ಮುರುಗನನ್ನು 'ತಮಿಳು ದೈವ' ಎಂದು ಘೋಷಿಸಲು ಕೋರಿದ್ದ ಅರ್ಜಿ ವಜಾ
ಚೆನ್ನೈ, ಫೆಬ್ರವರಿ 11: ಮುರುಗನ್ ದೇವರನ್ನು 'ತಮಿಳಿನ ದೇವರು' ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ತಳ್ಳಿಹಾಕಿದೆ. ಈ ರೀತಿ ಘೋಷಣೆ ಹೊರಡಿಸಲು ಸೂಚಿಸಿದರೆ ದೇಶದ ಜಾತ್ಯತೀತ ಮತ್ತು ಒಕ್ಕೂಟ ಸ್ವರೂಪಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್ ಆನಂದಿ ಅವರಿದ್ದ ಪೀಠ ''ಸಂವಿಧಾನದ ಪ್ರಸ್ತಾವನೆ ದೇಶದ ಜಾತ್ಯತೀತ ಸ್ವರೂಪಕ್ಕೆ ಒತ್ತು ನೀಡುತ್ತದೆ. ಅರ್ಜಿಯಲ್ಲಿ ಕೋರಿದಂತೆ ಘೋಷಣೆ ಮಾಡುವುದರಿಂದ ಮಹಾನ್ ರಾಷ್ಟ್ರದ ಒಕ್ಕೂಟ ಮತ್ತು ಜಾತ್ಯತೀತ ಸ್ವರೂಪಕ್ಕೆ ಹಾನಿ ಉಂಟು ಮಾಡಿದಂತಾಗುತ್ತದೆ. ಮುರುಗ ತಮಿಳು ಭಾಷೆಯ ದೇವರು ಎಂದು ಹೇಳಲು ಅರ್ಜಿದಾರರಿಗೆ ಸಮರ್ಥನೀಯ ಕಾರಣ ಇರಬಹುದು. ಆದರೆ ಒಂದು ರಾಜ್ಯವಾಗಿ ಅಂತಹ ವಿನಂತಿಯನ್ನು ಪರಿಗಣಿಸಲು ಸಾಧ್ಯವಿಲ್ಲ "ಎಂದು ತಿಳಿಸಿದೆ.
"ತಮಿಳು ಭಾಷೆಯ ಏಕೈಕ ಪ್ರತಿನಿಧಿ ಎಂದು ಮುರುಗನನ್ನು ಗುರುತಿಸುವುದು ಸೂಕ್ತವಲ್ಲ" ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ.

ಮುರುಗನನ್ನು ತಮಿಳು ದೇವರೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿದ್ದ ಅರ್ಜಿದಾರರು, ಅಧಿಕೃತ ಗೆಜೆಟ್ನಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಚುನಾವಣೆ ಹಾಗೂ ಮುರುಗ:
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರವು ಥೈ ಪೂಸಮ್ ಇನ್ಮುಂದೆ ಸಾರ್ವಜನಿಕ ರಜೆ ದಿನ ಎಂದು ಘೋಷಿಸಿದೆ. ತಮಿಳುನಾಡು ಸೇರಿದಂತೆ ವಿಶ್ವದ ಹಲವೆಡೆ ತಮಿಳರು ಭಯಭಕ್ತಿಯಿಂದ ಆಚರಿಸುವ ಮುರುಗನ ಪೂಜೆ ಪುನಸ್ಕಾರಕ್ಕೆ ಮಹತ್ವ ನೀಡಲಾಗಿತ್ತು.
ಸಿಎಂ ಇಪಿಎಸ್ ಆದೇಶವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಸ್ವಾಗತಿಸಿದ್ದರು. ಎಲ್ ಮುರುಗನ್ ಅವರು ವೆಟ್ರಿ ವೇಲ್ ಯಾತ್ರೆ ನಡೆಸಿ, ಥೈ ಪೂಸಮ್ ದಿನವನ್ನು ಸಾರ್ವಜನಿಕ ರಜೆ ದಿನ ಎಂದು ಘೋಷಿಸುವಂತೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೀಮನ್ ಅವರ ನಾಮ್ ತಮಿಳರ್ ಕಚ್ಚಿ , ಹಿಂದು ಸಂಘಟನೆ ಹಿಂದು ಮಕ್ಕಳ್ ಕಚ್ಚಿ ಕೂಡಾ ಸಿಎಂ ಇಪಿಎಸ್ ಆದೇಶವನ್ನು ಸ್ವಾಗತಿಸಿದ್ದವು. ಈ ಬಾರಿ ಚುನಾವಣೆಯಲ್ಲಿ ಮುರುಗ ದೇವರನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಮುಂದಾಗಿವೆ.












Click it and Unblock the Notifications