ರಾಜಕೀಯ ರಂಗ ಪ್ರವೇಶಿಸುವಂತೆ ರಜನಿಗೆ ಫ್ಯಾನ್ಸ್ ಆಗ್ರಹ
ಚೆನ್ನ, ಜನವರಿ 10: ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಕ್ರಿಯ ರಾಜಕೀಯ ಪ್ರವೇಶಕ್ಕೆ ಆಗ್ರಹಿಸಿ ಅಭಿಮಾನಿಗಳು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಮೆರವಣಿಗೆಗೆ ಪೊಲೀಸರು ಅನುಮತಿ ನೀಡಿದ್ದಾರೆ.
ರಜನಿಕಾಂತ್ ಅವರು ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದು ಇತ್ತೀಚೆಗೆ ಘೋಷಿಸಿದ್ದರು. ರಜನಿ ಆರೋಗ್ಯದ ದೃಷ್ಟಿಯಿಂದ ಅಭಿಮಾನಿಗಳು ಈ ನಿರ್ಧಾರವನ್ನು ಸ್ವಾಗತಿಸಿದರೂ, ರಾಜ್ಯದ ಹಿತದೃಷ್ಟಿಯಿಂದ ರಾಜಕೀಯ ರಂಗದಲ್ಲಿ ರಜನಿ ಅಗತ್ಯ ಹೆಚ್ಚಿದೆ ಎಂದು ಅಭಿಮಾನಿಗಳು ಆಗ್ರಹಪೂರ್ವಕ ಮನವಿ ಮಾಡುತ್ತಿದ್ದಾರೆ.
ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ರಜನಿ ಫ್ಯಾನ್ ಕ್ಲಬ್ ಸದಸ್ಯರು ಸೇರಲಿದ್ದು, ರಾಜಕೀಯ ರಂಗ ಪ್ರವೇಶಿಸುವಂತೆ ರಜನಿ ಅವರ ಮನ ಓಲೈಕೆ ಮಾಡಲಿದ್ದಾರೆ.

ಇತ್ತೀಚೆಗೆ ಅಣ್ಣಾತೆ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದ ರಜನಿಕಾಂತ್ ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದಾದ ಬಳಿಕ ಒಂದು ವಾರ ವಿಶ್ರಾಂತಿಯಲ್ಲಿರುವ ರಜನಿ ಪತ್ರದ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಹೊರಡಿಸಿದ್ದರು.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ, ಸಣ್ಣ ಪುಟ್ಟ ಪಕ್ಷಗಳದ್ದೇ ಕಾರುಬಾರು. ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್, ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ. ಸ್ಟಾರ್ ನಟ ಕಮಲ್ ಹಾಗೂ ರಜನಿ ರಾಜಕೀಯ ಪ್ರವೇಶದಿಂದ ಚುನಾವಣೆ ಕಣದಲ್ಲಿ ಭಾರಿ ಬದಲಾವಣೆ ಅಲ್ಲದಿದ್ದರೂ ಮತಗಳ ವಿಭಜನೆ ಸಾಧ್ಯತೆಯಂತೂ ಇತ್ತು. ಈಗ ರಜನಿ ರಾಜಕೀಯಕ್ಕೆ ಬರದಿದ್ದರೆ ಪಕ್ಷಗಳಿಗೆ ಲಾಭವಂತೂ ಆಗಲಿದೆ.
ರಜನಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ತಮಿಳ್ ಅರುವಿ ಮಣಿಯನ್ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಹೊಸ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದೇ ನಂಬಲಾಗಿತ್ತು. ಆದರೆ, ಸಂಪೂರ್ಣವಾಗಿ ರಾಜಕೀಯದಿಂದ ರಜನಿ ದೂರ ಉಳಿಯಲು ನಿರ್ಧರಿಸಿರುವುದು ಅನೇಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.












Click it and Unblock the Notifications