ಪ್ರೀತಿ ನಿರಾಕರಿಸಿದ ಹುಡುಗಿಯನ್ನು ಜೀವಂತ ಸುಟ್ಟ ಹುಚ್ಚು ಪ್ರೇಮಿ
ಚೆನ್ನೈ, ನವೆಂಬರ್ 14 : ಪ್ರೀತಿ ನಿರಾಕರಿಸಿದಳೆಂಬ ಒಂದೇ ಕಾರಣಕ್ಕೆ ಹುಡುಗಿಯನ್ನು ಪೆಟ್ರೊಲ್ ಸುರಿದು ಜೀವಂತ ಬೆಂಕಿ ಹಚ್ಚಿ ಕೊಂದಿದ್ದಾನೆ ಚೆನ್ನೈನ ಈ ಹುಚ್ಚು ಪ್ರೇಮಿ.
ಪ್ರೀತಿಸಲು ಒಲ್ಲೆ ಎಂದವಳಿಗೆ ಬೆಂಕಿ ಇಟ್ಟ ಭಗ್ನ ಪ್ರೇಮಿ
ಆಕಾಶ್ (23), ತಮ್ಮದೇ ಏರಿಯಾದಲ್ಲಿ ವಾಸವಿದ್ದ ಹುಡುಗಿ ಇಂಧುಜಾಳ ಹಿಂದೆ ಬಿದ್ದಿದ್ದ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇಂಧುಜಾ ಆಕಾಶ್ ಪ್ರೀತಿಯನ್ನು ನಿರಾಕರಿಸಿದ್ದಳು.
ಎಂಜಿನಿಯರಿಂಗ್ ಮುಗಿಸಿ ಸಂಶೋಧನೆಯಲ್ಲಿ ತೊಡಗಿದ್ದ ಇಂಧುಜಾ ತನ್ನ ತಾಯಿ ರೇಣುಕಾ ಮತ್ತು ತಂಗಿ ನಿವೇದಿತಾ ಅವರೊಂದಿಗೆ ಚೆನ್ನೈನ ಅದಮ್ ಬಕ್ಕಂ ಏರಿಯಾದಲ್ಲಿ ವಾಸವಿದ್ದಳು. ಮುಂಚೆ ಇಂಧುಜಾಳ ಸಹಪಾಠಿಯಾಗಿದ್ದ ಆಕಾಶ್ ಇಂಧುಜಾಳಿಗೆ ವಿಪರೀತ ಕಾಟ ಕೊಡುತ್ತಿದ್ದ ಎನ್ನಲಾಗಿದೆ.
ಸೋಮವಾರ (ನವೆಂಬರ್ 13) ರ ರಾತ್ರಿ ಇಂಧುಜಾಳ ಮನೆಯ ಬಳಿ ಬಂದ ಆಕಾಶ್ ಪ್ರೀತಿಸದಿದ್ದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಹೆಸದರಿಸಿದ್ದಾನೆ. ಇದರಿಂದ ಹೆದರಿದ ಇಂಧುಜಾ ಮತ್ತು ಆಕೆಯ ತಾಯಿ ಮತ್ತು ಮನೆ ಹೊರಗೆ ಬಂದಾಗ ಮೂವರಿಗೂ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಬಿಟ್ಟಿದ್ದಾನೆ. ಈ ಸಮಯದಲ್ಲಿ ಇಂಧುಜಾ ಅವರ ತಂದೆ ಮನೆಯಲ್ಲಿರಲಿಲ್ಲ.
ವಿಪರೀತ ಸುಟ್ಟಗಾಯಗಳಿಂದ ಇಂಧುಜಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇಂಧುಜಾಳ ತಾಯಿ ಮತ್ತು ತಂಗಿ ತೀರ್ವ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪೊಲೀಸರು ಆಕಾಶ್ ನನ್ನು ಬಂಧಿಸಿದ್ದಾರೆ.