ಈ ದೇಶದ 'ನಾಗರಿಕರ ಅಭ್ಯರ್ಥಿ' ನಾನು: ಗೋಪಾಲಕೃಷ್ಣ ಗಾಂಧಿ
ಚೆನ್ನೈ, ಜುಲೈ 12: ನನ್ನನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆರಿಸಿದ 18 ವಿರೋಧ ಪಕ್ಷಗಳಿಗೂ ನಾನು ಋಣಿ. ಈ ದೇಶದ ಭವಿಷ್ಯದ ಕುರಿತು ಆತಂಕದಿಂದಿರುವ 'ನಾಗರಿಕರ ಅಭ್ಯರ್ಥಿ' ನಾನು ಎಂದು ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಹೇಳಿದರು.
ಚೆನ್ನೈನಲ್ಲಿಂದು (ಜುಲೈ 12) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಬಗ್ಗೆ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ದೇಶ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನನ್ನ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಈ ಹುದ್ದೆಗೆ ನನ್ನನ್ನು ಸೂಕ್ತ ಅಭ್ಯರ್ಥಿ ಎಂದು ಹದಿನೆಂಟು ಪಕ್ಷಗಳು ಒಕ್ಕೊರಲಿನಿಂದ ಒಪ್ಪಿಕೊಂಡಿದ್ದಕ್ಕೆ ನನ್ನ ಅನಂತ ಧನ್ಯವಾದಗಳು ಎಂದರು.

ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರು. ಐಎಎಸ್ ಅಧಿಕಾರಿಯಾಗಿ, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ಆಗಸ್ಟ್ 5 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ ಎದುರಿಸಲಿದ್ದು, ಅವರ ಎದುರಾಳಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶವೂ ಆಗಸ್ಟ್ 5 ರಂದೇ ಹೊರಬೀಳಲಿದ್ದು, ಹಾಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅಧಿಕಾರಾವಧಿ ಆಗಸ್ಟ್ 10 ರಂದು ಮುಕ್ತಾಯವಾಗಲಿದೆ.












Click it and Unblock the Notifications