ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ: ಕೇಜ್ರಿವಾಲ್-ಕಮಲ್
ಚೆನ್ನೈ, ಸೆಪ್ಟೆಂಬರ್ 21: ನಗರದಲ್ಲಿರುವ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ನಿವಾಸಕ್ಕೆ ಇಂದು ದೆಹಲಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅಚ್ಚರಿಯ ಭೇಟಿ ನೀಡಿದರು. ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯ ನಾಯಕರು 'ನಮ್ಮ ಹೋರಾಟ ಭಷ್ಟಾಚಾರದ ವಿರುದ್ಧ' ಎಂದು ಹೇಳಿದರು.
ಕಮಲ್ ಹಾಸನ್ ರಾಜಕೀಯ ಸೇರಲಿದ್ದಾರೆ ಎಂಬ ಗಾಳಿ ಸುದ್ದಿಗಳ ಮಧ್ಯೆಯೇ ಇಂದು ಅರವಿಂದ ಕೇಜ್ರಿವಾಲ್ ಚೆನ್ನೈನಲ್ಲಿ ಬಂದಿಳಿದರು. ಅವರನ್ನು ವಿಮಾನ ನಿಲ್ದಾಣಕ್ಕೆ ಬಂದು ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಸ್ವಾಗತಿಸಿ ಮನೆಗೆ ಕರೆದೊಯ್ದರು. ನಂತರ ಕಮಲ್ ಮತ್ತು ಕೇಜ್ರಿವಾಲ್ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿದರು.
ಇದಾದ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನಾಯಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ನಮ್ಮ ಅಜೆಂಡಾ ಎಂದು ಹೇಳಿದರು.
'ಅರವಿಂದ ಕೇಜ್ರಿವಾಲ್ ನನ್ನನ್ನು ಭೇಟಿಯಾಗಲು ಬಯಸಿದ್ದರು' ಎಂದು ಹೇಳಿದ ಕಮಲ್ ಹಾಸನ್, "ಅರವಿಂದ ಕೇಜ್ರಿವಾಲ್ ಅವರ ಭೇಟಿ ಖುಷಿ ತಂದಿದೆ. ಎಎಪಿ ಭ್ರಷ್ಟಾಚಾರದ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಅರವಿಂದ ಕೇಜ್ರಿವಾಲ್ ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಟ ನಡೆಸಿದ್ದಾರೆ. ಅವರಿಂದ ಬಹಳಷ್ಟನ್ನು ಕಲಿತುಕೊಳ್ಳಲು ನಾನು ಬಯಸುತ್ತೇನೆ," ಎಂದು ಕೇಜ್ರಿವಾಲ್ ಕಾರ್ಯವೈಖರಿಯನ್ನು ಕಮಲ್ ಶ್ಲಾಘಿಸಿದರು.
ಕೇಜ್ರಿವಾಲ್, 'ನಾನು ಕಮಲ್ ಹಸನ್ ಅವರ ಅಭಿಮಾನಿ' ಎಂದು ಇದೇ ಸಂದರ್ಭದಲ್ಲಿ ಹೇಳಿದರು. "ಭೇಟಿ ಅತ್ಯುತ್ತಮವಾಗಿತ್ತು. ನಾವು ನಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡೆವು. ಅವರು ರಾಜಕೀಯಕ್ಕೆ ಕಾಲಿಡಬೇಕು. ನಾವು ಇದೇ ರೀತಿ ಮುಂದಿನ ದಿನಗಳಲ್ಲಿಯೂ ಭೇಟಿಯಾಗಿ ಚರ್ಚಿಸುತ್ತೇವೆ," ಎಂದು ಕೇಜ್ರಿವಾಲ್ ಹೇಳಿದರು.
ಇನ್ನು ಭೇಟಿ ವೇಳೆ ಎಎಪಿ ಸೇರುವಂತೆ ಕಮಲ್ ಹಾಸನ್ ಗೆ ಕೇಜ್ರಿವಾಲ್ ಆಹ್ವಾನ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಉಭಯ ನಾಯಕರು ಯಾವುದೇ ಹೇಳಿಕೆ ನೀಡಿಲ್ಲ.