ಇಪಿಎಸ್- ಒಪಿಎಸ್ ಬಣಕ್ಕೆ ಒಲಿದ ಎರಡು ಹಸಿರೆಲೆ ಚಿನ್ಹೆ
ಚೆನ್ನೈ, ನವೆಂಬರ್ 23: ಎರಡು ಹಸಿರು ಎಲೆಗಳ ಚಿನ್ಹೆ ಯಾರಿಗೆ ಸೇರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?
ತಮಿಳುನಾಡಿನ ಮುಖ್ಯಮಂತ್ರಿ ಇ ಪಳನಿಸ್ವಾಮಿ ಹಾಗೂ ಡಿಸಿಎಂ ಓ ಪನ್ನೀರ್ ಸೆಲ್ವಂ ಬಣಕ್ಕೆ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ನ ಅಧಿಕೃತ ಚುನಾವಣಾ ಚಿನ್ಹೆ ಲಭಿಸಿದೆ. ಈ ಮೂಲಕ ವಿಕೆ ಶಶಿಕಲಾ ಹಾಗೂ ಸಂಗಡಿಗರಿಗೆ ಭಾರಿ ಮುಖಭಂಗವಾಗಿದೆ.
ಮುಂಬರುವ ಆರ್ ಕೆ ನಗರ ವಿಧಾನಸಭೆ ಚುನಾವಣೆಯಲ್ಲಿ ಇದು ಯಾವ ರೀತಿ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.ಎರಡು ಹಸಿರು ಎಲೆಗಳ ಚಿನ್ಹೆ ದೊರೆಕಿರುವುದರಿಂದ ಇಪಿಎಸ್ ಹಾಗೂ ಒಪಿಎಸ್ ಬಣ ಈಗ ಅಧಿಕೃತವಾದ ಎಐಎಡಿಎಂಕೆ ಎನಿಸಿಕೊಂಡಿದೆ.
'ಕೇಂದ್ರ ಚುನಾವಣಾ ಆಯೋಗದಿಂದ ಈ ಕುರಿತಂತೆ ಮೌಖಿಕ ಆದೇಶ ಸಿಕ್ಕಿದೆ. ಅಧಿಕೃತ ಪ್ರಕಟಣೆಗಾಗಿ ಕಾದಿದ್ದೇವೆ' ಎಂದು ಎಐಎಡಿಎಂಕೆ ಸಂಸದ ವಿ ಮೈತ್ರಿಯನ್ ಅವರು ಎಎನ್ಐಗೆ ತಿಳಿಸಿದ್ದಾರೆ.
EC has given judgement in our favour, we are very happy. Majority of party workers supported us: Tamil Nadu CM Edappadi K. Palaniswami on two leaves symbol pic.twitter.com/G8vzLxjE8Z
— ANI (@ANI) November 23, 2017
ಎರಡೆಲೆ ಚಿನ್ಹೆಗಾಗಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣದಿಂದ ಕಿತ್ತಾಟ ಆರಂಭವಾದ ಬೆನ್ನಲ್ಲೇ ಚಿನ್ಹೆಯನ್ನು ಬಳಸದಂತೆ ಚುನಾವಣಾ ಆಯೋಗ ತಾಕೀತು ಮಾಡಿತ್ತು. ಕಳೆದ ಏಳೆಂಟು ತಿಂಗಳಿನಿಂದ ಹತ್ತು ಬಾರಿ ವಾದ-ವಿವಾದ ಅಭಿಪ್ರಾಯ, ಮಾಹಿತಿ ಸಂಗ್ರಹಣೆ ಎಲ್ಲವೂ ಮುಗಿದ ಬಳಿಕ ಚುನಾವಣಾ ಆಯೋಗ ತನ್ನ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ.
ಒಪಿಎಸ್ ಹಾಗೂ ಇಪಿಎಸ್ ಬಣ ವಿಲೀನವಾದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಕೆ ಶಶಿಕಲಾ ಹಾಗೂ ದಿನಕರನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. (ಒನ್ಇಂಡಿಯಾ ಸುದ್ದಿ)