ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಮಂದಿ ಸಾವು
ಚೆನ್ನೈ, ಮಾರ್ಚ್ 21: ತಮಿಳುನಾಡಿನ ಪಟಾಕಿ ತಯಾರಿಕಾ ಘಟಕ ಹೊತ್ತಿ ಉರಿದಿದ್ದು 8 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ವೆಂಬಕೊಟ್ಟೈ ಬಳಿಯ ಚಿಪ್ಪಿಪ್ಪಾರೈ ನಲ್ಲಿ ಘಟನೆ ನಡೆದಿದೆ. ಇದು ಈ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಪ್ರಕರಣವಾಗಿದೆ. ಕಕ್ಕಿವಾದಂಪಟ್ಟಿ ಬಳಿ ಸಂಭವಿಸಿದ್ದ ಮೊದಲ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು.
ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕಾರ್ಖಾನೆಯ ಏಳು ಕೊಠಡಿಯ ಪೈಕಿ ಆರು ಬೆಂಕಿಗೆ ಸುಟ್ಟು ಕರಕಲಾಗಿವೆ.
ಬೆಂಕಿಯಲ್ಲಿ ಬೆಂದು ಹೋಗಿದ ಆರು ಮೃತದೇಹಗಳನ್ನು ಸಟ್ಟೂರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರನ್ನು ಗುರುತಿಸುವುದು ಕಷ್ಟಕರವಾಗಿದೆ.
ಅಕ್ರಮವಾಗಿ ಪಟಾಕಿ ತಯಾರಿಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಶ್ರೀ ರಾಜಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಸುವಾಗ ರಾಸಾಯನಿಕ ಮಿಶ್ರಣ ಕೊಠಡಿಯಲ್ಲಿ ಘರ್ಷಣೆ ಸಂಭವಿಸಿ ಬೆಂಕಿಯುಂಟಾಗಿದೆ. ಇದರಿಂದಾಗಿ ಸ್ಥಳದಲ್ಲೇ ಆರು ಮಂದಿ ಮಹಿಳೆಯರು ದುರ್ಮರಣ ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಸ್ಫೋಟದ ಸಂಬಂಧ ರಾಜಮ್ಮಲ್ ಪಟಾಕಿ ತಯಾರಿಕಾ ಕಾರ್ಖಾನೆ ಮಾಲೀಕ ಆರ್ ಗಣೇಶನ್ ವಿರುದ್ಧ ಪ್ರಕರಣ ದಾಖಲಾಗಿದೆ.