ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ
ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಭೇಟಿ ನಂತರ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಧರ್ಮಕ್ಕೆ ಗೆಲುವಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ರಾಜೀನಾಮೆ ಯನ್ನು ಹಿಂಪಡೆಯುವುದಾಗಿಯೂ ತಿಳಿಸಿದ್ದಾರೆ.
ಚೆನ್ನೈ, ಫೆಬ್ರವರಿ 9: ತಮಿಳುನಾಡಿನ ರಾಜಕೀಯ ಮೇಲಾಟಕ್ಕೆ ಕ್ಲೈಮ್ಯಾಕ್ಸ್ ಮುಂಚಿನ ದೃಶ್ಯಾವಳಿಗಳು ನಡೆಯುತ್ತಿವೆ. ಬುಧವಾರ ಸಂಜೆ 5ಕ್ಕೆ ಪನ್ನೀರ್ ಸೆಲ್ವಂ ಜತೆಗೆ ರಾಜ್ಯಪಾಲರ ಭೇಟಿ ನಿಗದಿಯಾಗಿತ್ತು. ಶಶಿಕಲಾ ಭೇಟಿಗೆ ರಾತ್ರಿ 7.30ಕ್ಕೆ ಸಮಯ. ಹಂಗಾಮಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಬುಧವಾರ ಸಂಜೆ 4.40ಕ್ಕೆ ರಾಜಭವನಕ್ಕೆ ತೆರಳಿದರು.
ಅವರ ಜತೆಗೆ ಎಐಎಡಿಎಂಕೆ ಅಧ್ಯಕ್ಷ ಇ ಮಧುಸೂದನ್, ಪಿಎಚ್ ಪಾಂಡಿಯನ್, ಕೆಪಿ ಮುನುಸಾಮಿ ಮತ್ತು ನಾಥಂ ವಿಶ್ವನಾಥನ್ ಇದ್ದರು. ಮುಂಬೈನಿಂದ ವಿಮಾನದಲ್ಲಿ ಹೊರಟ ರಾಜ್ಯಪಾಲ ವಿದ್ಯಾಸಾಗರ್ ರಾವ್ ಸಂಜೆ 4ರ ಹೊತ್ತಿಗೆ ಚೆನ್ನೈ ತಲುಪಿದರು. ಈ ಮಧ್ಯೆ ನವದೆಹಲಿಯ ಸಂಸತ್ ನಲ್ಲಿ ಡೆಪ್ಯೂಟಿ ಸ್ಪೀಕರ್ ತಂಬಿದುರೈ ಅವರು ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದರು.[ಒಪಿಎಸ್-ಶಶಿಕಲಾ ರಾಜ್ಯಪಾಲರ ಮುಂದೆ ಏನು ಹೇಳ್ತಾರೆ?]
ತನ್ನಿಂದ ಶಶಿಕಲಾ ನಟರಾಜನ್ ಆವರು ಬಲವಂತವಾಗಿ ರಾಜೀನಾಮೆ ಪಡೆದರು. ಆದ್ದರಿಂದ ರಾಜೀನಾಮೆ ಹಿಂಪಡೆಯುತ್ತೇನೆ. ಶಾಸಕರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಶಶಿಕಲಾ ಅವರ ಪದೋನ್ನತಿ ನ್ಯಾಯಸಮ್ಮತವಾದುದಲ್ಲ ಎಂದು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ.[ಒಪಿಎಸ್ ಗೆ ಬೆಂಬಲ ಸೂಚಿಸಿದ ಎಐಎಡಿಎಂಕೆ ಅಧ್ಯಕ್ಷ ಮಧುಸೂದನ್]
ಒಟ್ಟು ಹದಿನೈದು ನಿಮಿಷ ರಾಜ್ಯಪಾಲರ ಜೊತೆಗೆ ಮಾತನಾಡಿದ ಒಪಿಎಸ್, ಆ ನಂತರ ಮಾಧ್ಯಮದವರ ಜತೆಗೆ ಕೆಲವೇ ನಿಮಿಷ ಮಾತನಾಡಿದ ಅವರು, ಜನರು ನನ್ನ ಪರ ನಿಂತಿದ್ದಕ್ಕೆ ಧನ್ಯವಾದಗಳು. ಧರ್ಮಕ್ಕೆ ಗೆಲುವಾಗುತ್ತದೆ ಎಂದು ಅವರು ಹೇಳಿದರು.