ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ನಡುವೆ ಬಿರುಕು?
ಚೆನ್ನೈ, ಮಾರ್ಚ್.05: ತಮಿಳುನಾಡು ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ತಿಕ್ಕಾಟ ಶುರುವಾಗಿದೆ. ಕೆಲವೇ ಕೆಲವು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡುವ ಮೂಲಕ ಪಕ್ಷಕ್ಕೆ ಡಿಎಂಕೆ ಅವಮಾನಿಸಿದೆ ಎಂದು ರಾಜ್ಯ ಘಟಕ ಸಿಡಿಮಿಡಿಗೊಂಡಿದೆ.
ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಲಾಯಿತು. ಶುಕ್ರವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಕೆ.ಎಸ್. ಅಳಗಿರಿ ಈ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಿಗೆ ಬೇಡಿಕೆಯಿಟ್ಟಿತ್ತು. ಕಳೆದ ವರ್ಷ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.ಆದರೆ ಈ ಬಾರಿ ಡಿಎಂಕೆ ಕೇವಲ 18 ಸ್ಥಾನಗಳನ್ನು ಬಿಟ್ಟುಕೊಡುವುದಕ್ಕೆ ಯೋಚಿಸುತ್ತಿದೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಗೆ ಗರಿಷ್ಠ 25 ಕ್ಷೇತ್ರಗಳನ್ನು ನೀಡುವುದಾಗಿ ಡಿಎಂಕೆ ಹೇಳುತ್ತಿದೆ.

ಡಿಎಂಕೆ ಷರತ್ತು ಒಪ್ಪಿಕೊಂಡರೆ ಕಾಂಗ್ರೆಸ್ಸಿಗೆ ಅವಮಾನ:
ಡಿಎಂಕೆ ನೀಡುವ ಸೀಮಿತ ಕ್ಷೇತ್ರಗಳನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಅವಮಾನವಾಗುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದೇ ಆದರೆ, ತಮಿಳುನಾಡಿನಲ್ಲಿ ಪಕ್ಷವನ್ನು ನಾಶಮಾಡಿದಂತೆ ಆಗುತ್ತದೆ. ಆದ್ದರಿಂದ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡಿ ಡಿಎಂಕೆ ಜೊತೆ ಮಾತುಕತೆ ನಡೆಸಬೇಕೆಂದು ಟಿಪಿಸಿಸಿ ಅಧ್ಯಕ್ಷ ಕೆ.ಎಸ್ ಆಳಗಿರಿ ಕೇಂದ್ರ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಭೆಯಲ್ಲಿ ಕೋಲಾಹಲ:
ಕಾಂಗ್ರೆಸ್ ಪಕ್ಷಕ್ಕೆ ಡಿಎಂಕೆ ಕಡಿಮೆ ಸ್ಥಾನಗಳನ್ನು ನೀಡುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದಾಗ ಆಂತರಿಕ ಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಯಿತು. ಈ ವೇಳೆಯಲ್ಲಿ ಸಭೆಯಲ್ಲಿ ಹಾಜರಾಗಿದ್ದ ಕಾರ್ಯಕರ್ತರೆಲ್ಲ ಏಕಾಂಗಿ ಆಗಿ ಚುನಾವಣೆ ಎದುರಿಸುವುದೇ ಒಳಿತು ಎಂದು ಒತ್ತಾಯಿಸಿದರು. "ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಳಗಿರಿ ಧ್ವನಿ ಸ್ವಲ್ಪ ತಗ್ಗುತ್ತಿದ್ದಂತೆ ಉಳಿದವರು ಧ್ವನಿ ಏರಿಸಿ ಮಾತನಾಡುವುದಕ್ಕೆ ಆರಂಭಿಸಿದರು. ಏಕಾಂಗಿಯಾಗಿ ಚುನಾವಣೆಗೆ ಹೋಗೋಣ ಎಂದು ಕೂಗಲು ಆರಂಭಿಸಿದರು. ಈ ಹಿಂದೆ ನಡೆದ ಯಾವುದೇ ಸಭೆಗಳಲ್ಲಿ ಇಂಥ ವಾತಾವರಣವನ್ನು ನಾನು ಕಂಡಿರಲಿಲ್ಲ" ಎಂದು ಸಭೆಯಲ್ಲಿ ಉಪಸ್ಥಿತರಾಗಿದ್ದ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಮೌನಕ್ಕೆ ಶರಣಾದ ಕಾಂಗ್ರೆಸ್ ಉಸ್ತುವಾರಿ:
ತಮಿಳುನಾಡಿನ ಕಾಂಗ್ರೆಸ್ ಸಭೆಯಲ್ಲೇ ಕುಳಿತಿದ್ದರೂ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್, ದುಃಖಿತ ಕಾರ್ಯಕರ್ತರು ಮತ್ತು ನಾಯಕರನ್ನು ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಬದಲಿಗೆ ಅವರು ಮೌನಕ್ಕೆ ಶರಣಾಗಿದ್ದರು. ಅದರ ಬಳಿಕ ಚುನಾವಣೆಯಲ್ಲಿ ರಾಜ್ಯ ಘಟಕವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ಅನುಮೋದನೆಗಾಗಿ ತನ್ನ ನಿರ್ಧಾರವನ್ನು ಕಳುಹಿಸಲಿದೆ ಎಂದು ಪಕ್ಷದ ಮುಖಂಡರು ಘೋಷಿಸಿದರು.












Click it and Unblock the Notifications