ತಮಿಳುನಾಡು ಜನರಿಗೆ ಅಮ್ಮಾ ಮಿನರಲ್ ವಾಟರ್
ಚೆನ್ನೈ, ಸೆ.15 : ಅಮ್ಮ ಕ್ಯಾಂಟೀನ್ ಮೂಲಕ ರಾಜ್ಯದ ಜನರಿಗೆ ಅಗ್ಗದ ದರದಲ್ಲಿ ಇಡ್ಲಿ, ಅನ್ನ-ಸಾಂಬಾರ್ ನಿಡುತ್ತರುವ ತಮಿಳುನಾಡು ಸಿಎಂ ಜಯಲಲಿತಾ, ಭಾನುವಾರದಿಂದ ರಾಜ್ಯದ ಜನರಿಗೆ ಅಮ್ಮಾ ಮಿನರಲ್ ವಾಟರ್ ಕುಡಿಸಲಿದ್ದಾರೆ. ಅದು ಲೀ.ಗೆ ಕೇವಲ 10 ರೂ. ದರದಲ್ಲಿ.
ತಿರುವಲ್ಲೂರು ಜಿಲ್ಲೆಯ ಗುಮ್ಮಿಡಿಪೂಂಡಿಯಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಇದನ್ನು ಸಿಎಂ ಜಯಲಲಿತಾ ಭಾನುವಾರ ಉದ್ಘಾಟಿಸಲಿದ್ದಾರೆ. ಈ ಯೋಜನೆಯಿಂದ ರಾಜ್ಯದ ಜನರಿಗೆ ಅಗ್ಗದ ದರದಲ್ಲಿ ಶುದ್ಧ ಕುಡಿಯುವ ನೀರು ದೊರೆಯುಲಿದೆ.
ತಮಿಳುನಾಡಿನಲ್ಲಿ ರೈಲ್ವೆ ಸರಬರಾಜು ಮಾಡುವ ಬಾಟಲ್ ನೀರಿಗೆ 1 ಲೀಟರ್ ಗೆ 15 ರೂ. ದರವಿದೆ. ಖಾಸಗಿ ಕಂಪನಿಗಳು ವಿತರಿಸುವ ನೀರಿನ ಬಾಟಲ್ಗೆ 20 ರೂ. ದರವಿದೆ. ಆದರೆ, ಜಯಲಲಿತಾ ಕೇವಲ 10 ರೂ. ದರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ನೀಡಲಿದ್ದಾರೆ.
ಆದರೆ, ತಮಿಳುನಾಡು ಸರ್ಕಾರ ಆರಂಭಿಸಿರುವ ಅಮ್ಮಾ ಮಿನಲರ್ ವಾಟರ್ 1 ಲೀ.ಗೆ ಕೇವಲ 10 ರೂ. ನಲ್ಲಿ ಲಭ್ಯವಿರಲಿದೆ. ಹೀಗಾಗಿ ಇಡ್ಲಿ, ಪೊಂಗಲ್ಗೆ ಬಂದಂತೆ ಅಮ್ಮಾ ಮಿನರಲ್ ವಾಟರ್ ಬಾಟಲ್ಗಳಿಗೂ ಭಾರೀ ಪ್ರಮಾಣದಲ್ಲಿ ಬೇಡಿಕೆ ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಈ ಬಾಟಲ್ಗಳನ್ನು ಸರ್ಕಾರಿ ಬಸ್ಗಳು, ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡಲಾಗುವುದು. ಭಾನುವಾರ ಮಾಜಿ ಸಿಎಂ ಸಿ.ಎನ್. ಅಣ್ಣಾದೊರೈ ಅವರ 105ನೇ ಜನ್ಮದಿನೋತ್ಸವ ದಿನವಾದ ಹಿನ್ನೆಲೆಯಲ್ಲಿ ಅಂದೇ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. (ಚೆನ್ನೈ : ಅಗ್ಗದ ದರದಲ್ಲಿ ಅಮ್ಮಾ ನೀರು!)