ತಮಿಳುನಾಡು ಜನರಿಗಾಗಿ ಮುಖ್ಯಮಂತ್ರಿಯಾಗುತ್ತೇನೆ : ಕಮಲ್ ಹಾಸನ್
ಚೆನ್ನೈ, ಸೆಪ್ಟೆಂಬರ್ 22: ಖ್ಯಾತ ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ. ತಮಿಳುನಾಡಿನ ಜನರಿಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ: ಕೇಜ್ರಿವಾಲ್-ಕಮಲ್
'ಇಂಡಿಯಾ ಟುಡೇ' ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಕಮಲ್ ಹಾಸನ್ ತಮ್ಮ ರಾಜಕೀಯ ಪ್ರವೇಶದ ಹಾದಿ, ಸಿದ್ಧಾಂತ ಮುಖ್ಯಮಂತ್ರಿಯಾಗುವ ಬಯಕೆ ಮೊದಲಾದವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
'ರಾಜಕೀಯವನ್ನು ಪ್ರವೇಶಿಸುವುದೆಂದರೆ ಮುಳ್ಳಿನ ಕಿರೀಟವನ್ನು ಧರಿಸಿದಂತೆ' ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಎಎಪಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾದ ನಂತರ ಅವರು ತಮ್ಮ ರಾಜಕೀಯ ಪ್ರವೇಶವನ್ನು ದೃಢೀಕರಿಸಿದ್ದಾರೆ.
"ಎಡಪಂಥ ಮತ್ತು ಬಲಪಂಥದಲ್ಲಿ ಯಾವುದನ್ನು ಆಯ್ದಕೊಳ್ಳುತ್ತೀರಿ ಎಂದಿದ್ದಕ್ಕೆ, ಜನರು ಎಡ ಬಲದ ಬಗ್ಗೆಯಾಗಲೀ ಸಿದ್ಧಾಂತಗಳ ಬಗ್ಗೆಯಾಗಲೀ ಆಸಕ್ತರಾಗಿಲ್ಲ. ನೀವು ಜನರ ಬಗ್ಗೆ, ಜನರ ಕಾಳಜಿಯ ಬಗ್ಗೆ ಗಮನ ಹರಿಸಿದರೆ ಸಿದ್ಧಾಂತ ತನ್ನಿಂದ ತಾನಾಗಿಯೇ ಹುಟ್ಟಿಕೊಳ್ಳುತ್ತದೆ," ಎಂದಿದ್ದಾರೆ.
ಡಿಎಂಕೆ ಮುಖವಾಣಿಗೆ 75: ವೇದಿಕೆಯಲ್ಲಿ ಕಮಲ್, ಪ್ರೇಕ್ಷಕರ ನಡುವೆ ರಜನಿ
ನನ್ನ ರಾಜಕೀಯದ ಬಣ್ಣ ಕಪ್ಪು ಎಂದು ಹೇಳಿರುವ ಕಮಲ್ ಹಾಸನ್, ಕಪ್ಪು ಬಣ್ಣ ಕೇಸರಿಯನ್ನೂ ಸೇರಿ ಎಲ್ಲಾ ಬಣ್ಣವನ್ನು ಒಳಗೊಂಡಿರುತ್ತದೆ ಎಂದು ವಿವರಣೆ ನೀಡಿದ್ದಾರೆ.
ಸದ್ಯದ ರಾಜಕೀಯದ ಬಗ್ಗೆ ಇರುವ ಕುಚೋದ್ಯ ಮತ್ತು ರಾಜಕೀಯವನ್ನು ವಾಸಯೋಗ್ಯವಾಗಿಸಲು ಯಾರಾದರೂ ಶ್ರಮಿಸಲೇಬೇಕಾಗಿದೆ ಎಂದು ಕಮಲ್ ಇದೇ ವೇಳೆ ಒತ್ತಿ ಹೇಳಿದ್ದಾರೆ.
"ನಾನು ರಾಜಕೀಯಕ್ಕೆ ಧುಮುಕುವುದಕ್ಕೆ ಮೊದಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ನಾನು ಜನರನ್ನು ಭೇಟಿಯಾಗುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಅವರಿಗೆ ಮಾರ್ಗಸೂಚಿ ನೀಡುತ್ತೇನೆ" ಎಂದು ಹಾಸನ್ ಹೇಳಿದ್ದಾರೆ.
ತಾನು ಜನರಿಗೆ ಯಾವುದೇ ಪರಿಹಾರದ ಭರವಸೆಗಳನ್ನು ನೀಡುವುದಿಲ್ಲ. ಆದರೆ ಬದಲಾವಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸುವ ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದಾರೆ.