ಮಂಗಳವಾರದ ತನಕ 'ಅಮ್ಮ'ನಿಗೆ ಜೈಲೇ ಗತಿ
ಬೆಂಗಳೂರು, ಅ. 1 : ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 7, ಮಂಗಳವಾರ ನಡೆಯಲಿದೆ. ಬಕ್ರೀದ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದರಿಂದ ಜಯಾ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಹೋಗಿದೆ.
ಬುಧವಾರ ಬೆಳಗ್ಗೆ ಜಯಾ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ರಜಾಕಾಲ ಪೀಠದ ನ್ಯಾಯಮೂರ್ತಿ ರತ್ನಕಲಾ ಅವರು ವಿಚಾರಣೆಯನ್ನು ಸೋಮವಾರಕ್ಕೆ ಮುಂದಕ್ಕೆ ಹಾಕಿ ಆದೇಶ ಹೊರಡಿಸಿದ್ದರು. ಆದರೆ ರಾಜ್ಯ ಸರ್ಕಾರ ಸೋಮವಾರ ರಜೆ ಘೋಷಣೆ ಮಾಡಿರುವುದುರಿಂದ ಜಯಲಲಿತಾ ಮತ್ತು ತಮಿಳುನಾಡು ಜನ ಮಂಗಳವಾರದವರೆಗೂ ಕಾಯಬೇಕಾಗಿದೆ.

ಬುಧವಾರ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಧೀಶೆ ರತ್ನಕಲಾ, ಈ ಅರ್ಜಿ ವಿಚಾರಣೆಯನ್ನು ಸಾಮಾನ್ಯ ಪೀಠವೇ ನಡೆಸಬೇಕು. ರಜಾಕಾಲದ ಪೀಠದಿಂದ ಸಂಪೂರ್ಣ ವಿಚಾರಣೆ ಸಾಧುವಲ್ಲ ಎಂದು ಅಭಿಪ್ರಾಯಪಟ್ಟರು. (ಸರ್ಕಾರಿ ನೌಕರರಿಗೆ ಅ.6ರಂದು ಬಕ್ರೀದ್ ರಜೆ)
ಸೆ.30 ರಂದು ಗೈರು ಹಾಜರಾಗಿದ್ದ ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್ ಕೂಡ ಬುಧವಾರದ ಕಲಾಪದಲ್ಲಿ ಪಾಲ್ಗೊಂಡಿದ್ದರು. ಆದರೆ ಜಯಾ ಪರ ವಕೀಲ ರಾಮ್ ಜೇಠ್ಮಲಾನಿ ಅವರಿಗೆ ವಾದ ಮಾಡಲು ಅವಕಾಶವೇ ಸಿಗಲಿಲ್ಲ.
ಜಯಲಲಿತಾ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ವಕೀಲರು ಬೆಂಗಳೂರು ಹೈಕೋರ್ಟ್ ಆವರಣದಲ್ಲಿ ಜಮಾವಣೆಗೊಂಡಿದ್ದರು. ಅತ್ತ ತಮಿಳುನಾಡಿನಿಂದ ಜಯಲಲಿತಾ ಭೇಟಿಗೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಮ್ಮ ವಿಮಾನದ ಟಿಕೆಟ್ ರದ್ದುಗೊಳಿಸಿದ್ದರು.












Click it and Unblock the Notifications