ ಮಾಡಿ, ಹಿಮಾಲಯಕ್ಕೊಂದು ಭೇಟಿ ನೀಡಿ, ಅಮೆರಿಕದಲ್ಲಿ ಆರೋಗ್ಯ ಚಿಕಿತ್ಸೆ ಮಾಡಿಸಿಕೊಂಡು ನಂತರ ನೋಡುವಾ ಎಂದು ಆಡಿರುವುದು ಕೂಡ ಕೇಳಿಬಂದಿದೆ.
ಇದ್ದರೆ ಅದು ರಜನಿಕಾಂತ್ ಮಾತ್ರ
ಆದರೆ ಒಂದು ಮಾತು ಮಾತ್ರ ಸತ್ಯ. ಜಯಲಲಿತಾ ಯುಗಾಂತ್ಯವಾಗಿರುವುದರಿಂದ ಮತ್ತು ಕರುಣಾನಿಧಿ ಆಟ ಮುಗಿದಿರುವುದರಿಂದ ಅವರಿಬ್ಬರ ಹತ್ತಿರಕ್ಕೆ ಬರುವಂಥ ಒಬ್ಬೇ ಒಬ್ಬ ವ್ಯಕ್ತಿ ತಮಿಳುನಾಡಿನಲ್ಲಿಲ್ಲ. ಇದ್ದರೆ ಅದು ರಜನಿಕಾಂತ್ ಮಾತ್ರ.
ರಜನಿ ಮಾತು ಅಂದ್ರೆ ಮಾತು
ರಜನಿಯವರ ಒಂದು ಮಾತು ಎಂಥ ಪರಿಣಾಮ ಬೀರುತ್ತದೆ ಎಂಬುದಕ್ಕೆ 1996ರ ಚುನಾವಣೆಯೇ ಸಾಕ್ಷಿ. ಒಂದು ವೇಳೆ ಜಯಲಲಿತಾ ಅಧಿಕಾರಕ್ಕೆ ಬಂದರೆ ತಮಿಳುನಾಡನ್ನು ಆ ದೇವರು ಕೂಡ ರಕ್ಷಿಸಲಾರ ಎಂದು ರಜನಿ ಆಡಿದ್ದ ಮಾತಿನಿಂದ ಜಯಲಲಿತಾ ಹೀನಾಯವಾಗಿ ಸೋಲುಂಡಿದ್ದರು.
ಪವಾಡ ನಡೆದರೂ ಅಚ್ಚರಿಯಿಲ್ಲ
ಈಗ ಕೂಡ ರಜನಿ ರಾಜಕೀಯಕ್ಕೆ ಧುಮುಕಿ, ಒಂದು ವೇಳೆ ಬಿಜೆಪಿ ಸೇರಿದರೂ ಪವಾಡ ನಡೆದರೂ ಅಚ್ಚರಿಯಿಲ್ಲ. ಈ ಗಾಳಿಸುದ್ದಿ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷದ ನಾಯಕರಲ್ಲಿ ನಡುಗುವಂತೆ ಮಾಡಿದ್ದರೂ ಅಚ್ಚರಿಯಿಲ್ಲ. ಹೀಗೆ ಮಾಡಬೇಡಿ ಎಂದು ಅಮಿತಾಭ್ ಬಚ್ಚನ್ ರಜನಿಗೆ ಕಿವಿಮಾತು ಹೇಳಿದ್ದಾರಂತೆ.