ಆರ್.ಕೆ.ನಗರ ಉಪ ಚುನಾವಣೆಗೆ ಇ.ಮಧುಸೂದನ್ ಎಐಎಡಿಎಂಕೆ ಅಭ್ಯರ್ಥಿ
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಗುರುವಾರ ಎಐಎಡಿಎಂಕೆಯಿಂದ ಇ.ಮಧುಸೂದನ್ ಅವರ ಹೆಸರನ್ನು ಘೋಷಿಸಲಾಗಿದೆ. ಪಕ್ಷದ ಸಂಸದೀಯ ಮಂಡಳಿಯು ಚೆನ್ನೈನಲ್ಲಿ ಈ ತೀರ್ಮಾನ ಕೈಗೊಂಡಿದೆ.
ಈ ಮಂಡಳಿಯಲ್ಲಿ ಒ.ಪನ್ನೀರ್ ಸೆಲ್ವಂ ಹಾಗೂ ಎಡಪ್ಪಡಿ ಕೆ.ಪಳನಿಸ್ವಾಮಿ ಇದ್ದಾರೆ. ಮಧುಸೂದನ್ ರನ್ನು ಹೊರತುಪಡಿಸಿ ಮಾಜಿ ಸಚಿವರಾದ ಗೋಕುಲ ಇಂದಿರಾ, ಮಾಜಿ ಸಂಸದರಾದ ಎನ್.ಬಾಲಗಂಗಾ ಹೆಸರು ಸಹ ಕೇಳಿಬಂದಿತ್ತು. ಎ.ತಮಿಳ್ ಮಗನ್ ಹುಸೇನ್, ಅಧಿ ರಾಜಾರಾಮ್, ಆರ್.ಎಂ.ಡಿ.ರವೀಂದ್ರನ್ ಕೂಡ ಸ್ಪರ್ಧಿಸಲು ಉತ್ಸುಕರಾಗಿದ್ದರು.

2011ರಲ್ಲಿ ಒತ್ತಡ ತಂದಿದ್ದ ಶಶಿಕಲಾ ನಟರಾಜನ್ ನನಗೆ ಟಿಕೆಟ್ ತಪ್ಪಿಸಿದ್ದರು ಆದ್ದರಿಂದ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಮಧುಸೂದನ್ ವಾದ ಮಂಡಿಸಿದ್ದರು. ಪಕ್ಷದ ಬಗ್ಗೆ ಅವರಿಗಿರುವ ನಿಷ್ಠೆ ಮತ್ತು ರಾಜಕೀಯ ಅನುಭವವನ್ನು ಪರಿಗಣಿಸಿ, ಅವಕಾಶ ನೀಡಲಾಗಿದೆ.
ಡಿಎಂಕೆಯಿಂದ ಮರುದು ಗಣೇಶ್ ಗೇ ಟಿಕೆಟ್ ನೀಡಲಾಗಿದೆ. ಇನ್ನು ಟಿಟಿವಿ ದಿನಕರನ್ ಸ್ಪರ್ಧೆ ಕೂಡ ಖಚಿತವಾಗಿದೆ. ಡಿಸೆಂಬರ್ 21ರಂದು ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಪ್ರಕಟವಾಗಿದೆ.












Click it and Unblock the Notifications