ಶಶಿ-ಜಯಾ ಒಡವೆ ಲೆಕ್ಕ ಹಾಕಲು ಕೋರ್ಟ್ ತೆಗೆದುಕೊಂಡಿದ್ದು ಮೂರು ದಿನ!
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಹಾಗೂ ಶಶಿಕಲಾ ಒಡವೆ ವಸ್ತುಗಳನ್ನು ಪರಿಶೀಲಿಸುವುದಕ್ಕೆ ಚೆನ್ನೈನ ಕೋರ್ಟ್ ನಲ್ಲಿ 3 ದಿನ ಹಿಡಿಸಿತ್ತು. ಆ 5 ಸೂಟ್ ಕೇಸ್ ನಲ್ಲಿ ಇದ್ದ ಒಡವೆಗಳ ತೂಕ, ಬಳಸಿದ್ದ ಬೆಲೆಬಾಳುವ ಹರಳುಗಳು ಯಾವುವು ಗೊತ್ತೆ?
ಚೆನ್ನೈ, ಫೆಬ್ರವರಿ 14: 2000ನೇ ಇಸವಿಯ ಫೆಬ್ರವರಿ ಮೊದಲ ವಾರದಲ್ಲಿ ಐದು ದೊಡ್ಡ ಸೂಟ್ ಕೇಸ್ ಗಳನ್ನು ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಕೋರ್ಟ್ ಗೆ ತರಲಾಯಿತು. ಆ ನಂತರ ಚೆನ್ನೈನ ಕಲೆಕ್ಟರೇಟ್ ಕಟ್ಟಡದಲ್ಲಿ ಇರಿಸಲಾಯಿತು. ಆ ಕಟ್ಟಡಕ್ಕೆ ಭಾರೀ ಭದ್ರತೆ ಒದಗಿಸಲಾಗಿತ್ತು.
ಅಂದಹಾಗೆ ಆ ಸೂಟ್ ಕೇಸ್ ಗಳಲ್ಲಿ ಇದ್ದದ್ದು ಎಐಡಿಎಂಕೆ ಅಧಿನಾಯಕಿ ಜಯಲಲಿತಾ, ಆಕೆ ಸ್ನೇಹಿತೆ ಶಶಿಕಲಾ ಮತ್ತು ಜಯಲಲಿತಾ ದತ್ತು ಪಡೆದಿದ್ದ ಸುಧಾಕರನ್ ಗೆ ಸೇರಿದ್ದ ಚಿನ್ನ ಹಾಗೂ ವಜ್ರದ ಆಭರಣಗಳು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಸಂಬಂಧಂ ಅವರು ಎಲ್ಲ ಆಭರಣಗಳನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಸೂಚಿಸಿದ್ದರು.[ಅಕ್ರಮ ಆಸ್ತಿ ಪ್ರಕರಣದ ದೋಷಿ ಜಯಲಲಿತಾ ಆಸ್ತಿ ಏನಾಗುತ್ತೆ?]
ಆ ಎಲ್ಲ ಒಡವೆಗಳನ್ನು ಪೋಯಸ್ ಗಾರ್ಡನ್ ನ ವೇದ ನಿಲಯಂ, ಸುಧಾಕರ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನೆಲ್ಲ ಪ್ರತ್ಯಕ್ಷವಾಗಿ ಪರಾಂಬರಿಸುವ ಕಾರಣಕ್ಕೆ ಅಂದು ಕೋರ್ಟ್ ಗೆ ತರಲಾಗಿತ್ತು. ಅಂದು ಕೋರ್ಟ್ ನಲ್ಲಿದ್ದ ವಕೀಲರಿಗೆ, ಸಿಬ್ಬಂದಿಗೆ, ಪತ್ರಕರ್ತರಿಗೆ ಎಲ್ಲಿಲ್ಲದ ಕುತೂಹಲವಿತ್ತು.
ಅದೆಲ್ಲ ಇರಲಿ ಒಂದೊಂದೇ ಒಡವೆಗಳನ್ನು ಸೂಟ್ ಕೇಸ್ ಗಳಿಂದ ಆಚೆ ತೆಗೆಯುವಾಗ ಪೊಲೀಸರು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಅವುಗಳನ್ನೆಲ್ಲ ಪರೀಕ್ಷಿಸಿದ ಜಡ್ಜ್ ಸಾಹೇಬರು ಸಿಬ್ಬಂದಿಗೆ ಹಸ್ತಾಂತರಿಸುತ್ತಿದ್ದರು. ಅದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಕಕ್ಷಿದಾರರ ಪರ ವಕೀಲರಿಗೆ ತೋರಿಸಿ, ಮತ್ತೆ ಸೂಟ್ ಕೇಸ್ ನಲ್ಲಿ ಇಡಲಾಗುತ್ತಿತ್ತು.[ಜಯಲಲಿತಾ ಹುಟ್ಟುಹಬ್ಬದ ಉಡುಗೊರೆಯೂ ಕಾನೂನು ಬಾಹಿರ - ಸುಪ್ರಿಂ!]
