ಮತದಾನಕ್ಕೆ 48 ಗಂಟೆಗೂ ಮುನ್ನ 'ಚಪ್ಪಲಿ' ಫೋಟೋ ಟ್ವೀಟ್!
ಚೆನ್ನೈ, ಏಪ್ರಿಲ್ 05: ತಮಿಳುನಾಡು ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರಕ್ಕೆ ಅಂತ್ಯವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ತಮ್ಮ ವಿಭಿನ್ನ ಟ್ವೀಟ್ ಮೂಲತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದಾರೆ.
ಸೇಲಂ ಜಿಲ್ಲೆಯ ಒಮಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಕುಮಾರಮಂಗಳಂ ಅವರು ಚುನಾವಣಾ ಪ್ರಚಾರಕ್ಕಾಗಿ ಅಲೆದು ಅಲೆದು ಸವಿದು ಹೋಗಿರುವ ತಮ್ಮ ಚಪ್ಪಲಿಯ ಫೋಟೋವನ್ನು ಟ್ವೀಟ್ ಮಾಡಿದ್ದು, ಪ್ರಚಾರ ಇಂದಿಗೆ ಮುಕ್ತಾಯಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
"ನಾನು ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬಂದಿದ್ದು ಮನೆಗೆ ತರುವುದಕ್ಕಾಗಿ ಏನನ್ನೂ ಸಂಗ್ರಹಿಸಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ನಾವು ದೇವರನ್ನು ನಂಬುತ್ತೇವೆ, ದೇವರು ಎಲ್ಲಾ ಆಕಾರ ಮತ್ತು ಗಾತ್ರದಲ್ಲಿ ಬರುತ್ತಾನೆ" ಎಂದು ಮೋಹನ್ ಕುಮಾರಮಂಗಳಂ ಬರೆದಿದ್ದಾರೆ.

ಎಐಎಡಿಎಂಕೆ ಅಭ್ಯರ್ಥಿ ವಿರುದ್ಧ ಪೈಪೋಟಿ:
ತಮಿಳುನಾಡು ಸೇಲಂ ಜಿಲ್ಲೆಯ ಒಮಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 42 ವರ್ಷದ ಮೋಹನ್ ಕುಮಾರಮಂಗಳಂ ಅವರ ಟ್ವೀಟ್ ಸಂದೇಶಕ್ಕೆ 1500ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಒಮಲೂರು ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಆರ್ ಮಣಿ ವಿರುದ್ಧ ಮೋಹನ್ ಸ್ಪರ್ಧಿಸಿದ್ದಾರೆ.
ತಮಿಳುನಾಡಿನ 38 ಜಿಲ್ಲೆಗಳ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, 3998 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಐಎಡಿಎಂಕೆ ಜೊತೆಗೆ ಭಾರತೀಯ ಜನತಾ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 20 ಅಭ್ಯರ್ಥಿಗಳನ್ನು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications