"ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮೋದಿಯವರ ಚಿತ್ರಹಿಂಸೆಯಿಂದ ಸಾವನ್ನಪ್ಪಿದರು"
ಚೆನ್ನೈ, ಏಪ್ರಿಲ್ 1: ಕೇಂದ್ರ ಸಚಿವರಾಗಿದ್ದ ದಿ. ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಮೋದಿಯವರ ಒತ್ತಡ ಹಾಗೂ ಚಿತ್ರಹಿಂಸೆ ತಾಳಲಾರದೇ ಸಾವನ್ನಪ್ಪಿದ್ದಾರೆ ಎಂಬ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಹೇಳಿಕೆ ವಿವಾದ ಹುಟ್ಟುಹಾಕಿದೆ.
ತಮಿಳುನಾಡಿಗೆ ಚುನಾವಣಾ ಸಮಾವೇಶದ ಸಲುವಾಗಿ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, "ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಎಷ್ಟೋ ಹಿರಿಯ ನಾಯಕರನ್ನು ಹಿಂದೆ ಹಾಕಿ ನಾಯಕ ಸ್ಥಾನಕ್ಕೆ ಬಂದುಬಿಟ್ಟಿದ್ದಾರೆ. ಉದಯನಿಧಿ ಪಕ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪಕ್ಷದಲ್ಲಿದ್ದ ಹಲವು ನಾಯಕರನ್ನು ಕಡೆಗಣಿಸಲಾಗುತ್ತಿದೆ" ಎಂದು ಹೇಳಿದ್ದರು.
ಮೋದಿ ಪ್ರಧಾನಿಯಾಗಲು ಹಲವು ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ: ಸ್ಟಾಲಿನ್
ಈ ಮಾತಿಗೆ ಪ್ರತಿಕ್ರಿಯಿಸಿರುವ ಉದಯನಿಧಿ, "ಕೇಂದ್ರ ಸಚಿವರಾಗಿದ್ದ ದಿ. ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಮೋದಿಯವರ ಒತ್ತಡ ಹಾಗೂ ಚಿತ್ರಹಿಂಸೆ ತಾಳಲಾರದೇ ಸಾವನ್ನಪ್ಪಿದ್ದಾರೆ. ಎಲ್.ಕೆ. ಅಡ್ವಾನಿ, ಮುರಳಿ ಮನೋಹರ್ ಜೋಶಿ, ವೆಂಕಯ್ಯ ನಾಯ್ಡು ಹಾಗೂ ಇತರರೆ ನಾಯಕರನ್ನು ಮೋದಿಯವರು ಕಡೆಗಣಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಆದರೆ ಉದಯನಿಧಿ ಅವರ ಈ ಹೇಳಿಕೆ ವಿವಾದ ಹುಟ್ಟುಹಾಕಿದೆ. ಈ ಹೇಳಿಕೆ ಕುರಿತು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಪ್ರತಿಕ್ರಿಯೆ ನೀಡಿದ್ದು, "ಉದಯನಿಧಿ ಸ್ಟಾಲಿನ್ ಅವರೇ ನನ್ನ ತಾಯಿಯ ನೆನಪನ್ನು ನಿಮ್ಮ ಚುನಾವಣೆಗೆ ಬಳಸಿಕೊಳ್ಳಬೇಡಿ. ನಿಮ್ಮ ಹೇಳಿಕೆ ಸುಳ್ಳು. ಪ್ರಧಾನಿ ನರೇಂದ್ರ ಮೋದಿಯವರು ನನ್ನ ತಾಯಿಗೆ ಅತ್ಯುತ್ತಮ ಗೌರವವನ್ನು ನೀಡಿದ್ದಾರೆ. ನಾವು ಕತ್ತಲೆಯಲ್ಲಿದ್ದಾಗ ಮೋದಿಯವರು ನಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಪಕ್ಷವೂ ನಮಗೆ ಬೆಂಬಲ ನೀಡಿದೆ. ನಿಮ್ಮ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಹಾಗೂ ಡಿಎಂಕೆ ಕಾಂಗ್ರೆಸ್ ಮೈತ್ರಿಕೂಟದ ನಡುವೆ ಜಿದ್ದಿನ ಹಣಾಹಣಿ ಇದೆ. ರಾಜ್ಯದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದು, ತಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.