ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?
ಚೆನ್ನೈ, ಜನವರಿ 02 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಅಸುನೀಗಿದ ನಂತರ, ಅವರಷ್ಟೇ ಪ್ರಭಾವಶಾಲಿಯಾಗಿದ್ದ ಡಿಎಂಕೆ ನಾಯಕ ಎಂ ಕರುಣಾನಿಧಿ ಅವರು ನಿವೃತ್ತಿ ಅಂಚಿನಲ್ಲಿರುವುದರಿಂದ ತಮಿಳುನಾಡಿನ ರಾಜಕಾರಣದಲ್ಲಿ ಭಾರೀ ನಿರ್ವಾತ ಸೃಷ್ಟಿಯಾಗಿದೆ.
ಅವರಿಬ್ಬರ ಸ್ಥಾನವನ್ನು ತುಂಬುವಂಥ ನಾಯಕ ಒಬ್ಬೇಒಬ್ಬನಾದರೂ ಇದ್ದಾನಾ ಅಥವಾ ಇದ್ದಾಳಾ ಎಂದು ದುರ್ಬೀನು ಹಾಕಿ ನೋಡಿದರೆ, ಒಂದೇಒಂದು ವ್ಯಕ್ತಿಯೂ ಸಿಗುವುದಿಲ್ಲ. ಪುಡಿ ರಾಜಕಾರಣಿಗಳು ಬೇಕಾದಷ್ಟಿದ್ದಾರೆ, ಆದರೆ ಅವರ್ಯಾರಿಗೂ ಜಯಲಲಿತಾ ಮತ್ತು ಕರುಣಾನಿಧಿ ಸ್ಥಾನ ತುಂಬುವ ತಾಕತ್ತಿಲ್ಲ.
ಇಂಥ ವಿಚಿತ್ರ ಸನ್ನಿವೇಶದಲ್ಲಿ, 2019ರ ಲೋಕಸಭೆ ಚುನಾವಣೆ ಇನ್ನು ಕೇವಲ ಒಂದೂವರೆ ವರ್ಷ ಇರುವಾಗ, 'ದಳಪತಿ' ಸ್ಟೈಲ್ ಕಿಂಗ್ ರಜನಿಕಾಂತ್ ಅವರು, ಫಿಲ್ಮಿಸ್ಟೈಲಿನಂತೆ ತಮಿಳುನಾಡು ರಾಜಕಾರಣದಲ್ಲಿ ಕಾಲಿಟ್ಟಿದ್ದಾರೆ. ಅದೂ, ನಾನು ಯಾವುದೇ ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಉದ್ಘೋಷಣೆಯೊಂದಿಗೆ.
ರಜನಿಯವರ ಎಂಟ್ರಿಯಿಂದ ಅವರ ಅಭಿಮಾನಿಗಳು, ಬದಲಾವಣೆ ಬಯಸುತ್ತಿರುವ ನಾಗರಿಕರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದರೆ, ರಜನಿ ಅನಕ್ಷರಸ್ಥ, ಅವರು ತಮಿಳಿಗನೇ ಅಲ್ಲ, ಅವರ ಪ್ರವೇಶದಿಂದ ಎಂಥ ಮಣ್ಣಾಂಗಟ್ಟಿಯೂ ಆಗುವುದಿಲ್ಲ ಎಂದು ಸಿನಿಕರಂತೆ ಆಡುತ್ತಿರುವವರಿಗೇನೂ ಕಮ್ಮಿಯಿಲ್ಲ.
ರಜನಿಕಾಂತ್ ತಮ್ಮ ವ್ಯಕ್ತಿತ್ವಕ್ಕಿಂತ ಬೃಹದಾಕಾರವಾಗಿ ಬೆಳೆದಿರುವಂಥ ವ್ಯಕ್ತಿ, ತಮಿಳು ನಿನೆಮಾ ಪ್ರೇಮಿಗಳ ಆರಾಧ್ಯದೈವ. ಇವರ ಆಗಮನದಿಂದ, ಜಯಲಲಿತಾ ಮತ್ತು ಕರುಣಾನಿಧಿಯನ್ನು ಮಾತ್ರ ಆರಾಧಿಸುತ್ತಿದ್ದ ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸುವುದಾ ಅಥವಾ ರಜನಿ ಹತ್ತರಲ್ಲಿ ಹನ್ನೊಂದನೆಯವರಾಗುತ್ತಾರಾ? ಕಾಲವೇ ಉತ್ತರ ನೀಡಲಿದೆ.

