ಕೆ ಅಣ್ಣಾಮಲೈಗೆ ಮಹತ್ವದ ಜವಾಬ್ದಾರಿ ಕೊಟ್ಟ ಬಿಜೆಪಿ
ಚೆನ್ನೈ, ಆ. 30: ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದು ರಾಜಕೀಯ ರಂಗ ಪ್ರವೇಶಿಸಿದ್ದು ಎಲ್ಲರಿಗೂ ತಿಳಿದಿರಬಹುದು. ಕರ್ನಾಟಕದಲ್ಲಿ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. ಪಕ್ಷ ಸೇರಿದ ಕೆಲ ದಿನಗಳಲ್ಲೇ ಬಿಜೆಪಿ ಹೈಕಮಾಂಡ್ ನಿಂದ ಅಣ್ಣಾಮಲೈಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ತಮಿಳುನಾಡಿನ ಕರೂರು ಮೂಲದ ಕೆ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿ, ಹೈಕಮಾಂಡ್ ಆದೇಶಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಲ್ ಮುರುಗನ್ ಹೇಳಿದ್ದಾರೆ.
ಆಗಸ್ಟ್ 25ರಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಸಮ್ಮುಖದಲ್ಲಿ ಅಣ್ಣಾಮಲೈ ಅವರು ಅಧಿಕೃತವಾಗಿ ಬಿಜೆಪಿ ಸೇರಿದ್ದರು.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರು 2019ರ ಮೇ 28ರಂದು ಐಜಿ- ಡಿಜಿಪಿ ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ಕಳಿಸಿ ಐಪಿಎಸ್ ಹುದ್ದೆ ತೊರೆದಿದ್ದರು. 2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.

ತಮಿಳುನಾಡಿನ ಕರೂರು ಮೂಲದವರಾದ ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದ ಬಳಿಕ ಸ್ವಗ್ರಾಮಕ್ಕೆ ತೆರಳಲಿದ್ದರು. ಸ್ನೇಹಿತರು, ಆಪ್ತರ ಜೊತೆ ಕೆಲಕಾಲ ಕಳೆದು ಬಿಜೆಪಿ ಸೇರುವ ಬಗ್ಗೆ ನಿರ್ಧಾರ ಪ್ರಕಟಿಸಿದರು. ನಾನು ತಾವು ಸ್ವಾಭಾವಿಕವಾಗಿಯೇ ಬಿಜೆಪಿಗೆ ಹೊಂದಿಕೊಳ್ಳುವುದಾಗಿ ಹೇಳಿಕೊಂಡಿದ್ದರು. 2021ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications