'ಅಮ್ಮನಿಗೆ ಏನೂ ಆಗಿಲ್ಲ, ನಮ್ಮನ್ನು ಬಿಟ್ಟು ಹೇಗೆ ಹೋಗ್ತಾರೆ?'
ಬಿಕ್ಕಿಬಿಕ್ಕಿ ಅಳುತ್ತಿರುವ ಕಟ್ಟಾ ಅಭಿಮಾನಿಗಳು, ಪಕ್ಷದ ಸದಸ್ಯರು, ರಾಜಕಾರಣಿಗಳು, ಪ್ರಧಾನಿ, ರಾಷ್ಟ್ರಪತಿ.... ಎಲ್ಲರೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಶೀಘ್ರ ಗುಣವಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಚೆನ್ನೈ, ಡಿಸೆಂಬರ್ 04 : ಬಿಕ್ಕಿಬಿಕ್ಕಿ ಅಳುತ್ತಿರುವ ಕಟ್ಟಾ ಅಭಿಮಾನಿಗಳು, ಪಕ್ಷದ ಸದಸ್ಯರು, ರಾಜಕಾರಣಿಗಳು, ಪ್ರಧಾನಿ, ರಾಷ್ಟ್ರಪತಿ.... ಎಲ್ಲರೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಶೀಘ್ರ ಗುಣವಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಅವರ ಆರೋಗ್ಯ ಸುಧಾರಿಸಲೆಂದು, ಮತ್ತೆ ಚೇತರಿಸಿಕೊಳ್ಳಲೆಂದು ಪ್ರಾರ್ಥನೆಗಳ ಸುರಿಮಳೆಯೇ ಸುರಿಯುತ್ತಿದೆ.
"ಅಮ್ಮನಿಗೆ ಏನೂ ಆಗಿಲ್ಲ, ಅಮ್ಮ ಚೆನ್ನಾಗೇ ಇದ್ದಾರೆ. ನಮಗಾಗಿ ವಾಪಸ್ ಬಂದೇ ಬರ್ತಾರೆ. ಅವರು ನಮ್ಮ ತಾಯಿ, ಅವರೇ ನಮ್ಮ ನಾಯಕಿ. ಅವರಿಗೆ ಏನೂ ಆಗುವುದಿಲ್ಲ" ಎಂದು ಅಪೋಲೋ ಆಸ್ಪತ್ರೆಗೆ ಬಂದಿರುವ ಜಯಲಲಿತಾ ಅವರ ಅಭಿಮಾನಿಯೊಬ್ಬ ಹೇಳುತ್ತ ಕಂಬನಿ ಮಿಡಿದಿದ್ದಾನೆ.

"ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಆಕೆಗೆ ಬೆಂಬಲವಾಗಿ ನಿಂತಿದ್ದೇವೆ. ನಮ್ಮನ್ನು ಹೀಗೆಯೇ ಬಿಟ್ಟು ಅವರು ಹೇಗೆ ಹೋಗುತ್ತಾರೆ. ಅವರಿಗೆ ಅಂಥದ್ದೇನೂ ಆಗಿಲ್ಲ. ಮುಂಜಾನೆ ಹೊತ್ತಿಗೆ ಸರಿಹೋಗುತ್ತಾರೆ" ಎಂದು ಹೃದಯಾಘಾತಕ್ಕೊಳಗಾಗಿರುವ ಜಯಲಲಿತಾ ಬಗ್ಗೆ ಮತ್ತೊಬ್ಬ ಅಭಿಮಾನಿ ಭಾವುಕನಾಗಿ ನುಡಿದಿದ್ದಾನೆ.
ಅಪೋಲೋ ಆಸ್ಪತ್ರೆಯ ಎದುರಿಗೆ ನೆರೆದಿರುವ ಸಹಸ್ರಾರು ಅಭಿಮಾನಿಗಳು ಕಣ್ಣೀರುಗರೆಯುತ್ತಲೇ, ಅಮ್ಮನನ್ನು ಹುಷಾರಾಗಿ ಮಾಡುಪ್ಪಾ ಅಂತ ಪರಿಪರಿಯಾಗಿ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಅಮ್ಮ ಇನ್ನೇನು ಹುಷಾರಾಗಿ ಮನೆಗೆ ಮರಳುತ್ತಾರೆ ಎಂದು ಆನಂದದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹೃದಯಾಘಾತದ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.
ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸಂಗತಿಯನ್ನು ಕೂಡ ತಿಳಿಯಲು ಅಭಿಮಾನಿಗಲು ನಿರಾಕರಿಸುತ್ತಿದ್ದಾರೆ. ನಮಸ್ಯೆ ಇನ್ನೇನು ಕಾದಿದೆಯೋ ಎಂದು ಹೃದಯ ಗಟ್ಟಿಯಾಗಿ ಹಿಡಿದುಕೊಂಡು ಅಭಿಮಾನಿಗಳು ಊಟನಿದ್ದೆ ಬಿಟ್ಟು ಆಸ್ಪತ್ರೆಯೆದಿರು ಕಾಯುತ್ತಿದ್ದಾರೆ.
ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿ ನೋವಾಗಿದೆ, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಟ್ವೀಟ್ ಮಾಡಿದ್ದಾರೆ. ಹಾಗೆಯೆ, ಜಯಲಲಿತಾ ಬಗ್ಗೆ ಟ್ವೀಟ್ ಗಳ ಮಳೆ ಸುರಿಯುತ್ತಿದೆ. ಎಲ್ಲೆಲ್ಲೂ ಆತಂಕದ ಕಾರ್ಮೋಡ ಕವಿದಿದೆ.












Click it and Unblock the Notifications