ವಿದ್ಯಾರ್ಥಿಗಳ ಜೀವ ತೆಗೆದ ಕೊರೊನಾದಿಂದ ಸಿಕ್ಕ ರಜೆ
ಕೊಯಮತ್ತೂರು, ಮಾರ್ಚ್ 19: ಕೊರೊನಾವೈರಸ್ ಭೀತಿ ತಮಿಳುನಾಡಿನಲ್ಲಿ ವ್ಯಾಪಕವಾಗಿಲ್ಲವಾದರೂ, ಒಂದೆರಡು ಪ್ರಕರಣಗಳು ದಾಖಲಾಗಿವೆ. ಆದರೆ, ಕರ್ನಾಟಕದಂತೆ ತಮಿಳುನಾಡು ಸರ್ಕಾರ ಕೂಡಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ರಜೆಯ ಸದುಪಯೋಗ ಪಡಿಸಿಕೊಳ್ಳಲು ಹೊರಟ ಅರೆ ವೈದ್ಯಕೀಯ ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ರಜೆ ಇಲ್ಲದಿದ್ದರೆ ಕಾಲೇಜಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳು ಇಂದು ಹೆಣವಾಗಿ ಮಲಗಿದ್ದಾರೆ. ರಜೆ ಸಿಕ್ಕ ಖುಷಿಯಲ್ಲಿ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗಳಿದ್ದ ಇನ್ನೋವಾ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ 6 ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ವೋಲ್ವೋ ಬಸ್ ಹಾಗೂ ಕಂಟೈನರ್ ಲಾರಿ ಡಿಕ್ಕಿ ಸಂಭವಿಸಿ 17 ಮಂದಿ ಮೃತಪಟ್ಟ ಪ್ರದೇಶದಲ್ಲೇ ಈ ಅಪಘಾತವೂ ಸಂಭವಿಸಿದೆ.
ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿ ಎಂಬಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸಿಮೆಂಟ್ ತುಂಬಿದ್ದ ಲಾರಿಗೆ ವಿದ್ಯಾರ್ಥಿಗಳಿದ್ದ ವಾಹನ ಡಿಕ್ಕಿ ಹೊಡೆದಿದೆ.

ಕೊಯಮತ್ತೂರಿನಿಂದ 40 ಕಿಮೀ ದೂರದಲ್ಲಿರುವ ಅವಿನಾಶಿಯಲ್ಲಿ ಸಂಭವಿಸಿದ ಈ ದುರ್ಘಟನಾ ಸ್ಥಳಕ್ಕೆ ಕೊಯಮತ್ತೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications