ಭಿಕ್ಷುಕಿ ಬಳಿ ಪತ್ತೆಯಾಯಿತು 2 ಲಕ್ಷ ರೂಪಾಯಿ
ಪುದುಚೇರಿ, ನವೆಂಬರ್.08: ತಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬ ಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ.
ಪುದುಚೇರಿಯಲ್ಲಿ ಹೀಗೊಂದು ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದ ಪಾರ್ವತಮ್ಮ ಎಂಬ ಮಹಿಳೆಯ ಬಳಿ 12 ಸಾವಿರ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರ ಜೊತೆ ಮಹಿಳೆ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಅದರಲ್ಲಿ ಎರಡು ಲಕ್ಷ ರೂಪಾಯಿ ಹಣ ಇರುವುದು ತಿಳಿದು ಬಂದಿದೆ. 70 ವರ್ಷದ ಮಹಿಳೆ ಕೇವಲ ಭಿಕ್ಷೆ ಬೇಡಿಕೊಂಡು ಇಷ್ಟೊಂದು ಹಣ ಸಂಬಾದಿಸಿದ್ದನ್ನು ತಿಳಿದ ಪೊಲೀಸರೇ ಹೌಹಾರಿದ್ದಾರೆ.
ಭಿಕ್ಷುಕಿ ಬಳಿ ಕ್ರೆಡಿಡ್ ಕಾರ್ಡ್!
ಪುದುಚೇರಿಯ ದೇವಸ್ಥಾನದ ಎದುರು ಪ್ರಜ್ಞೆತಪ್ಪಿ ಬಿದ್ದ 70 ವರ್ಷದ ಪಾರ್ವತಮ್ಮ ಬಳಿ ಕೇವಲ ಹಣವಷ್ಟೇ ಸಿಕ್ಕಿರಲಿಲ್ಲ. 2 ಲಕ್ಷ ಹಣವಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಕೂಡಾ ಪತ್ತೆಯಾಗಿದೆ. ಇದರಿಂದ ಪೊಲೀಸರು ಮಹಿಳೆಯ ಮೂಲವನ್ನು ಪತ್ತೆ ಮಾಡಿದ್ದಾರೆ.

ತಮಿಳುನಾಡಿನ ಕಲ್ಲಿಕುರುಚಿ ಮೂಲದ ಮಹಿಳೆ 40 ವರ್ಷಗಳ ಹಿಂದೆಯೇ ತನ್ನ ಪತಿಯನ್ನು ಕಳೆದುಕೊಂಡಿದ್ದರು. ನಂತರ ಪುದುಚೇರಿಯಲ್ಲಿ ಬೀದಿ ಬೀದಿ ಸುತ್ತಿ ಭಿಕ್ಷೆ ಬೇಡಿಕೊಂಡೇ ಜೀವನ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು, ಕಳೆದ ಎಂಟು ವರ್ಷಗಳಿಂದ ಈ ದೇವಸ್ಥಾನದ ಎದುರು ಪಾರ್ವತಮ್ಮ ಭಿಕ್ಷೆ ಬೇಡುತ್ತಿದ್ದರು. ಜೊತೆಗೆ ದೇವಸ್ಥಾನದ ಸುತ್ತಮುತ್ತಲಿನಲ್ಲೇ ಜೀವನ ಸಾಗಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಕುಲ್ಲಿಕುರುಚಿ ಬಳಿ ಪಾರ್ವತಮ್ಮ ಸಂಬಂಧಿಕರು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಜೊತೆಗೆ ಅಸ್ವಸ್ಥಗೊಂಡ ಪಾರ್ವತಮ್ಮರನ್ನು ಸಂಬಂಧಕರಿಗೆ ಒಪ್ಪಿಸಿದ್ದಾರೆ. ಇಷ್ಟುದಿನ ಭೀದಿ ಬೀದಿ ಸುತ್ತಿಕೊಂಡು, ದೇವಸ್ಥಾನದ ಎದುರು ಭಕ್ತರಿಂದ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧೆಗೆ ಇದೀಗ ಸಹೋದರನ ಆಸರೆ ಸಿಕ್ಕಿದೆ.












Click it and Unblock the Notifications