ಬಿಜೆಪಿಯ ತತ್ತ್ವ ಸಿದ್ಧಾಂತ ಒಪ್ತಾರಾ ರಜನಿ?
ಅಧಿಕೃತವಾಗಿ ರಾಜಕೀಯಕ್ಕೆ ಪಾದಾರ್ಪಣ ಮಾಡಿರುವ ಸಂದರ್ಭದಲ್ಲಿ, ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರು, ಬಾಬಾ ಚಿತ್ರದ ಚಿಹ್ನೆಯನ್ನು ತೋರಿಸಿ, ಭಗವದ್ಗೀತೆಯ ಚರಣವನ್ನು ಉಚ್ಚರಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ತಾವು ಹೊಸ ಪಕ್ಷ ಸ್ಥಾಪಿಸುವುದಾಗಿ ರಜನಿ ಪ್ರಕಟಿಸಿದ್ದರೂ, ಬಿಜೆಪಿಯ ತತ್ತ್ವ ಸಿದ್ಧಾಂತಗಳನ್ನು ರಜನಿಕಾಂತ್ ಕೂಡ ಬೆಂಬಲಿಸುತ್ತಾರಾ ಎಂಬ ಸಂದೇಹ ಹಲವರನ್ನು ಕಾಡಲು ಆರಂಭಿಸಿದೆ.

ಲೋಕಸಭೆ ಚುನಾವಣೆಯಲ್ಲಿ ರಜನಿಗೆ ಬಿಜೆಪಿ ಬೆಂಬಲ
ಇದು ಸಾಲದೆಂಬಂತೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರರಾಜನ್ ಅವರು, ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ರಜನಿಕಾಂತ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಈಗಲೇ ಪ್ರಕಟಿಸಿದ್ದಾರೆ. ರಜನಿ ಅವರ ರಂಗಪ್ರವೇಶಕ್ಕೆ ಬಿಜೆಪಿಯಿಂದಲೂ ಭರ್ತಿ ಸ್ವಾಗತ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ, ರಜನಿಯನ್ನು ಸೆಳೆಯಲು ಎಲ್ಲ ಪ್ರಯತ್ನ ಮಾಡಲಿರುವುದು ಖಚಿತ.

ರಜನಿ ಮಾತಲ್ಲಿ ಆಧ್ಯಾತ್ಮ, ಪಾರದರ್ಶಕತೆ
ಎಲ್ಲಕ್ಕಿಂತ ಹೆಚ್ಚಾಗಿ, ರಜನಿಕಾಂತ್ ಅವರು ಹೊಚ್ಚಹೊಸ ವಿಚಾರಧಾರೆಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಹಿಂದಿನ ಧೀಮಂತ ರಾಜಕಾರಣಿಗಳಂತೆ ದ್ವೇಷ, ಪೊಳ್ಳು ಭರವಸೆಯ ರಾಜಕೀಯದ ಬಗ್ಗೆ ಮಾತನಾಡುವುದರ ಬದಲು, ಲಂಚಮುಕ್ತ ರಾಜಕಾರಣ, ಆಧ್ಯಾತ್ಮ, ಪಾರದರ್ಶಕತೆ, ಜಾತಿ ಮತ್ತು ಧರ್ಮದಿಂದ ಹೊರತಾದ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಅದನ್ನೇ ಪ್ರತಿಪಾದಿಸುತ್ತಿದ್ದಾರೆ.

