ಎಐಎಡಿಎಂಕೆಯಲ್ಲಿ ದಿನಕರನ್ ಆರ್ಭಟ; ಹಲವರ ಸ್ಥಾನಗಳಿಗೆ ಕುತ್ತು
ಕಂದಾಯ ಸಚಿವ ಉದಯಕುಮಾರ್ ಅವರನ್ನು ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ಬರಖಾಸ್ತು. ಪಕ್ಷದ ಉಪ ಮಹಾ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರಿಂದ ಕ್ರಮ.
ಚೆನ್ನೈ, ಆಗಸ್ಟ್ 23: ಆಡಳಿತಾರೂಢ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಎಡಿಎಂಕೆ) ಉಪ ಮಹಾ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು, ತಮಿಳುನಾಡಿನ ಹಾಲಿ ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಅವರನ್ನು ಎಐಎಡಿಎಂಕೆಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಪಕ್ಷದ ಅಧಿನಾಯಕಿ ಜಯಲಲಿತಾ ಅವರ ನಿಧನದ ನಂತರ ಇಬ್ಭಾಗವಾಗಿದ್ದ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಗುಂಪುಗಳು ಇತ್ತೀಚೆಗೆ ಪರಸ್ಪರ ಒಗ್ಗೂಡಿದ್ದವು. ಇದರಿಂದ, ದಿನಕರನ್ ಹಾಗೂ ಜಯಲಲಿತಾ ನಿಧನದ ನಂತರ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ಶಶಿಕಲಾ ಅವರು ಮೂಲೆಗುಂಪಾಗಿದ್ದಾರೆ.

ಇದರಿಂದ ರೊಚ್ಚಿಗೆದ್ದಿರುವ ದಿನಕರನ್, ತಮ್ಮ ಈ ಸ್ಥಿತಿಗೆ ಕಾರಣವಾದ (ಪಳನಿಸ್ವಾಮಿ- ಪನ್ನೀರ್ ಸೆಲ್ವಂ ಒಗ್ಗೂಡಿಕೆಗೆ ಕಾರಣವಾದ) ವ್ಯಕ್ತಿಗಳು ಪಕ್ಷದಲ್ಲಿ ಹೊಂದಿರುವ ಹುದ್ದೆಗಳಿಂದ ಅವರನ್ನು ತೆರವುಗೊಳಿಸುತ್ತಿದ್ದಾರೆ.
ಅದರಂತೆ, ಉದಯ ಕುಮಾರ್ ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ಕಿತ್ತುಹಾಕಿರುವ ಅವರು, ಪಕ್ಷದ ಶಾಸಕ ಹಾಗೂ ಮದುರೈ ನಗರ ಶಾಖೆಯ ಕಾರ್ಯದರ್ಶಿಯಾಗಿರುವ ವಿವಿ ರಾಜನ್ ಚೆನ್ನಪ್ಪ, ಸಾರಿಗೆ ಸಚಿವ ಎಂ.ಆರ್. ವಿಜಯಭಾಸ್ಕರ್ ಅವರನ್ನು ಕಾಪೂರ್ ಶಾಖೆಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಿದ್ದಾರೆ.
ಇವರೆಲ್ಲರ ಸ್ಥಾನಕ್ಕೆ ಈಗ ತಮ್ಮ ಆಪ್ತರನ್ನು ತಂದುಕೂರಿಸುವ ಮೂಲಕ ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅವರು ಯತ್ನಿಸಿದ್ದಾರೆಂದು ವಿಶ್ಲೇಷಿಸಲಾಗಿದೆ.












Click it and Unblock the Notifications