ಚೆನ್ನೈ ರೈಲು ಸ್ಫೋಟ: ಸುಳಿವಿಗೆ 5 ಲಕ್ಷ ಬಹುಮಾನ
ಈ ಸಂಬಂಧ ಅಧಿಕೃತ ಪ್ರಕಟಣೆ ನೀಡಿರುವ ತಮಿಳುನಾಡಿನ ಪೊಲೀಸ್ ಮಹಾ ನಿರ್ದೇಶಕ ಕೆ ರಾಮನುಜಂ ಅವರು 'ಮೇ 1 ರಂದು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರದ ಯುವತಿ ಮೃತಪಟ್ಟು ಇತರೆ 14 ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು' ಎಂದು ತಿಳಿಸಿದ್ದಾರೆ.
ಆರೋಪಿಗಳ ಬಗ್ಗೆ ಸುಳಿವು ಕೊಡುವ ವ್ಯಕ್ತಿಗಳ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಮತ್ತು ಅಗತ್ಯಬಿದ್ದರೆ ಅವರಿಗೆ ರಕ್ಷಣೆ ಕೊಡಲಾಗುವುದು ಎಂದು ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಸಂಪರ್ಕ ಸಂಖ್ಯೆಗಳು 77086 54202 ಅಥವಾ 044-2250 2500 ಅಥವಾ 2250 2510 ಅಥವಾ ಇಮೇಲ್ [email protected]
ಪ್ರಯಾಣಿಕರಾಗಲಿ ಅಥವಾ ಸ್ಥಳದಲ್ಲಿದ್ದ ಬೇರೆ ಯಾರಾದರೂ ಮೊಬೈಲ್ ಕ್ಯಾಮೆರಾದಲ್ಲಿ ಅಪರಿಚಿತ ವ್ಯಕ್ತಿಗಳ ಚಲನವಲನವನ್ನು ಸೆರೆ ಹಿಡಿದಿದ್ದರೆ ಅದನ್ನು ಪೊಲೀಸ್ ಇಲಾಖೆಗೆ ಕೊಡಬಹುದು ಅಥವಾ ಮಾಹಿತಿ ಹಂಚಿಕೊಳ್ಳಬಹುದು ಎಂದೂ ಅವರು ಹೇಳಿದರು. (ಉಗ್ರ ಹುಸೇನ್ ಬಂಧನಕ್ಕೆ ಕ್ಷಿಪ್ರ ಪ್ರತೀಕಾರ ನಡೆಯಿತೇ?)
ಈ ಮಧ್ಯೆ, ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆ ISI ಕಣ್ಣು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ಐಎಸ್ಐ ಏಜೆಂಟ್ ಒಬ್ಬ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದುಕೊಳ್ಳಲು ಯತ್ನಿಸಿದ ಘಟನೆಯೂ ನಡೆದಿದೆ ಎಂದು ತಮಿಳುನಾಡಿನ ಕ್ಯೂ ಬ್ರಾಂಚ್ ಬಂಧನದಲ್ಲಿರುವ ಜಾಹೀರ್ ಹುಸೇನ್ ಮಾಹಿತಿ ನೀಡಿದ್ದಾನೆ.