ಜಯಲಲಿತಾ ತೂಕಕ್ಕೆ ಒಬ್ಬನೂ ಸಮನಿಲ್ಲ
ಎಐಎಡಿಎಂಕೆ ಪಕ್ಷದಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದರಿಂದ ಯಾರನ್ನು ಬೆಂಬಲಿಸಬೇಕು ಎಂಬ ದ್ವಂದ್ವ ಜನರಲ್ಲಿದೆ. ಅಲ್ಲದೆ, ಈಗಿರುವ ನಾಯಕರಾರೂ ಜಯಲಲಿತಾ ಅವರ ತೂಕಕ್ಕೆ ಸಮನಾಗುವುದಿಲ್ಲ. ಇನ್ನು ಡಿಎಂಕೆಯಲ್ಲಿ ಸ್ಟಾಲಿನ್ ಮುಂದಾಳತ್ವ ವಹಿಸಿದ್ದಾರಾದರೂ, ಆರ್ಕೆ ನಗರ ಉಪಚುನಾವಣೆಯನ್ನೂ ಗೆಲ್ಲಲು ಅವರಿಂದ ಸಾಧ್ಯವಾಗಲಿಲ್ಲ. ಇನ್ನು ವಿಜಯಕಾಂತ್ ಅಂಥವರು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೋಳು ಉಪ್ಪಿನಕಾಯಿಗಳು.

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆ
ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನಲ್ಲಿ ತಮ್ಮ ಅಸ್ತಿತ್ವ ಸಿದ್ಧಪಡಿಸಲು ಬಿಜೆಪಿ ಸಾಕಷ್ಟು ಹರಸಾಹಸ ಮಾಡಿದೆ. ವ್ಯಕ್ತಿಪೂಜೆಯನ್ನು ಆರಾಧಿಸುವ ತಮಿಳುನಾಡಿನಲ್ಲಿ ಬಿಜೆಪಿಗಾಗಲಿ ಕಾಂಗ್ರೆಸ್ಸಿಗಾಗಲಿ ಅಸ್ವಿತ್ವವೇ ಇಲ್ಲ. ಇಂಥ ಸಮಯದಲ್ಲಿ ಬಿಜೆಪಿಗೆ ರಜನಿಕಾಂತ್ ಅವರ ಪ್ರವೇಶ ಬಾವಿಯಲ್ಲಿ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಬಿಜೆಪಿ ಬಯಸುವುದಿಲ್ಲ.

ಕಮಲ್ ಕಣಕ್ಕಿಳಿಸಿದರೆ ಸ್ಟಾರ್ ವಾರ್ ಗ್ಯಾರಂಟಿ
ಇದೇ ಸಮಯದಲ್ಲಿ ರಜನಿಗಿಂತ ಹೆಚ್ಚು ಹವಾ ಎಬ್ಬಿಸಲು ಪ್ರಯತ್ನಿಸಿದ, ಮತ್ತೊಬ್ಬ ನಟ ಕಮಲ್ ಹಾಸನ್ ಅವರು ಇದ್ದಕ್ಕಿದ್ದಂತೆ ತಣ್ಣಗಾಗಿದ್ದಾರೆ. ಅವರು ಕೂಡ, ರಜನಿಕಾಂತ್ ಮತ್ತಷ್ಟು ಬಲಗೊಳ್ಳುವ ಮೊದಲೇ ಯಾವುದೇ ಸಮಯದಲ್ಲಿ ತಮ್ಮ ಪಕ್ಷದ ಘೋಷಣೆಯನ್ನೂ ಮಾಡಬಹುದು. ಇದು ಸಾಧ್ಯವಾದರೆ, ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಸ್ಟಾರ್ ವಾರ್ ಆರಂಭವಾದಂತೆಯೇ. ಆದರೆ, ಇವರಿಬ್ಬರು ಎಂಜಿಆರ್ ಸೃಷ್ಟಿಸಿದಂಥ ಅಲೆಯನ್ನು ಎಬ್ಬಿಸುವರೆ?












Click it and Unblock the Notifications