ಲೈಂಗಿಕ ಹಗರಣ: ತಮಿಳುನಾಡು ಬಿಜೆಪಿ ಮುಖಂಡನ ರಾಜೀನಾಮೆ, ಅಣ್ಣಾಮಲೈ ಹೇಳಿದ್ದೇನು?
ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಟಿ ರಾಘವನ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಈ ಕುರಿತು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮಾತನಾಡಿದ್ದಾರೆ.
ಅಣ್ಣಾಮಲೈ ತನ್ನ ಹೇಳಿಕೆಯಲ್ಲಿ ಯೂಟ್ಯೂಬರ್ ಹಾಗೂ ಪತ್ರಕರ್ತ ಮದನ್ ರವಿಚಂದ್ರನ್ ಅವರನ್ನು ಭೇಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಹಾಗೂ ಕೆಟಿ ರಾಘವನ್ ವಿರುದ್ಧ ವಿಡಿಯೋ ಸಾಕ್ಷ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಣ್ಣಾಮಲೈ ಮಾತನಾಡಿ'' ಈ ವಿಡಿಯೋವನ್ನು ಬಿಡುಗಡೆ ಮಾಡಿದ ವ್ಯಕ್ತಿ ಮದನ್ ರವಿಚಂದ್ರನ್ ಅವರು ನನ್ನನ್ನು ಭೇಟಿಯಾದರು ಮತ್ತು ಎರಡು ಬಾರಿ ನನ್ನ ಕಚೇರಿಯಲ್ಲಿ ನನ್ನೊಂದಿಗೆ ಮಾತನಾಡಿದ್ದಾರೆ ಎಂಬುದು ಸತ್ಯ. ಅವರು ಪಕ್ಷದ ಕಚೇರಿಯಲ್ಲಿ ಮೊದಲ ಬಾರಿಗೆ ಭೇಟಿಯಾದಾಗ ಪದಾಧಿಕಾರಿಯೊಬ್ಬರ ವಿಡಿಯೋ ನನ್ನ ಬಳಿ ಇದೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದರು''.

''ಮೊದಲು ಸಾಕ್ಷ್ಯವನ್ನು ತೋರಿಸಿ ಬಳಿಕ ಮಾತನಾಡೋಣ ಎಂದು ಹೇಳಿದ್ದೆ ಆದರೆ ತಕ್ಷಣಕ್ಕೆ ನನಗೆ ಯಾವುದೇ ಸಾಕ್ಷ್ಯಗಳನ್ನು ಅವರು ನೀಡಿರಲಿಲ್ಲ'' ಎಂದರು.
ಎರಡನೇ ಬಾರಿಗೆ ಮದನ್ ಅವರು ನನ್ನನ್ನು ಭೇಟಿಯಾದಾಗ ಮತ್ತೆ ಅದೇ ಪ್ರಶ್ನೆ ಕೇಳಿದರು, ಯಾವುದೇ ವಿಡಿಯೋವನ್ನು ನೀಡದೆ, ನಿಮ್ಮ ಪಕ್ಷದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು. ನಾನು ಮೊದಲೇ ಹೇಳಿದ್ದೇನೆ ಸಾಕ್ಷ್ಯವನ್ನು ನೋಡದೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ.
ಸ್ಕ್ರೀನ್ ಶಾಟ್ ಎಲ್ಲೆಡೆ ಹರಿದಾಡುತ್ತಿದೆ. ಹಾಗೆಯೇ ಇನ್ನೂ 15 ಮಂದಿ ಬಿಜೆಪಿ ನಾಯಕರ ವಿಡಿಯೋ ನನ್ನ ಬಳಿ ಇದೆ ಎಂದು ಮದನ್ ಹೇಳುತ್ತಿದ್ದು, ಇದರ ಹಿಂದಿರುವ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ತನಿಖಾ ಸಮಿತಿಯು ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ಆರಂಭಿಸಿದೆ. ಪಕ್ಷದ ಮಹಿಳೆಯೊಬ್ಬರೊಂದಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ಮದನ್ ರವಿಚಂದ್ರನ್ ಎಂಬುವವರು ಕುಟುಕು ಕಾರ್ಯಾಚರಣೆಯ ವಿಡಿಯೋ ಬಹಿರಂಗಪಡಿಸಿದ್ದರು. ಈ ಘಟನೆ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದೆ.
ಬಿಜೆಪಿ ಸದಸ್ಯರೇ ಆಗಿರುವ ಯೂಟ್ಯೂಬರ್ ಮದನ್ ರವಿಚಂದ್ರನ್ ಮಂಗಳವಾರ ಬೆಳಿಗ್ಗೆ ಈ ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ರಾಘವನ್ ರಾಜೀನಾಮೆ ಸಲ್ಲಿಸಿದ್ದಾರೆ. ತಮಿಳುನಾಡು ಬಿಜೆಪಿಯ ಕನಿಷ್ಠ 15 ಮುಖಂಡರ ಈ ರೀತಿಯ ವಿಡಿಯೋಗಳು ತಮ್ಮ ಬಳಿ ಇರುವುದಾಗಿ ಮದನ್ ಹೇಳಿಕೊಂಡಿದ್ದಾರೆ.
ಈ ವಿಡಿಯೋ ಕುರಿತು ಮೊದಲು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಸಂಪರ್ಕಿಸಿದ್ದು, ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸುವ ಸಲುವಾಗಿ ಈ ವಿಡಿಯೋ ಬಹಿರಂಗಪಡಿಸಿದರೆ ತೊಂದರೆಯಿಲ್ಲ ಎಂದು ಅಣ್ಣಾಮಲೈ ಹೇಳಿದ್ದರು ಎಂದು ಮದನ್ ತಿಳಿಸಿದ್ದಾರೆ.
ತಾವು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನು ರಾಘವನ್ ಅವರು ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ. ತಮಿಳುನಾಡಿನ ಜನರು ಹಾಗೂ ತಮ್ಮ ಸುತ್ತಲಿನ ಜನರಿಗೆ ತಾವು ಎಂತಹ ವ್ಯಕ್ತಿ ಎನ್ನುವುದು ತಿಳಿದಿದೆ ಎಂದು ಹೇಳಿದ್ದಾರೆ.
'ಕಳೆದ 30 ವರ್ಷಗಳಿಂದ ನಾನು ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದಿದ್ದೇನೆ. ಇಂದು ಬೆಳಿಗ್ಗೆ ನನ್ನ ಕುರಿತಾದ ವಿಡಿಯೋದ ಬಗ್ಗೆ ತಿಳಿಯಿತು. ನನಗೆ ಹಾಗೂ ನನ್ನ ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇದನ್ನು ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ.
ವಿಡಿಯೋ ಬಹಿರಂಗವಾದ ಬಳಿಕ ಅಣ್ಣಾಮಲೈ ಅವರೊಂದಿಗೆ ಮಾತನಾಡಿದ್ದು, ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. 'ನಾನು ಆರೋಪಗಳನ್ನು ನಿರಾಕರಿಸುತ್ತೇನೆ. ಕಾನೂನು ಹೋರಾಟ ನಡೆಸುತ್ತೇನೆ. ಸತ್ಯ ಹೊರಬೀಳಲಿದೆ' ಎಂದಿದ್ದಾರೆ.












Click it and Unblock the Notifications