ಎಂಜಿಆರ್, ಜಯಲಲಿತಾ ಸ್ಮಾರಕದಲ್ಲಿ ಮೋದಿ, ಅಮಿತ್ ಶಾ ಚಿತ್ರ
ಮದುರೈ, ಮಾರ್ಚ್ 23: ಮಾಜಿ ತಮಿಳುನಾಡು ಸಿ.ಎಂ, ದಿ. ಜಯಲಲಿತಾ ಹಾಗೂ ಎಂ.ಜಿ. ರಾಮಚಂದ್ರನ್ ಅವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕಗಳ ಒಳಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ ಬಿಜೆಪಿಯ ಹಲವು ಮುಖಂಡರ ಚಿತ್ರಗಳನ್ನು ಹಾಕಲಾಗಿದೆ.
ಜಯಲಲಿತಾ ಅವರ ಧೈರ್ಯ ಹಾಗೂ ತ್ಯಾಗಗಳನ್ನು ಜಗತ್ತಿಗೇ ಸಾರುವ ಸಲುವಾಗಿ ಈ ಸ್ಮಾರಕ ನಿರ್ಮಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಬಿ. ಉದಯ್ ಕುಮಾರ್ ತಿಳಿಸಿದ್ದು, ಬಿಜೆಪಿ ನಾಯಕರ ಚಿತ್ರಗಳನ್ನು ಸ್ಮಾರಕದ ಒಳಗೆ ಬಳಸಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.
"ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಜೆ.ಪಿ. ನಡ್ಡಾ ಆರೋಗ್ಯ ಸಚಿವರಾಗಿದ್ದಾಗ ಮದುರೈನಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣವಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಮದುರೈನವರಾಗಿರುವುದು ನಮಗೆ ಹೆಮ್ಮೆಯ ಸಂಗತಿ. ಹೀಗಾಗಿಯೇ ಎಂ.ಜಿ.ರಾಮಚಂದ್ರನ್ ಮತ್ತು ಜಯಲಲಿತಾ ಅವರ ಸ್ಮಾರಕದ ಒಳಗೆ ಬಿಜೆಪಿ ನಾಯಕರ ಫೋಟೊಗಳನ್ನು ಇಡಲಾಗಿದೆ" ಎಂದು ಹೇಳಿದರು.

ನಮ್ಮ ಚುನಾವಣಾ ಪ್ರಚಾರ ವೈಖರಿಯನ್ನು ಜನರು ಸ್ವಾಗತಿಸಿದ್ದಾರೆ. ಇಲ್ಲಿ ನಮಗೆ ಯಶಸ್ಸು ಸಿಗುವ ಭರವಸೆಯಿದೆ. ನಾಲ್ಕು ವರ್ಷಗಳಿಂದ ನಾನು ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಿದ್ದೆ ಎಂದು ಹೇಳಿದ್ದಾರೆ.
ಜಯಲಲಿತಾ ಅವರು 2016ರ ಡಿಸೆಂಬರ್ 5ರಂದು ನಿಧನರಾದರು. ಎಂಜಿಆರ್ 1987ರ ಡಿಸೆಂಬರ್ 24ರಂದು ನಿಧನರಾಗಿದ್ದರು. ಇವರಿಬ್ಬರ ಸ್ಮರಣಾರ್ಥ ಕುಮಾರ್ ಅವರ ನೇತೃತ್ವದಲ್ಲಿ ತಿರುಮಂಗಲಂ ಬಳಿಯ ಟಿ. ಕುನಥೂರಿನಲ್ಲಿ 12 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಇದೇ ಜನವರಿಯಿಂದ ಸ್ಮಾರಕವನ್ನು ತೆರೆಯಲಾಗಿದೆ.
ಏಪ್ರಿಲ್ 6ರಂದು ತಮಿಳುನಾಡಿನ 234 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಎಐಎಡಿಎಂಕೆ ಮೈತ್ರಿಯೊಂದಿಗೆ ಬಿಜೆಪಿ ಸ್ಪರ್ಧಿಸುತ್ತಿದೆ.












Click it and Unblock the Notifications