ಒಪಿಎಸ್ ಗೆ ಬೆಂಬಲ ಸೂಚಿಸಿದ ಎಐಎಡಿಎಂಕೆ ಅಧ್ಯಕ್ಷ ಮಧುಸೂದನ್
ತಮಿಳುನಾಡು ರಾಜಕೀಯದಲ್ಲಿ ಹೊಸ ಹವಾ. ಎಐಎಡಿಎಂಕೆ ಅಧ್ಯಕ್ಷ ಡಿ.ಮಧುಸೂದನ್ ತಮ್ಮ ಬೆಂಬಲವನ್ನು ಒ.ಪನ್ನೀರ್ ಸೆಲ್ವಂಗೆ ಎಂದಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಶಶಿಕಲಾ ನಟರಾಜನ್ ಬಣಕ್ಕೆ ಹಿನ್ನಡೆಯಂತೆ ಗೋಚರಿಸುತ್ತಿದೆ
ಚೆನ್ನೈ, ಫೆಬ್ರವರಿ 9: ಎಐಎಡಿಎಂಕೆ ಅಧ್ಯಕ್ಷ ಡಿ.ಮಧುಸೂದನ್ ಇದೀಗ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ. ಚೆನ್ನೈನ ಗ್ರೀನ್ ವೇಸ್ ನಲ್ಲಿರುವ ಒಪಿಎಸ್ ಮನೆಗೆ ಭೇಟಿ ನೀಡಿದ್ದ ಅವರು, ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಆ ಮೂಲಕ ಪನ್ನೀರ್ ಸೆಲ್ವಂಗೆ ಒಂದಿಷ್ಟು ಬಲ ಬಂದಂತಾಗಿದೆ.
ಆದರೆ, ತಮಿಳುನಾಡು ರಾಜಕೀಯದ ತಕ್ಕಡಿ ಅತ್ತಿತ್ತ ತೂಗಾಡುತ್ತಲೇ ಇದೆ. ಮಂಗಳವಾರ ರಾತ್ರಿಯಿಂದ ಬಿರುಸುಗೊಂಡ ಚಟುವಟಿಕೆಗಳು ಗುರುವಾರ ಮಧ್ಯಾಹ್ನದ ವೇಳೆಗೆ ತೀವ್ರ ಸ್ವರೂಪ ಪಡೆದು, ಶಶಿಕಲಾ ನಟರಾಜನ್ ಮತ್ತು ಅವರ ಬೆಂಬಲಿಗರಿಗೆ ಹಿನ್ನಡೆಯಾದಂತೆ ಗೋಚರಿಸುತ್ತಿದೆ.[ತಮಿಳ್ನಾಡು ಬೃಹನ್ನಾಟಕ : ರಾಜ್ಯಪಾಲರ ಮುಂದಿರುವ ಆಯ್ಕೆಗಳು]
ಎಐಎಡಿಎಂಕೆ ಶಾಸಕರನ್ನು ರೆಸಾರ್ಟ್ ನಲ್ಲಿ ಇರುವಂತೆ ನೋಡಿಕೊಳ್ಳಲಾಗಿದ್ದು, ಗುರುವಾರ ಸಂಜೆ ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ವಹಿಸಿರುವ ವಿದ್ಯಾಸಾಗರ್ ರಾವ್ ಅವರು ಶಶಿಕಲಾ ಭೇಟಿಗೆ ಅವಕಾಶ ನೀಡಿದ್ದಾರೆ. ಇದೀಗ ಮುಂದೆ ಏನಾಗಬಹುದು ಎಂಬುದು ಕುತೂಹಲದ ತುತ್ತ ತುದಿ ತಲುಪಿದೆ.
ಇದೀಗ ಸ್ಪಷ್ಟವಾಗಿ ಎರಡು ಬಣಗಳು ಕಾಣಿಸುತ್ತಿವೆ. ಅದರಲ್ಲೂ ಎಐಎಡಿಎಂಕೆ ಅಧ್ಯಕ್ಷ ಮಧುಸೂದನ್ ಅವರು ಪನ್ನೀರ್ ಸೆಲ್ವಂ ಬಣಕ್ಕೆ ಜಿಗಿದಿರುವುದರಿಂದ ಮುಂದಿನ ನಡೆಗಳು ಶಶಿಕಲಾ ನಟರಾಜನ್ ಅವರಿಗೆ ಸಲೀಸಲ್ಲ ಎಂಬುದು ಸ್ಪಷ್ಟವಾಗುತ್ತಿದೆ.