ರಾಜೀವ್ ಗಾಂಧಿ ಹತ್ಯೆ, ಕರುಣಾನಿಧಿ ಮತ್ತು ಕಾಂಗ್ರೆಸ್: ಏನೀ ಸಂಬಂಧ?
ಬೆಂಗಳೂರು, ಆಗಸ್ಟ್ 08: ಕರುಣಾನಿಧಿ ಬರೋಬ್ಬರಿ ಐದು ಬಾರಿ ತಮಿಳುನಾಡಿಗೆ ಮುಖ್ಯಮಂತ್ರಿ ಆಗಿದ್ದರು. ಅದರಲ್ಲಿ ಎರಡು ಬಾರಿ ಕೇಂದ್ರ ಸರ್ಕಾರವೇ ಬಲವಂತದಿಂದ ಅವರ ಅಧಿಕಾರ ಕಿತ್ತುಕೊಂಡಿತ್ತು.
ಹೌದು, ಮೊದಲಿಗೆ ಇಂದಿರಾ ಗಾಂಧಿ ಅವರು ಡಿಎಂಕೆ ಪಕ್ಷವನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿಸಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ಆ ನಂತರ ಪ್ರಧಾನಿ ಆಗಿದ್ದ ಚಂದ್ರಶೇಖರ್ ಅವರು ಕರುಣಾನಿಧಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು.
ಎರಡನೇ ಬಾರಿ ಕರುಣಾನಿಧಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲವಾದರೂ ಪ್ರಧಾನಿ ಚಂದ್ರಶೇಖರ್ ಅವರಿಗೆ ಬಾಹ್ಯ ಬೆಂಬಲ ನೀಡಿತ್ತು.

ಎಲ್ಟಿಟಿ ಉಗ್ರರೊಂದಿಗೆ ಸಂಭಂಧ!
ಕರುಣಾನಿಧಿ ಅವರ ಸರ್ಕಾರ ಎಲ್ಟಿಟಿಇ ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದೆ. ಡಿಎಂಕೆ ಪಕ್ಷ ಎಲ್ಟಿಟಿಇ ಕೇಂದ್ರ ಕಚೇರಿಯೊಂದಿಗೆ ಸಂಪರ್ಕ ಹೊಂದಿದೆ, ಇದು ಅತ್ಯಂತ ಅಪಾಯಕಾರಿ ಎಂದು ಹೇಳಿದ್ದ ಚಂದ್ರಶೇಖರ್ ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಿದ್ದರು.

ವಜಾ ಆದ ನಾಲ್ಕೇ ತಿಂಗಳಲ್ಲಿ ರಾಜೀವ್ ಹತ್ಯೆ
ಸರ್ಕಾರವನ್ನು ವಜಾ ಗೊಳಿಸಿದ ಎರಡೇ ತಿಂಗಳಿಗೆ ಅದೇ ಎಲ್ಟಿಟಿಇ ಉಗ್ರರು ತಮಿಳುನಾಡಿನಲ್ಲೇ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದರು. ಅದರ ಆರೋಪ ಕರುಣಾನಿಧಿ ಅವರ ಡಿಎಂಕೆ ಪಕ್ಷದ ಮೇಲೆ ಬಲವಾಗಿಯೇ ಕೇಳಿ ಬಂದಿತ್ತು.

ಕರುಣಾನಿಧಿ ಮೇಲೆ ಆರೋಪ
ತಮ್ಮ ಸರ್ಕಾರವನ್ನು ವಜಾ ಮಾಡಿದ್ದಕ್ಕೆ ಕರುಣಾನಿಧಿ ಅವರೇ ಎಲ್ಟಿಟಿಇ ಬೆನ್ನಿಗೆ ನಿಂತು ಈ ಹತ್ಯೆ ಮಾಡಿದ್ದಾರೆ, ರಾಜೀವ್ ಹತ್ಯೆಗೆ ಕರುಣಾನಿಧಿ ಕುಮ್ಮಕ್ಕೇ ಕಾರಣ ಎಂಬ ಸುದ್ದಿ ಭಾರಿ ಜೊರಾಗಿ ಹರಿದಾಡಿತು.

ಪಾತಾಳಕ್ಕಿಳಿದ ಡಿಎಂಕೆ ಪಕ್ಷ
ರಾಜೀವ್ ಗಾಂಧಿ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಗೆಲ್ಲಲುಸ ಸಾಧ್ಯವಾಗಿದ್ದು ಕೇವಲ 2 ಸೀಟುಗಳನ್ನು ಮಾತ್ರ. ಕೆಲವೇ ತಿಂಗಳುಗಳ ಹಿಂದೆ ಅಧಿಕಾರದಲ್ಲಿದ್ದ ಪಕ್ಷವನ್ನು ನಾಲ್ಕು ತಿಂಗಳಲ್ಲಿ ಜನ ಮಣ್ಣು ಮುಕ್ಕಿಸಿಬಿಟ್ಟರು ಇದಕ್ಕೆ ಕಾರಣ ರಾಜೀವ್ ಹತ್ಯೆ ಮತ್ತು ಅದರ ಜೊತೆ ತಳುಕು ಹಾಕಿಕೊಂಡ ಡಿಎಂಕೆ ಹೆಸರು.

ಭವಿಷ್ಯಕ್ಕೆ ಮಾತ್ರವೇ ಪ್ರಾಧಾನ್ಯತೆ
ಆದರೆ ಈಗ ಅದೆಲ್ಲಾ ಇತಿಹಾಸ, ರಾಜೀವ್ ಗಾಂಧಿ ಮಗ ರಾಹುಲ್ ಗಾಂಧಿ ಮೊನ್ನೆಯಷ್ಟೆ ಕರುಣಾನಿಧಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಈ ಮುಂಚೆ ಸೋನಿಯಾ ಗಾಂಧಿ ಅವರೇ ಕರುಣಾನಿಧಿಗೆ ನಡುಬಾಗಿಸಿ ಕೈ ಮುಗಿದಿದ್ದರು. ರಾಜಕೀಯದಲ್ಲಿ ಇತಿಹಾಸಕ್ಕೆ ಜಾಗವಿಲ್ಲ, ಭವಿಷ್ಯಕ್ಕೆ ತಕ್ಕಂತೆ ವರ್ತಮಾನದಲ್ಲಿ ವರ್ತಿಸಲಾಗುತ್ತದೆ ಎಂಬುದಕ್ಕೆ ರಾಜೀವ್ ಗಾಂಧಿ ಹತ್ಯೆ, ಕರುಣಾನಿಧಿ ಮತ್ತು ಕಾಂಗ್ರೆಸ್ ಅತ್ಯುತ್ತಮ ಉದಾಹರಣೆ.












Click it and Unblock the Notifications