Breaking: ಮತ್ತೆ ಬಿಜೆಪಿಗೆ ಮರಳಿದ ರಜನಿಕಾಂತ್ ಆಪ್ತ ಅರ್ಜುನ್
ಚೆನ್ನೈ, ಆಗಸ್ಟ್ 22: ಬಿಜೆಪಿ ತೊರೆದು ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷ ಸೇರ್ಪಡೆಗೊಂಡಿದ್ದ ಹಿರಿಯ ಮುಖಂಡ ಅರ್ಜುನ್ ಮೂರ್ತಿ ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಕಮಲಾಲಯಂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮತ್ತೆ ಬಿಜೆಪಿ ಸೇರ್ಪಡೆಗೊಂಡ ಅರ್ಜುನ್ ಮೂರ್ತಿರನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಸ್ವಾಗತಿಸಿದರು.
ಬಿಜೆಪಿ ರಾಜ್ಯ ಬೌದ್ಧಿಕ ಘಟಕದ ಅಧ್ಯಕ್ಷರಾಗಿದ್ದ ರಾ. ಅರ್ಜುನ್ ಮೂರ್ತಿ ಅವರು ರಜನಿಕಾಂತ್ ಅವರ ರಜನಿ ಮಕ್ಕಳ್ ಮಂಡ್ರಮ್ ಸಂಘಟನೆಯ ಮುಖ್ಯ ಸಂಯೋಜಕರಾಗಿದ್ದರು.
'ತಮಿಳುನಾಡಿನಲ್ಲಿ ಬದಲಾವಣೆ ತರುವ ಸಲುವಾಗಿ ನಾನು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೇನೆ. ಈ ಯೋಜನೆಯಲ್ಲಿ ನಾನು ಸಣ್ಣ ಸಾಧನವಷ್ಟೇ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸಾಗಲಿದೆ. ನನ್ನ ಪ್ರಯತ್ನದಲ್ಲಿ ನಾನು ಸೋಲು ಕಂಡರೆ ಅದು ನಿಮ್ಮ ಸೋಲಾಗಲಿದೆ. ಈ ಪರಿವರ್ತನೆಯ ಪ್ರಯತ್ನದಲ್ಲಿ ನೀವು ನನ್ನ ಜತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ಎಲ್ಲವನ್ನೂ ಪರಿವರ್ತನೆ ಮಾಡೋಣ. ಅದು ಈಗ ಸಾಧ್ಯವಾಗದಿದ್ದರೆ, ಎಂದಿಗೂ ಸಾಧ್ಯವಾಗಲಾರದು' ಎಂದು ರಜನಿ ಘೋಷಿಸಿದ್ದರು. ಆದರೆ, ರಾಜಕೀಯದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ರಜನಿಕಾಂತ್ ಅವರು ಸುದೀರ್ಘ ಪತ್ರದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಮಿಳುನಾಡು ಬಿಜೆಪಿಯ ಈ ಹಿಂದಿನ ಮುಖ್ಯಸ್ಥ, ಹಾಲಿ ಕೇಂದ್ರ ಸಚಿವ ಎಲ್ ಮುರಗನ್ ಅವರು ಈ ಹಿಂದೆ ನೀಡಿದ್ದ ಪ್ರತಿಕ್ರಿಯೆ ಇಲ್ಲಿ ಉಲ್ಲೇಖಾರ್ಹ. ಡಿಎಂಕೆಯಿಂದ ಉಚ್ಚಾಟನೆ ಮಾಡಲ್ಪಟ್ಟಿರುವ ಎಂಕೆ ಅಳಗಿರಿ (ದಿವಂಗತ ಮಾಜಿ ಸಿಎಂ ಎಂ ಕರುಣಾನಿಧಿ ಪುತ್ರ) ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅಧಿಕೃತವಾಗಿ ಇನ್ನೂ ಮಾತುಕತೆಯಾಗಿಲ್ಲ. ಒಂದು ವೇಳೆ ಅಳಗಿರಿ ಬಿಜೆಪಿ ಸೇರಲು ಬಯಸಿದರೆ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದಿದ್ದರು. ಜೊತೆಗೆ ಬಿಜೆಪಿ ತೊರೆದು ರಜನಿ ಬಳಗ ಸೇರಿದ್ದ ಅರ್ಜುನ್ ಮೂರ್ತಿ ಅವರು ಮತ್ತೆ ಪಕ್ಷಕ್ಕೆ ಮರಳಿದರೂ ಸ್ವಾಗತಿಸುವುದಾಗಿ ಹೇಳಿದ್ದರು. ಅದರಂತೆ ಅರ್ಜುನ್ ಮೂರ್ತಿ ಬಿಜೆಪಿಗೆ ಬಂದಿದ್ದಾರೆ.
Breaking News: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಎಂಟ್ರಿ ಇಲ್ಲ
Recommended Video
72 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದ್ದರು. ಚುನಾವಣೆಯಲ್ಲಿ ಸ್ಪರ್ಧೆಯಲ್ಲದೆ, ರಾಜಕೀಯದಿಂದಲೇ ಹಿಂದೆ ಸರಿದಿರುವುದು ಆಡಳಿತಾರೂಢ ಎಐಎಡಿಎಂಕೆಗೆ ಲಾಭವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ರಜನಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ತಮಿಳ್ ಅರುವಿ ಮಣಿಯನ್ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಹೊಸ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದೇ ನಂಬಲಾಗಿತ್ತು. ಆದರೆ, ಸಂಪೂರ್ಣವಾಗಿ ರಾಜಕೀಯದಿಂದ ಹಿಂದೆ ಉಳಿದಿರುವುದು ಹಲವರಿಗೆ ಹಿನ್ನಡೆಯಾಗಿದೆ.