'ಗುರುತ್ವಾಕರ್ಷಣ ಅಲೆಗೆ ಭವಿಷ್ಯದಲ್ಲಿ ನರೇಂದ್ರ ಮೋದಿ ಅಲೆ ಎಂಬ ಹೆಸರಿಡ್ತಾರೆ'
ಚೆನ್ನೈ, ಜನವರಿ 7: ಭವಿಷ್ಯದಲ್ಲಿ ಆಧುನಿಕ ಭೌತಶಾಸ್ತ್ರ ಸಂಪೂರ್ಣವಾಗಿ ನಾಶವಾಗಲಿದೆ ಮತ್ತು ಭೌತಶಾಸ್ತ್ರದ ಹೊಸ ತಿಳಿವಳಿಕೆಗಳು ಸೃಷ್ಟಿಯಾಗಲಿವೆ ಎಂದು ವಿಜ್ಞಾನಿ ಕಣ್ಣನ್ ಜೆಗಥಲ ಕೃಷ್ಣನ್ ಹೇಳಿದ್ದಾರೆ.
ತಮಿಳುನಾಡಿನ ವಿಶ್ವ ಸಮುದಾಯ ಸೇವಾ ಕೇಂದ್ರದ ಹಿರಿಯ ಸಂಶೋಧನಾ ವಿಜ್ಞಾನಿಯಾಗಿರುವ ಕೃಷ್ಣನ್ ಅವರು, 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಆಧುನಿಕ ಭೌತ ವಿಜ್ಞಾನದ ಬಗ್ಗೆ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಜಾಗತಿಕ ವೆಲ್ಲರಿಥಿ ಮಾದರಿ ಎಂದು ಕರೆಯಲಾಗುವ ನೂತನ ಮಾದರಿ ಜಗತ್ತನ್ನು ಆಳಲಿದೆ. ಇದು ಒಂದೇ ಒಂದು ಮಾದರಿ ಇಡೀ ಆಧುನಿಕ ಭೌತವಿಜ್ಞಾನವನ್ನು ಸಂಪೂರ್ಣವಾಗಿ ನಾಶಮಾಡಲಿದೆ ಎಂದು ಹೇಳಿದ್ದಾರೆ.
ಆಲ್ಬರ್ಟ್ ಐನ್ಸ್ಟೀನ್ ಒಬ್ಬ ಜೀನಿಯಸ್. ಆದರೆ, ಅವರು ತಪ್ಪುಗಳನ್ನು ಮಾಡಿದ್ದಾರೆ. ಅವರು ಜಗತ್ತನ್ನು ತುಂಬಾ ತಪ್ಪು ದಾರಿಯಲ್ಲಿ ನಡೆಸಿದ್ದಾರೆ. ಅವರ ಎಲ್ಲ ಸಿದ್ಧಾಂತಗಳನ್ನೂ ನಾನು ಸಂಪೂರ್ಣವಾಗಿ ಪರಿಷ್ಕರಿಸಿದ್ದೇನೆ ಎಂದ ಅವರು, ಐನ್ಸ್ಟೀನ್ ಸಿದ್ಧಾಂತಗಳಿಗೆ ವಿರುದ್ಧವಾದ ತಮ್ಮ ಗ್ರಹಿಕೆಗಳನ್ನು ಮಂಡಿಸಿದರು.

ತಮ್ಮ ಈ ಸಂಶೋಧನೆಗಳ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿದ್ದಾಗಿಯೂ ಅವರು ತಿಳಿಸಿದ್ದಾರೆ.
2015ರಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅದರಲ್ಲಿ ನನ್ನ ಸಂಶೋಧನೆಯ ವಿವರಗಳನ್ನು ಅಡಕ ಮಾಡಿದ್ದೆ. ಅವರು ಅದನ್ನು ಆಯುಷ್ಗೆ ರವಾನಿಸಿದ್ದರು. ನೀವು ತಪ್ಪಾದ ಸ್ಥಳಕ್ಕೆ ಪತ್ರ ಕಳುಹಿಸಿದ್ದೀರಿ. ಸರಿಯಾದ ಸ್ಥಳಕ್ಕೆ ಕಳುಹಿಸಿ ಎಂದು ಆಯುಷ್ ಪ್ರತಿಕ್ರಿಯೆ ನೀಡಿತ್ತು.
ಸರ್ಕಾರದಿಂದ ಯಾವುದೇ ನೆರವು ದೊರಕದಿದ್ದರಿಂದ ಬೇಸೆತ್ತು ಜಗತ್ತಿನ 40 ದೇಶಗಳ ಮುಖ್ಯಸ್ಥರಿಗೆ ತಮ್ಮ ಸಂಶೋಧನಾ ವರದಿಯನ್ನು ಕಳುಹಿಸಿದ್ದಾಗಿ ಅವರು ತಿಳಿಸಿದ್ದಾರೆ.
ಐನ್ಸ್ಟೀನ್ನ E=mc2 ಸಿದ್ಧಾಂತಕ್ಕಿಂತಲೂ ವೇದಗಳು ಶ್ರೇಷ್ಠವಾಗಿವೆ ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದರು ಎಂಬುದಾಗಿ ಕಳೆದ ಬಾರಿಯ ಸಮ್ಮೇಳನದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದರು.
ಈ ಬಗ್ಗೆ ಪ್ರಸ್ತಾಪಿಸಿದ ಕೃಷ್ಣನ್, 'ಭೌತ ವಿಜ್ಞಾನದ ಕುರಿತ ಸಾಮಾನ್ಯ ತಿಳಿವಳಿಕೆ ಬದಲಾಗಲಿದೆ. ಗುರುತ್ವಾಕರ್ಷಣ ಅಲೆಗಳನ್ನು 'ನರೇಂದ್ರ ಮೋದಿ ಅಲೆಗಳು' ಮತ್ತು ಗುರುತ್ವಾಕರ್ಷಕ ಮಸೂರ ಪರಿಣಾಮಗಳನ್ನು 'ಹರ್ಷವರ್ಧನ್ ಎಫೆಕ್ಟ್' ಎಂದು ಹೆಸರಿಸಲಾಗುತ್ತದೆ ಎಂದಿದ್ದಾರೆ.
ತಮ್ಮದೇ ಸಿದ್ಧಾಂತವನ್ನು ಪರಿಚಯಿಸುವ ಮೂಲಕ ಹರ್ಷವರ್ಧನ್ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗಿಂತಲೂ ಪ್ರಸಿದ್ಧರಾಗುತ್ತಾರೆ ಎಂದು ಹೇಳಿದ್ದಾರೆ.












Click it and Unblock the Notifications