ಒಂದು ಕೇಜಿಯ ಒಡ್ಯಾಣ, ಅದಕ್ಕೆ ವಜ್ರ, ಪಚ್ಚೆ, ರೂಬಿ
ಯಾವಾಗ ಒಡ್ಯಾಣ ಸೂಟ್ ಕೇಸ್ ನಿಂದ ಆಚೆ ಬಂತೋ ಎಲ್ಲರೂ ಅಚ್ಚರಿಯಿಂದ ಕ್ಷಣ ಕಾಲ ಮೌನವಾಗಿದ್ದರು. ಅದನ್ನು ಹಾಕಿಕೊಂಡು ಜಯಲಲಿತಾ ಮತ್ತು ಶಶಿಕಲಾ ಅವರು ತೆಗೆಸಿಕೊಂಡ ಫೋಟೋ ಬಹಳ ಪ್ರಚಾರ ಪಡೆದಂಥದ್ದು. ಆ ಒಡ್ಯಾಣದ ತೂಕ ಒಂದು ಕೆಜಿ ನಲವತ್ನಾಲ್ಕು ಗ್ರಾಮ್ ಇತ್ತು. ಅದರಲ್ಲಿ 2,389 ವಜ್ರ, 18 ಪಚ್ಚೆ ಮತ್ತು 9 ರೂಬಿಗಳಿದ್ದವು.
ಕೈಯಿಂದ ಮುಟ್ಟಿ ಪುಳಕಗೊಂಡರು
ವಜ್ರದಿಂದ ಕೂಡಿದ್ದ ಚಿನ್ನದ ಬೆಲ್ಟ್ ಅನ್ನು 1995ರಲ್ಲಿ ನಡೆದ ವೈಭವೋಪೇತ ಮದುವೆ ವೇಳೆ ಸುಧಾಕರನ್ ಧರಿಸಿದ್ದರು. ಅದನ್ನು ಸೂಟ್ ಕೇಸ್ ನಿಂದ ಹೊರತೆಗೆದಾಗ, ಕೋರ್ಟ್ ಸಿಬ್ಬಂದಿಯೊಬ್ಬರ ಕೈಗೆ ದಾಟಿಸುವ ಮುನ್ನ, ಪತ್ರಕರ್ತರೊಬ್ಬರು ತಮ್ಮ ಕೈಯಿಂದ ಮುಟ್ಟಿ ಪುಳಕಿತಗೊಂಡಿದ್ದರು.
ಕಾಸಿನ ಸರ ಹಾಕಿಕೊಂಡ ಟೈಪಿಸ್ಟ್
ಕುತೂಹಲಗೊಂಡಿದ್ದ ಟೈಪಿಸ್ಟ್ ವೊಬ್ಬ 487.4 ಗ್ರಾಮ್ ತೂಕದ 'ಕಾಸಿನ ಸರ'ವನ್ನು ಸಿಬ್ಬಂದಿಗೆ ಹಸ್ತಾಂತರಿಸುವ ಮುನ್ನ ತನ್ನ ಕತ್ತಿಗೆ ಹಾಕಿಕೊಂಡು ನೋಡಿದ್ದ. ಆ ನಂತರ ಸ್ಥಳೀಯ ಪತ್ರಕರ್ತರ ಬಳಿ ಬಂದು, ದಯವಿಟ್ಟು ಇದನ್ನೆಲ್ಲ ಬರೀಬೇಡಿ, ನನ್ನ ಕೆಲಸಕ್ಕೆ ತೊಂದರೆ ಆಗಿಬಿಡುತ್ತೆ ಎಂದು ಅಲವತ್ತುಕೊಂಡಿದ್ದ.
ಒಂದೇ ವಾರಕ್ಕೆ ಮೆಮೋ ಬಂತು
ಅದಾದ ಒಂದು ವಾರಕ್ಕೆ ಆ ಟೈಪಿಸ್ಟ್ ಗೆ ಮೆಮೊ ಬಂದಿತ್ತು. ಏಕೆಂದರೆ ತಮಿಳು ದಿನಪತ್ರಿಕೆಯೊಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬಂದಿದ್ದ ವರದಿಯನ್ನು ಅನುವಾದ ಮಾಡಿ ಪ್ರಕಟಿಸಿತ್ತು. ಕೋರ್ಟ್ ವರದಿಗಾರ ನೀಡಿದ ಮಾಹಿತಿ ಮೇಲೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿ ಆಗಿತ್ತು.
