ಚೆನ್ನೈನಲ್ಲಿ ಮಳೆ ಆರ್ಭಟ: ದಕ್ಷಿಣ ಭಾರತದಲ್ಲಿ ಭಾರಿ ಮಳೆಯ ಮುನ್ಸೂಚನೆ
ಚೆನ್ನೈ, ಅಕ್ಟೋಬರ್ 29: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಗುರುವಾರ ಬೆಳಿಗ್ಗೆ ಗುಡುಗು, ಸಿಡಿಲಿನ ಸಹಿತ ವರುಣ ಆರ್ಭಟಿಸಿದೆ. ಚೆನ್ನೈನ ಅನೇಕ ಭಾಗಗಳಲ್ಲಿ ಕಡುಕಪ್ಪಾದ ಮೋಡದ ವಾತಾವರಣ ಕವಿದಿದ್ದು, ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದೆ. ಮುಂದಿನ ನಾಲ್ಕು ದಿನಗಳವರೆಗೆ ಇದೇ ರೀತಿ ಮಳೆ ಅಬ್ಬರ ಮುಂದುವರಿಯಲಿದೆ ಎಂದು ಊಹಿಸಲಾಗಿದೆ.
ಚೆನ್ನೈ ಹಾಗೂ ನೆರೆಯ ತಿರುವಳ್ಳುರ್ ಮತ್ತು ಕಾಂಚಿಪುರಂ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಮಿಳುನಾಡು ವಿಪತ್ತು ನಿರ್ವಹಣಾ ಪ್ರಾಧಿಕಾರ ಟ್ವಿಟ್ಟರ್ನಲ್ಲಿ ಮುನ್ನೆಚ್ಚರಿಕೆ ನೀಡಿತ್ತು. ಬೆಳ್ಳಂಬೆಳಿಗ್ಗೆ ಅಬ್ಬರಿಸಿದ ಬಳಕೆ ಚೆನ್ನೈ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ.
ಅಕ್ಟೋಬರ್ 31ರಿಂದ 3 ದಿನ ಕರ್ನಾಟಕದ ವಿವಿಧೆಡೆ ಭಾರಿ ಮಳೆ
ತಿರುನೆಲ್ವೇಲಿ, ಥೆಂಕಸಿ ಮತ್ತು ವಿರುಧುನಗರ ಜಿಲ್ಲೆಗಳಲ್ಲಿನ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ಚಂಡಮಾರುತದ ಸನ್ನಿವೇಶದಿಂದಾಗಿ ಉತ್ತರ ತಮಿಳುನಾಡು ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ತಮಿಳುನಾಡು ಮತ್ತು ಪುದುಚೆರಿಯ ವಿವಿಧ ಭಾಗಗಳಲ್ಲಿ ಗುರುವಾರ ಸ್ವಲ್ಪ ಗುಡುಗು, ಮಿಂಚಿನ ಜತೆಗೆ ಧಾರಾಕಾರ ಮಳೆಯಾಗಲಿದೆ ಎಂದು ತಿಳಿಸಿದೆ. ಮುಂದೆ ಓದಿ.
ನೈಋತ್ಯ ಮುಂಗಾರಿನ ಪ್ರಭಾವ
ನೈಋತ್ಯ ಮುಂಗಾರಿನ ಅಂತಿಮ ಮಳೆಯ ಪರಿಣಾಮವನ್ನು ದಕ್ಷಿಣ ಭಾರತದ ವಿವಿಧೆಡೆ ಮುಂದಿನ ನಾಲ್ಕೈದು ದಿನಗಳ ಕಾಲ ಕಾಣಬಹುದಾಗಿದೆ ಎಂದು ಹವಾಮಾನ ಇಲಾಖೆ ಅ. 26ರಂದು ತಿಳಿಸಿತ್ತು. ಹಾಗೆಯೇ ಈಶಾನ್ಯ ಮುಂಗಾರು ಅವಧಿಯು ಕೊನೆಗೂ ದಕ್ಷಿಣ ಭಾರತದಲ್ಲಿ ಮಳೆ ಸುರಿಸಲಿದೆ. ಅಕ್ಟೋಬರ್ 28ರಿಂದ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ, ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಈಶಾನ್ಯ ಮುಂಗಾರು ವಿಳಂಬ
ಸಾಮಾನ್ಯವಾಗಿ ಈಶಾನ್ಯ ಮುಂಗಾರು ದಕ್ಷಿಣ ಭಾರತಕ್ಕೆ ಕಾಲಿಡುವ ಒಂದು ವಾರಕ್ಕೂ ಹೆಚ್ಚು ವಿಳಂಬವಾಗಿ ಈ ಬಾರಿ ಬಂದಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರತ ಕುಸಿತದ ಪರಿಣಾಮವಾಗಿ ನೈಋತ್ಯ ಮುಂಗಾರಿನ ಆಗಮನ ಸುಮಾರು ಎರಡು ವಾರಗಳಷ್ಟು ವಿಳಂಬವಾಗಿದ್ದು, ಈಶಾನ್ಯ ಮುಂಗಾರು ತಡವಾಗಲುಇದೇ ಕಾರಣ ಎನ್ನಲಾಗಿದೆ.
ನ 02ರವರೆಗೆ ಹಲವೆಡೆ ಮಳೆ, ಜಲಾಶಯಗಳ ನೀರಿನ ಮಟ್ಟ
ತಮಿಳುನಾಡು, ಕೇರಳದಲ್ಲಿ ಮಳೆ
ಅಕ್ಟೋಬರ್ 28ರಿಂದ ನಿರೀಕ್ಷೆಯಂತೆ ದಕ್ಷಿಣ ಭಾರತದ ಅನೇಕ ಕಡೆ ಈಶಾನ್ಯ ಮುಂಗಾರಿನ ಮಾರುತಗಳು ಬೀಸುತ್ತಿದ್ದು, ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿಸಿದೆ. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ಚಂಡಮಾರುತದ ಸುಳಿಗಾಳಿಯು ತಮಿಳುನಾಡು ಮತ್ತ ಕೇರಳದಲ್ಲಿ ಗುಡುಗು ಸಹಿತ ಅಲ್ಲಲ್ಲಿ ಮಳೆ ಸುರಿಸಲಿದೆ. ಗುರುವಾರವಿಡೀ ತಮಿಳುನಾಡಿನ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಇಂದು ಎಲ್ಲೆಲ್ಲಿ ಮಳೆ?
ಗುರುವಾರ ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿಯುವ ಸಂಭವ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ತಮಿಳುನಾಡು ಮತ್ತು ಕೇರಳದ ಅಲ್ಲಲ್ಲಿ ಚೆದುರಿದಂತೆ ಮಳೆ ಸುರಿಯಲಿದ್ದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಆಂಧ್ರಪ್ರದೇಶಗಳಲ್ಲಿ ಸಹ ಮಳೆ ಬೀಳಬಹುದು. ಉಳಿದ ಎಲ್ಲ ಪ್ರದೇಶಗಳಲ್ಲಿ ಒಣಹವೆ ಇರಲಿದೆ.
ಕರ್ನಾಟಕದಲ್ಲಿಯೂ ಮಳೆ
ಶುಕ್ರವಾರವೂ ಮಳೆ ಅಬ್ಬರ ಮುಂದುವರಿಯಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ, ಗುಡುಗು ಉಂಟಾಗಲಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ತಮಿಳುನಾಡು ಮತ್ತು ಕೇರಳಗಳಲ್ಲಿ ಚೆದುರಿದಂತೆ ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧೆಡೆ ಕೂಡ ಮಳೆಯಾಗುವ ಸಂಭವ ಇದೆ. ಭಾರತದ ಎಲ್ಲ ಭಾಗಗಳಲ್ಲಿಯೂ ಗಾಳಿ ಗುಣಮಟ್ಟ ಕುಸಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.