ಎಐಎಡಿಎಂಕೆ ಬಣಗಳ ವಿಲೀನದ ಬಗ್ಗೆ ನಟ ಕಮಲ್ ಹೇಳಿದ್ದೇನು?
ಎಐಎಡಿಎಂಕೆ ಬಣಗಳ ವಿಲೀನದ ಬಗ್ಗೆ ಕಮಲ ಹಾಸನ್ ಟೀಕೆ. ತಮಿಳುನಾಡಿನ ಜನರ ತಲೆ ಮೇಲೆ 'ಮಕ್ಮಲ್' ಟೋಪಿ ಹಾಕಿದ್ದಾರೆಂದು ಅವರು ಕಿಡಿಕಾರಿದರು.
ಚೆನ್ನೈ, ಆಗಸ್ಟ್ 21: ಎಐಎಡಿಎಂಕೆ ಪಕ್ಷದ ಎರಡು ಬಣಗಳು ಸೋಮವಾರ ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ತಮಿಳು ಚಿತ್ರನಟ, ಎರಡೂ ಬಣಗಳ ನಾಯಕರು ತಮಿಳುನಾಡಿನ ಜನತೆಯ ತಲೆ ಮೇಲೆ 'ಮಕ್ಮಲ್' ಟೋಪಿ ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮೂರು ಬಾರಿ ಸಿಎಂ ಆಗಿದ್ದ ಪನ್ನೀರ್ ಈಗ ಡಿಸಿಎಂ!
ಸೋಮವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್, ''ನಾವೆಲ್ಲಾ ಈವರೆಗೆ ಗಾಂಧಿ ಟೋಪಿ ನೋಡಿದ್ದೆವು. ಆನಂತರ, ಕೇಸರಿ ಟೋಪಿ ನೋಡಿದೆವು. ನಮಗೆ ಕಾಶ್ಮೀರಿ ಟೋಪಿ ಗೊತ್ತು. ಆದರೆ, ಇಂದು ತಮಿಳುನಾಡಿನ ಜನತೆ ಮೇಲೆ ಹೊಸ ಟೋಪಿಯೊಂದು ಬಿದ್ದಿದೆ. ಅದು, 'ಮಕ್ಮಲ್' ಟೋಪಿಯಾಗಿದ್ದು, ಇದನ್ನು ಎಐಎಡಿಎಂಕೆ ನಾಯಕರೇ ತೊಡಿಸಿದ್ದಾರೆ'' ಎಂದು ಲೇವಡಿ ಮಾಡಿದರು.
ಈಗಾಗಲೇ ಕೆಲ ದಿನಗಳಿಂದಲೂ ಕಮಲ್ ಹಾಸನ್ ಅವರು, ಈಗ ಅಧಿಕಾರದಲ್ಲಿರುವ ಎಐಎಡಿಎಂಕೆ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಕಮಲ್ ಹಾಸನ್ ಅವರು ಶೀಘ್ರವೇ ರಾಜಕೀಯ ಪ್ರವೇಶ ಮಾಡಲಿದ್ದಾರೆಂಬ ಸುದ್ದಿಗಳೂ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಪ್ರತಿಯೊಂದು ಹೇಳಿಕೆಯೂ ಮಾಧ್ಯಮಗಳಲ್ಲಿ ದೊಡ್ಡದಾಗಿಯೇ ಸುದ್ದಿ ಮಾಡುತ್ತಿವೆ.
ಇತ್ತೀಚೆಗೆ, ಅವರು, ಡಿಎಂಕೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದು ಹಲವರಲ್ಲಿ ಕಮಲ್ ಹಾಸನ್ ಅವರು, ರಾಜಕೀಯ ಪ್ರವೇಶ ಮಾಡುವುದು ಡಿಎಂಕೆ ಬೆಂಬಲದಿಂದಲೇ ಎಂದು ಹೇಳಲಾಗುತ್ತಿದೆ.