ಮೂರು ದಿನ ಕೋರ್ಟ್ ಅವರಣದಲ್ಲಿದ್ದ ಪೊಲೀಸರು
ಆಭರಣಗಳ ಕಾವಲಿಗೆ ಬಂದಿದ್ದ ಪೊಲೀಸರು, ಎಲ್ಲ ಲೆಕ್ಕಾಚಾರ ಮುಗಿಯುವವರೆಗೆ ಅಂದರೆ ಮೂರು ದಿನಗಳ ಕಾಲ ಕೋರ್ಟ್ ಆವರಣದಲ್ಲೇ ಕಳೆಯಬೇಕಾಯಿತು. ಆ ಐದು ಸೂಟ್ ಕೇಸ್ ಗಳನ್ನು 2014ರಲ್ಲಿ ಮತ್ತೆ ತೆಗೆಯುವವರೆಗೆ ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲೇ ಇತ್ತು. ಯಾವಾಗ ಪ್ರಕರಣ ವರ್ಗಾವಣೆಯಾಯಿತೋ ಆಗ ಅದನ್ನು ಬೆಂಗಳೂರಿನ ವಿಶೇಷ ಕೋರ್ಟ್ ಗೆ ತರುವ ಮುನ್ನ ಮತ್ತೊಮ್ಮೆ ಪರಿಶೀಲಿಸಲಾಯಿತು.
ಐಷಾರಾಮಿ ಬಸ್ ನೋಡಿ ಅಚ್ಚರಿ
ಜಯಲಲಿತಾ ಅವರ ಐಷಾರಾಮಿ ಬಸ್ ಅನ್ನು ಕೋರ್ಟ್ ಗೆ ತಂದಾಗ ಮತ್ತೊಂದು ಆಸಕ್ತಿಕರ ಘಟನೆ ನಡೆಯಿತು. ಬಸ್ ನಲ್ಲಿ ಸ್ನಾನದ ಮನೆ ಇತ್ತು. ಷವರ್, ದೂರವಾಣಿ, ಸಣ್ಣದೊಂದು ಸ್ಭೆ ನಡೆಸುವ ಟೇಬಲ್, ಅದಕ್ಕೆ ಆಸನ ಮತ್ತು ಟಿವಿ ಎಲ್ಲ ಅದ್ಧೂರಿತನವೂ ಇದ್ದವು. ಇವೆಲ್ಲವೂ ಕ್ಯಾರವಾನ್ ಎಂಬುದು ಪರಿಚಯವಾಗುವ ಮೊದಲೇ ಇದ್ದದ್ದು. ಅದನ್ನು ಜಡ್ಜ್ ಪರಿಶೀಲಿಸಲು ತೆರಳಿದಾಗ ಅವರ ಜತೆಗೆ ಕೋರ್ಟ್ ಸಿಬ್ಬಂದಿ ಮತ್ತು ಪತ್ರಕರ್ತರು ಹೋಗಿದ್ದರು. ಬಸ್ ನೊಳಗಿದ್ದ ಅದ್ಧೂರಿ ಸೌಕರ್ಯ ಕಂಡವರು ಮೂಕವಿಸ್ಮಿತರಾದರು.
ಶ್ರೀದೇವಿ ಅವರ ಹತ್ತಿರ ಇತ್ತು
ಈ ಬಸ್ ಅನ್ನು ಸಿದ್ಧಪಡಿಸಿದ್ದ ಮುಂಬೈನ ಸಿಖ್ ವೊಬ್ಬರಿಗೆ ಕೋರ್ಟ್ ಸಮನ್ಸ್ ನೀಡಿತು. ಆ ಮಾಲೀಕ ಅದೇ ಥರದ ಬಸ್ ಅನ್ನು ಬಾಲಿವುಡ್ ನಟಿ ಶ್ರೀದೇವಿ ಸೇರಿದಂತೆ ಕೆಲವರಿಗೆ ಮಾಡಿಕೊಟ್ಟಿದ್ದೇನೆ ಎಂದಿದ್ದ. ಪೋಯಸ್ ಗಾರ್ಡನ್ ಗೆ ಬಂದು ಸ್ವತಃ ಆ ಬಸ್ ಡೆಲಿವರಿ ನೀಡಿದ್ದಾಗಿ ತಿಳಿಸಿದ್ದ. ಜಯಲಲಿತಾ ಅವರಿಗೆ ಒಪ್ಪಿಸಿದಿರಾ ಎಂದು ಕೇಳಿದ್ದಕ್ಕೆ ಇನ್ನೊಬ್ಬ ಮೇಡಂ (ಶಶಿಕಲಾ) ಇದ್ದರು ಎಂದು ತಿಳಿಸಿದ್ದ.
ಕುಸಿದು ಬಿದ್ದರು ಗಂಗೈ ಅಮರನ್
ಸಂಗೀತ ಸಂಯೋಜಕ ಗಂಗೈ ಅಮರನ್ ಅವರ ಬಳಿ ಬಲವಂತವಾಗಿ ಪಯನೂರಿನ ಭೂಮಿಯನ್ನು ಶಶಿಕಲಾ ಅವರಿಗೆ ಹೇಗೆ ಮಾರಾಟ ಮಾಡಿಸಲಾಯಿತು ಎಂದು ವಿಚಾರಣೆ ಮಾಡುವಾಗ, ಗಂಗೈ ಅಮರನ್ ಕೋರ್ಟ್ ನಲ್ಲೇ ಕುಸಿದುಬಿದ್ದರು.