46 ವರ್ಷಗಳ ನಂತರ ಕಪ್ಪು ಕನ್ನಡಕಕ್ಕೆ ಗುಡ್ ಬೈ ಹೇಳಿದ್ದ ಕರುಣಾ
ತಮಿಳುನಾಡು ಕಂಡ ವರ್ಣರಂಜಿತ ರಾಜಕಾರಣಿ, ಅಪ್ರತಿಮ ಕಲಾಕಾರ (ಕಲೈನಾರ್), ಐದು ಬಾರಿ ಮುಖ್ಯಮಂತ್ರಿಯಾಗಿ ಮೆರೆದು, ತಮ್ಮ 94 ವರ್ಷದಲ್ಲಿ ಅಸ್ತಂಗತರಾದ ಮುತ್ತುವೇಲ್ ಕರುಣಾನಿಧಿ ಅವರನ್ನು, ಅವರು ಸದಾಕಾಲ ತೊಡುತ್ತಿದ್ದ ಕಪ್ಪು ಕನ್ನಡಕವಿಲ್ಲದೆ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ
ಆಪ್ತ ಸ್ನೇಹಿತರಾಗಿದ್ದ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರಂತೆಯೇ ಕರುಣಾನಿಧಿ ಕೂಡ ಟ್ರೇಡ್ ಮಾರ್ಕ್ ತಂಪು ಕನ್ನಡಕವನ್ನು ಸದಾಕಾಲ ಧರಿಸಿರುತ್ತಿದ್ದರು. ಎಂಜಿಆರ್ ಅವರನ್ನು ತಂಪು ಕನ್ನಡಕ ಹಾಕಿಯೇ ಹೂಳಲಾಯಿತು.
ನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪ
ಇದು ಒಂದೆರಡು ವರ್ಷಗಳ ಅವಧಿಯಲ್ಲ, ಸತತ 46 ವರ್ಷಗಳ ಕಾಲ ಕರುಣಾನಿಧಿಯವರು ಕಪ್ಪು ಕನ್ನಡಕವನ್ನು ಧರಿಸುತ್ತಿದ್ದರು. ಆದರೆ, ವೈದ್ಯರ ಅಣತಿಯ ಮೇರೆಗೆ ಭಾರವಾದ ಕಪ್ಪು ಕನ್ನಡದ ಬದಲಾಗಿ ಕಂದು ಶೇಡ್ ಇರುವ ಹಗುರ ಕನ್ನಡಕವನ್ನು ಅವರು 2017ರಿಂದ ಧರಿಸಲು ಆರಂಭಿಸಿದ್ದರು. 40 ದಿನಗಳ ಕಾಲ ದೇಶದಾದ್ಯಂತ ಹುಡುಕಾಡಿದ ನಂತರ ಜರ್ಮನಿಯಿಂದ ಹೊಸ ಕನ್ನಡಕವನ್ನು ತರಲಾಗಿತ್ತಂತೆ.
ಕಪ್ಪು ಕನ್ನಡಕ ಧರಿಸುತ್ತಿದ್ದುದಕ್ಕೆ ಕಾರಣವೂ ಇತ್ತು. 1960ರಲ್ಲಿ ಅಪಘಾತಕ್ಕೊಳಗಾದಾಗ ಅವರ ಕಣ್ಣಿಗೆ ತೀವ್ರ ಗಾಯವಾಗಿತ್ತು. ಅವರ ಎಡಗೈಗೆ ಹಾನಿಯಾಗಿತ್ತು. ಅದನ್ನು ಮುಚ್ಚಲೆಂದು ಅವರು ಕಪ್ಪು ಕನ್ನಡಕ ಧರಿಸಲು ಆರಂಭಿಸಿದ್ದರು. ನಂತರ ಸಾರ್ವಜನಿಕವಾಗಿ ಅವರು ಕಪ್ಪು ಕನ್ನಡಕ ತೆಗೆದಿದ್ದೇ ಇಲ್ಲ.
ಅಪರೂಪದ ರಾಜಕಾರಣಿ- ಸಾಹಿತಿ ಮುತ್ತುವೇಲ್ ಕರುಣಾನಿಧಿ ನಂತರ ಮುಂದೇನು?
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸುದೀರ್ಘ ನಾಯಕರಾಗಿ ಆಳಿದ ಕರುಣಾನಿಧಿ ಅವರು ಕಪ್ಪು ಕನ್ನಡಕ ಮಾತ್ರವಲ್ಲ ಹೆಗಲ ಮೇಲೆ ಹಳದಿ ಬಣ್ಣದ ವಸ್ತ್ರ ಯಾವಾಗಲೂ ಧರಿಸುತ್ತಿದ್ದರು. ಪ್ರತಿದಿನ ಗಡ್ಡವನ್ನು ಬೋಳಿಸಿಕೊಳ್ಳುವುದನ್ನು ಕೂಡ ಅವರು ಮರೆಯುತ್ತಿರಲಿಲ್ಲವಂತೆ. ಹೀಗಿತ್ತು ಅವರ ಶಿಸ್ತುಬದ್ಧ ಜೀವನ.