ಜಲ್ಲಿಕಟ್ಟು: ಮಧ್ಯಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್ ನಕಾರ
ಚೆನ್ನೈ, ಜನವರಿ 18: ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಜಲ್ಲಿಕಟ್ಟು ವಿವಾದದಲ್ಲಿ ಮಧ್ಯಪ್ರವೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಈಗಾಗಲೇ ಪ್ರಕರಣ ಸುಪ್ರಿಂ ಕೋರ್ಟಿನಲ್ಲಿ ಇರುವುದರಿಂದ ಹೈಕೋರ್ಟಾಗಲಿ, ರಾಜ್ಯ ಸರಕಾರವಾಗಲಿ ಮಧ್ಯಪ್ರವೇಶಿಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾ. ಎಸ್.ಕೆ ಕೌಲ್ ಮತ್ತು ಸುಂದರ್ ಅವರಿದ್ದ ಮದ್ರಾಸ್ ಹೈಕೋರ್ಟಿನ ವಿಭಾಗಿಯ ಪೀಠ, "ಈ ಹಂತದಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ," ಎಂದು ಹೇಳಿದೆ. ಮರೀನಾ ಬೀಚಿನಲ್ಲಿ ನಡೆಯುತ್ತಿರುವ ಭಾರಿ ಪ್ರತಿಭಟನೆಯ ಹಿನ್ನಲೆಯಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ನ್ಯಾಯವಾದಿ ಕೆ.ಬಾಲು ಕೋರಿಕೊಂಡಿದ್ದರು.[ಜಲ್ಲಿಕಟ್ಟು; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ]
ತೆರೆದ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಬಾಲು, "ಸರಕಾರ ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಿಡುತ್ತಿಲ್ಲ. ಕರೆಂಟ್ ತೆಗೆದು, ನೀರು ನೀಡದೆ ಸತಾಯಿಸುತ್ತಿದೆ," ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್, "ಸುಪ್ರಿಂ ಕೋರ್ಟ್ ಈಗಾಗಲೇ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಹಾಗಾಗಿ ಹೈಕೋರ್ಟ್ ಆಗಲಿ, ತಮಿಳುನಾಡು ಸರಕಾರವಾಗಲಿ ಏನೂ ಮಾಡಲು ಸಾಧ್ಯವಿಲ್ಲ. ಇದಲ್ಲದೆ ಮರೀನಾ ರಸ್ತೆ ಪ್ರತಿಭಟನೆಗೆ ಸೂಕ್ತ ಜಾಗವಲ್ಲ. ಕೋರ್ಟ್ ಈ ಹಂತದಲ್ಲಿ ಮಧ್ಯಪ್ರವೇಶ ಮಾಡಲು ಸಿದ್ಧವಿಲ್ಲ," ಎಂದು ಹೇಳಿತು.[ಜಲ್ಲಿಕಟ್ಟು ಬೆಂಬಲಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ಭಾರೀ ಪ್ರತಿಭಟನೆ]
ಇಂದು ತಮಿಳುನಾಡಿನ ಸಾವಿರಾರು ಜನ ಮರಿನಾ ಬೀಚಿನಲ್ಲಿ ಸೇರಿದ್ದು, ಜಲ್ಲಿಕಟ್ಟಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಮಾತ್ರವಲ್ಲ ಜಲ್ಲಿಕಟ್ಟಿಗೆ ನಿಷೇಧ ಹೇರಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಧಾನಕ್ಕೆ ಪ್ರತಿಭಟನೆಯಲ್ಲಿ ಯುವಕರೂ ಪಾಲ್ಗೊಳ್ಳುತ್ತಿದ್ದು, ತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)