ಮತ್ತೊಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ 'ಎಲೆಕ್ಷನ್ ಕಿಂಗ್'
ಚೆನ್ನೈ, ನವೆಂಬರ್ 29 : ಎಲ್ಲಾ ಚುನಾವಣೆಗೂ ಸ್ಪರ್ಧಿಸುವ ಮೂಲಕ ಎಲೆಕ್ಷಿನ್ ಕಿಂಗ್ ಎಂದು ಖ್ಯಾತಿ ಪಡೆದಿರುವ ಕೆ.ಪದ್ಮರಾಜನ್ ಮತ್ತೊಂದು ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.
ಡಿಸೆಂಬರ್ 21ರಂದು ನಡೆಯುವ ಆರ್.ಕೆ.ನಗರ ಉಪ ಚುನಾವಣೆಗೂ ಕೆ.ಪದ್ಮರಾಜನ್ ನಾಮಪತ್ರ ಸಲ್ಲಿಸಿದ್ದಾರೆ. ಜಯಲಲಿತಾ ಅವರ ನಿಧನದಿಂದಾಗಿ ಈ ಕ್ಷೇತ್ರ ತೆರವಾಗಿದ್ದು, ಚುನಾವಣೆ ನಡೆಯುತ್ತಿದೆ.

ರಾಷ್ಟ್ರಪತಿ ಚುನಾವಣೆಗೂ ನಾಮಪತ್ರ ಸಲ್ಲಿಸಿದ್ದ ಚೆನ್ನೈ ಮೂಲದ ಕೆ.ಪದ್ಮರಾಜನ್ ಇದುವರೆಗೂ 183 ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಯಾವುದರಲ್ಲಿಯೂ ಗೆಲುವು ಸಾಧಿಸಿಲ್ಲ.
ಕಳೆದ ಬಾರಿ ತಿರುಚ್ಚಿ ಉಪ ಚುನಾವಣೆಗೂ ಸ್ಪರ್ಧಿಸಿದ್ದ ಪದ್ಮರಾಜನ್ ಕೇವಲ 430 ಮತಗಳನ್ನು ಪಡೆದಿದ್ದರು. ಚುನಾವಣೆಗೆ ಸ್ಪರ್ಧಿಸುವ ಮೂಲಕ ಎಲೆಕ್ಷನ್ ಕಿಂಗ್ ಎಂದು ಅವರು ಪ್ರಸಿದ್ಧಿಯಾಗಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿಯೂ ಇವರ ದಾಖಲೆ ಸೇರ್ಪಡೆಯಾಗಿದೆ.
1991ರಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ನರಸಿಂಹರಾವ್ ವಿರುದ್ಧ ಕೆ.ಪದ್ಮರಾಜನ್ ನಾಮಪತ್ರ ಸಲ್ಲಿಸಿದ್ದರು. ಆಗ ಅವರ ಮೇಲೆ ಹಲ್ಲೆ ನಡೆದಿತ್ತು. ನಾಮಪತ್ರವನ್ನು ವಾಪಸ್ ಪಡೆದಿದ್ದರು.
ಕೆ.ಪದ್ಮರಾಜನ್ ರಾಷ್ಟ್ರಪತಿ ಚುನಾವಣೆಗೂ ನಾಪತ್ರ ಸಲ್ಲಿಸಿದ್ದಾರೆ. ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್ ವಿರುದ್ಧವೂ ನಾಮಪತ್ರ ಸಲ್ಲಿಕೆ ಮಾಡಿದ್ದರು. ಜಯಲಲಿತಾ, ಕರುಣಾನಿಧಿ ಅವರ ವಿರುದ್ಧವೂ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ.












Click it and Unblock the Notifications