ಜಯಲಲಿತಾ ಕ್ಷೇತ್ರ ಆರ್ ಕೆ ನಗರ ವಿಧಾನಸಭಾ ಉಪಚುನಾವಣೆ ದಿನಾಂಕ ಪ್ರಕಟ
ಚೆನ್ನೈ, ನವೆಂಬರ್ 24: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಆರ್ ಕೆ ನಗರ ವಿಧಾನಸಭಾ ಉಪಚುನಾವಣೆಯ ದಿನಾಂಕವನ್ನು ಶುಕ್ರವಾರ ಚುನಾವಣೆ ಆಯೋಗ ಪ್ರಕಟಿಸಿದೆ.
ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಆರ್ ಕೆ ನಗರ ವಿಧಾನಸಭೆ ಉಪಚುನಾವಣೆಗೆ ಡಿಸೆಂಬರ್ 21ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು. ಡಿಸೆಂಬರ್ 24ರಂದು ಮತ ಎಣಿಕೆ ನಡೆಯಲಿದೆ. ಡಿ.4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿ.5 ರಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಡಿ.7 ಕೊನೆಯ ದಿನವಾಗಿದೆ.

ಆರ್ ಕೆ ನಗರ ಸೇರಿದಂತೆ ಅರುಣಾಚಲ ಪ್ರದೇಶದ ಪಾಕೆ-ಕಸಾಂಗ್, ಲಿಕಾಬಲಿ, ಉತ್ತರ ಪ್ರದೇಶದ ಸಿಕಂದ್ರಾ, ಪಶ್ಚಿಮ ಬಂಗಾಳದ ಸಬಾಂಗ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಡಿಸೆಂಬರ್ 5, 2016ರಲ್ಲಿ ಜಯಲಲಿತಾ ಸಾವಿಗೀಡಾದ ನಂತರ ಆರ್.ಕೆ ನಗರ ಕ್ಷೇತ್ರದ ಶಾಸಕ ಸ್ಥಾನ ಖಾಲಿಯಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಇ ಪಳನಿಸ್ವಾಮಿ ಹಾಗೂ ಡಿಸಿಎಂ ಓ ಪನ್ನೀರ್ ಸೆಲ್ವಂ ಬಣಕ್ಕೆ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ನ ಅಧಿಕೃತ ಚುನಾವಣಾ ಚಿನ್ಹೆ ಲಭಿಸಿದೆ. ಇದರಿಂದ ಇದೀಗ ಶಶಿಕಲಾ ಮತ್ತು ಓ ಪನ್ನೀರ್ ಸೆಲ್ವಂ ನಡುವೆ ಪ್ರತಿಷ್ಠೆಯಾಗಿರುವ ಈ ಉಪಚುನವಾಣೆ ಭಾರೀ ಪೈಪೋಟಿಯಿಂದ ಕೂಡಿದೆ.
ಮತದಾರರನ್ನು ಸೆಳೆಯಲು ಭಾರಿ ಪ್ರಮಾಣದಲ್ಲಿ ಅಕ್ರಮ ಹಣ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಇದೇ ಏಪ್ರಿಲ್ 12ರಂದು ನಡೆಯಬೇಕಿದ್ದ ಆರ್ ಕೆ ನಗರ ವಿಧಾನಸಭೆ ಉಪಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿತ್ತು.












Click it and Unblock the Notifications