ಚೆನ್ನೈನಲ್ಲಿ ಮತ್ತೆ ಮಳೆ ಆರ್ಭಟ, ರಕ್ಷಣಾ ಕಾರ್ಯಕ್ಕೆ ಅಡ್ಡಿ
ಚೆನ್ನೈ, ಡಿಸೆಂಬರ್, 05: ಮಹಾಮಳೆಗೆ ತತ್ತರಿಸಿರುವ ಚೆನ್ನೈ ಚೇತರಿಕೆ ಹಾದಿಯಲ್ಲೇ ಇದ್ದಾಗಲೇ ಮತ್ತೆ ಮಳೆ ಆರ್ಭಟ ಆರಂಭವಾಗಿದೆ. ಇದು ರಕ್ಷಣಾ ಕಾರ್ಯಗಳಿಗೆ ಅಡ್ಡಿ ಉಂಟುಮಾಡುತ್ತಿದ್ದು ಸಂತ್ರಸ್ತರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
670ಕ್ಕೂ ಅಧಿಕ ಕನ್ನಡಿಗರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಚೆನ್ನೈನ ಎಗ್ಮೋರ್, ಅಣ್ಣಾ ನಗರ್ ಟಿ ನಗರ್, ವಡಪಳನಿ, ಚೆನ್ನೈ ಸೆಂಟ್ರಲ್ ಸೇರಿದಂತೆ ಹಲವೆಡೆ ಮತ್ತೆ ವರುಣನ ಆರ್ಭಟ ಮುಂದುವರಿದಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ ತನಕ ಮಳೆ ನಿಂತಿತ್ತು, ಆದರೆ ಶುಕ್ರವಾರ ಮತ್ತೆ ಮಳೆ ಆರಂಭವಾಗಿದೆ.[ಚೆನ್ನೈ ಮಹಾಮಳೆಗೆ ಜಗ್ಗದ-ಕುಗ್ಗದ ಬಸ್!]
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸೇನಾ ತಂಡ ಹಾಗೂ ಸ್ವಯಂ ಸೇವಾ ಸಂಸ್ಥೆಗಳು 10 ಸಾವಿರಕ್ಕೂ ಅಧಿಕ ಜನರನ್ನು ರಕ್ಷಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದವರೆಗೆ ಒಟ್ಟು 10,589 ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.[ಚೆನ್ನೈ ಪ್ರಳಯ, ಪಾಠ ಕಲಿಯುವುದೇ ಬೆಂಗಳೂರು ನಗರಿ!]
ಪ್ರವಾಹ ಇಳಿಮುಖವಾಗಿರುವುದು ಸಂತ್ರಸ್ತರಲ್ಲಿ ನೆಮ್ಮದಿ ತಂದಿದೆ. ಆದರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ. ಕಿತ್ತು ಹೋಗಿರುವ ರಸ್ತೆಗಳು, ಎಲ್ಲೆಲ್ಲೂ ನೀರು, ಮುಳುಗಡೆಯಾದ ಕಾರುಗಳು, ಆಹಾರ ಪೊಟ್ಟಣಕ್ಕಾಗಿ ಹೋರಾಟ. ಇದೆಲ್ಲದರ ಮಧ್ಯೆ ಸುಕ್ಷಿತ ಸ್ಥಳ ಆಶ್ರಯಿಸಿ ಬಂದವರೊಂದಿಗೆ ಅಲ್ಲಿನ ಮೂಲ ನಿವಾಸಿಗಳು ವಾಗ್ವಾದಕ್ಕೆ ಇಳಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದೆ.