ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಜಯಲಲಿತಾ ಅವರ ಸಾವಿನಲ್ಲಿ ರಹಸ್ಯವಾಗಿ ಉಳಿದ ಹಲವು ಪ್ರಶ್ನೆಗಳನ್ನು ಎಐಎಡಿಎಂಕೆ ಮುಖಂಡ ಪಿಎಚ್ ಪಾಂಡಿಯನ್ ಗುರುವಾರ ಎತ್ತಿದ್ದಾರೆ. ಅವುಗಳಿಗೆ ಉತ್ತರವೂ ಅವರ ಪ್ರಶ್ನೆಯಲ್ಲಿ ಬೊಟ್ಟು ಮಾಡಿ ತೋರುತ್ತಿದೆ
ಚೆನ್ನೈ, ಮಾರ್ಚ್ 2: ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ಜೆ.ಜಯಲಲಿತಾ ಅವರು ದಾಖಲಾಗಿದ್ದು ಪೋಯಸ್ ಗಾರ್ಡನ್ ನ ಅವರ ಮನೆಯಲ್ಲಿ ತಳ್ಳಿ ಬೀಳಿಸಿದ್ದ ಕಾರಣಕ್ಕೆ ಎಂದು ಎಐಎಡಿಎಂಕೆ ಮುಖಂಡ ಮತ್ತು ತಮಿಳುನಾಡಿನ ಮಾಜಿ ಸ್ಪೀಕರ್ ಪಿಎಚ್ ಪಾಂಡಿಯನ್ ಮತ್ತೆ ಗುರುವಾರ ಆರೋಪಿಸಿದ್ದಾರೆ.
ಅಮ್ಮ (ಜಯಲಲಿತಾ) ಅವರನ್ನು ಯಾರೋ ತಳಿದ್ದರಿಂದ ಕೆಳಗೆ ಬಿದ್ದಿದ್ದರು. ಆ ನಂತರ ಅವರಿಗೆ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಆಂಬುಲೆನ್ಸ್ ಗೆ ಕರೆ ಮಾಡಿದರು, ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮನೆಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದಾರೆ.
ಜಯಲಲಿತಾ ಅವರು ಅಪೋಲೋ ಆಸ್ಪತ್ರೆಗೆ ದಾಖಲಾದ ನಂತರ ಅಲ್ಲಿನ ಇಪ್ಪತ್ತೇಳು ಸಿಸಿಟಿವಿ ಕ್ಯಾಮೆರಾವನ್ನು ತೆಗೆಯಲಾಯಿತು. ಏಕೆ ಹಾಗೆ ಮಾಡಲಾಯಿತು ಎಂಬುದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ವಿವರಣೆ ನೀಡಬೇಕು ಎಂದು ಅವರು ಹೇಳಿದರು. ಜಯಲಲಿತಾ ಅವರು ಮೃತಪಟ್ಟಿದ್ದು ಡಿಸೆಂಬರ್ 4ರ ಸಂಜೆ 4.30ಕ್ಕೆ. ಆದರೆ ಆಸ್ಪತ್ರೆಯಿಂದ ಸಾವಿನ ಸುದ್ದಿ ಘೋಷಿಸಿದ್ದು ಡಿಸೆಂಬರ್ 5ರಂದು.[ಕೇಂದ್ರ ಸರ್ಕಾರ ಜಯಾ ಸಾವಿನ ತನಿಖೆ ನಡೆಸಲಿ: ಪನ್ನೀರ್ ಸೆಲ್ವಂ ಆಗ್ರಹ]
ಜಯಲಲಿತಾ ಅವರ ಚಿಕಿತ್ಸೆಯನ್ನು ನಿಲ್ಲಿಸುವಂತೆ ಸೂಚಿಸಿದ ಅವರ ಕುಟುಂಬ ಸದಸ್ಯರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕೂಡ ಒತ್ತಾಯಿಸಿದರು. ಈ ಮಾಹಿತಿ ನಿಮಗೆ ಹೇಗೆ ದೊರೆಯಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನದೇ ಮೂಲಗಳಿವೆ. ನಾನೇ ಸ್ವತಃ ತನಿಖೆ ಮಾಡಿದ್ದೇನೆ ಎಂದರು.
ಅಮ್ಮನಿಗೆ ನೀಡಿದ ಚಿಕಿತ್ಸೆ ಬಗ್ಗೆಯೇ ಹಲವು ಅನುಮಾನಗಳಿವೆ. ಅವರು ಮುಖ್ಯಮಂತ್ರಿ ಆಗಿದ್ದರಿಂದ ಎಸ್ ಪಿಜಿ ರಕ್ಷಣೆ ಅವರಿಗಿತ್ತು. ಎಸ್ ಪಿಜಿ ಕಾಯ್ದೆ ಪ್ರಕಾರ ಅವರಿಗೆ ನೀಡುತ್ತಿದ್ದ ಆಹಾರವನ್ನು ಪರೀಕ್ಷಿಸಲಾಗಿತ್ತಿತ್ತೇ? ಅವರನ್ನು ಯಾಕೆ ಆಸ್ಪತ್ರೆ ಒಳಗೆ ಬಿಡಲಿಲ್ಲ ಎಂದು ಪಾಂಡಿಯನ್ ಪ್ರಶ್ನಿಸಿದರು.
ಅಪೋಲೋ ಆಸ್ಪತ್ರೆಯಲ್ಲೇ ಹಲವು ವೈದ್ಯರಿದ್ದಾರೆ. ಆದರೂ ಸಿಂಗಾಪೂರ್ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿದ್ದು ಏಕೆ? ಮೂರು ಸ್ಥಾನಗಳ ಉಪಚುನಾವಣೆಗಾಗಿ ಎಐಎಡಿಎಂಕೆ ಅಭ್ಯರ್ಥಿಗಳ ಎ ಹಾಗೂ ಬಿ ಫಾರಂಗೆ ಜಯಲಲಿತಾ ಅವರ ಹೆಬ್ಬೆಟ್ಟಿನ ಗುರುತು ಪಡೆಯಲಾಗಿದೆ. ಅದರ ಹೊರತಾಗಿ ಬೇರೆ ದಾಖಲೆಗಳಿಗೂ ಹೆಬ್ಬೆಟ್ಟಿನ ಗುರುತು ಪಡೆಯಲಾಗಿದೆಯಾ? ವೈದ್ಯರು ಅಥವಾ ಆಕೆ ಜತೆಗಿದ್ದವರು ಇದಕ್ಕೆ ಉತ್ತರಿಸಲಿ ಎಂದರು ಪಾಂಡ್ಯನ್.[ಜಯಲಲಿತಾ ಸಾವಿನ ತನಿಖೆ ಆರಂಭವಾಗಿದೆ: ಪನ್ನೀರ್ ಸೆಲ್ವಂ]
ಜೂನ್ 2015ರಲ್ಲಿ ಪ್ಯಾರಾ-ಆಂಬುಲೆನ್ಸ್ ಹೆಲಿಕಾಪ್ಟರ್ ಆಕೆಯನ್ನು ಸಿಂಗಾಪೂರ್ ಗೆ ಕರೆದೊಯ್ಯಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಯುತ್ತಿತ್ತು. ಆದರೆ ಅಮ್ಮ ಚಿಕಿತ್ಸೆಗೆ ತೆರಳದಂತೆ ತಡೆದವರು ಯಾರು ಎಂದು ಅವರು ಪ್ರಶ್ನಿಸಿದರು.