ಅಸೆಂಬ್ಲಿ ಚುನಾವಣೆಗೂ ಮುನ್ನ, ಎಐಎಡಿಎಂಕೆಯಲ್ಲಿ ಬಿರುಗಾಳಿ: ಓ ಪನ್ನೀರ್ ಸೆಲ್ವಂ ರಾಜೀನಾಮೆ?
ಚೆನ್ನೈ, ಅ 6: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದ ಟಾಪ್ ನಾಯಕರಿಬ್ಬರ ನಡುವಿನ ಕಲಹ ತೀವ್ರಗೊಂಡಿದೆ.
ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ನಡುವಿನ ಹಲವು ತಿಂಗಳ ಶೀತಲ ಸಮರದಿಂದಾಗಿ, ಬಣ ರಾಜಕೀಯ ದಿನಕ್ಕೊಂದು ಹೊಸರೂಪ ಪಡೆಯುತ್ತಿದ್ದು, ಪಕ್ಷ ಇಬ್ಬಾಗವಾಗುವತ್ತ ಸಾಗುತ್ತಿದೆ.
"ಇದುವರೆಗೆ ಏನು ನಡೆದಿದೆಯೋ ಒಳ್ಳೆಯದಕ್ಕಾಗಿಯೇ ನಡೆದಿದೆ. ಈಗ ನಡೆಯುತ್ತಿರುವುದು ಸಹ ಒಳ್ಳೆಯದಕ್ಕೆ. ಮುಂದೆ ನಡೆಯುವುದೂ ಸಹ ಒಳ್ಳೆಯದಕ್ಕೆ" ಎಂದು ಓಪಿಎಸ್ ಮಾಡಿರುವ ಟ್ವೀಟ್, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಓಪಿಎಸ್ ಟ್ವೀಟ್ ಬೆನ್ನಲ್ಲೇ, ಸಿಎಂ ಇಪಿಎಸ್, ತಮ್ಮಾಪ್ತರ ಸಾಲುಸಾಲು ಸಭೆಗಳನ್ನು ನಡೆಸಿದ್ದಾರೆ. ಇಬ್ಬರ ನಡುವಿನ ತಿಕ್ಕಾಟದಲ್ಲಿ ಬಣ ರಾಜಕೀಯ ತೀವ್ರಗೊಂಡಿದ್ದು, ಒಂದು ಹಂತದಲ್ಲಿ ಪನ್ನೀರ್ ಸೆಲ್ವಂ, ಎಐಎಡಿಎಂಕೆ ಪಕ್ಷದಿಂದ ಹೊರಬರಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಏನಿದು ವಿವಾದ?

ತಮಿಳುನಾಡು ಅಸೆಂಬ್ಲಿ ಚುನಾವಣೆ
ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಈ ಸಂಬಂಧ ನಡೆದ ಎಐಎಡಿಎಂಕೆ ಸಭೆಯಲ್ಲಿ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಇ.ಪಳನಿಸ್ವಾಮಿ ಮತ್ತು ಓ.ಪನ್ನೀರ್ ಸೆಲ್ವಂ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಸಭೆಯಲ್ಲಿ ಇಬ್ಬರು ನಾಯಕರ ನಡುವೆ ಭಾರೀ ವಾಗ್ಯುದ್ದವೇ ನಡೆದಿದೆ ಎಂದು ವರದಿಯಾಗಿತ್ತು.

ಒಂದು ವಾರ ಮೌನಕ್ಕೆ ಶರಣಾಗಿದ್ದ ಪನ್ನೀರ್ ಸೆಲ್ವಂ
ಈ ಸಭೆಯ ನಂತರ ಒಂದು ವಾರ ಮೌನಕ್ಕೆ ಶರಣಾಗಿದ್ದ ಪನ್ನೀರ್ ಸೆಲ್ವಂ, ಎರಡು ದಿನಗಳ ಹಿಂದೆ, ತಮ್ಮಾಪ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಾದ ನಂತರ ಪನ್ನೀರ್ ಸೆಲ್ವಂ, "ತಮಿಳುನಾಡು ಜನರು ಮತ್ತು ಪಕ್ಷದ ಕಾರ್ಯಕರ್ತರ ಒಳ್ಳೆಯದಕ್ಕಾಗಿ, ನನ್ನ ಮುಂದಿನ ನಡೆಯೂ ಒಳ್ಳೆಯದಾಗಿರುತ್ತದೆ"ಎಂದು ಟ್ವೀಟ್ ಮಾಡಿದ್ದಾರೆ.

ಬ್ಯಾನರ್ ಗಳನ್ನು ಪಳನಿಸ್ವಾಮಿ ತೆಗೆಯಲು ಸೂಚನೆ
ಪಕ್ಷದ ಸಿಎಂ ಅಭ್ಯರ್ಥಿಯನ್ನು ಇನ್ನೆರಡು ದಿನಗಳಲ್ಲಿ ಘೋಷಿಸಲು ನಿರ್ಧರಿಸಲಾಗಿತ್ತು. ಆದರೆ, ಓಪಿಎಸ್ ಮಾಡಿರುವ ಟ್ವೀಟ್ ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದಲ್ಲದೇ, ತಮಿಳುನಾಡಿನ ಕೆಲವು ಭಾಗದಲ್ಲಿ 'ಮುಂದಿನ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ' ಎಂದು ಹಾಕಲಾಗಿದ್ದ ಬ್ಯಾನರ್ ಗಳನ್ನು ಪಳನಿಸ್ವಾಮಿ ತೆಗೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಓಪಿಎಸ್ ಮತ್ತು ಇಪಿಎಸ್ ನಡುವೆ ಮಾತಿನ ಚಕಮಕಿ
ಕಳೆದ ಸೆಪ್ಟಂಬರ್ 28ರಂದು ಪಾರ್ಟಿಯ ಕೋರ್ ಕಮಿಟಿ ಸಭೆಯಲ್ಲಿ ಓಪಿಎಸ್ ಮತ್ತು ಇಪಿಎಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ನಂತರ, "ಅಕ್ಟೋಬರ್ ಏಳರಂದು ಇಬ್ಬರು ನಾಯಕರು ಜಂಟಿಯಾಗಿ ಸಿಎಂ ಅಭ್ಯರ್ಥಿ ಯಾರು ಎನ್ನುವುದನ್ನು ಪ್ರಕಟಿಸಲಿದ್ದಾರೆ" ಎಂದು ಪಕ್ಷದ ಸಂಚಾಲಕರು ಪ್ರಕಟಿಸಿದ್ದರು.

ಪರಪ್ಪನ ಅಗ್ರಹಾರ ಜೈಲಿನಿಂದ ಶಶಿಕಲಾ ಬಿಡುಗಡೆಯಾಗುವ ಸಾಧ್ಯತೆ
ತಮಿಳುನಾಡು ರಾಜಕೀಯದಲ್ಲಿ ಹೊಸಹೊಸ ಸುದ್ದಿಗಳು ಹೊರಬೀಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಮಾತುಕತೆಯ ಮೂಲಕ ಸರಿಹೋಗದಿದ್ದಲ್ಲಿ, ಪನ್ನೀರ್ ಸೆಲ್ವಂ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಶಶಿಕಲಾ ಬಿಡುಗಡೆಯಾಗುತ್ತಿರುವುದಕ್ಕೂ, ಎಐಎಡಿಎಂಕೆಯಲ್ಲಿನ ಸದ್ಯದ ಬೆಳವಣಿಗೆಗೂ ಸಂಬಂಧವಿದೆಯಾ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications