ಆರ್ ಕೆ ನಗರ್ ಉಪ ಚುನಾವಣೆ ಕಣಕ್ಕೆ ನಟ ವಿಶಾಲ್, ರಂಗೇರಿದ ಸ್ಪರ್ಧೆ
ಚೆನ್ನೈ, ಡಿಸೆಂಬರ್ 3: ಜಯಲಲಿತಾ ಸಾವಿನಿಂದ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ನಟ ವಿಶಾಲ್ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 21ಕ್ಕೆ ಚುನಾವಣೆ ನಡೆಯಲಿದ್ದು, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ.
ದಕ್ಷಿಣ ಭಾರತ ಚಿತ್ರ ನಟರು ಹಾಗೂ ನಿರ್ಮಾಪಕರ ಒಕ್ಕೂಟದ ನೇತೃತ್ವ ವಹಿಸಿಕೊಂಡಿರುವ ವಿಶಾಲ್, ಜನರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ. ಜನರಿಗೆ ಏನು ಬೇಕು ಅಂತ ಕೇಳಿದರೆ ಅವರಿಗಾಗಿ ಆ ಕೆಲಸ ಮಾಡಲು ನಾನು ಸಿದ್ಧ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಸೋಮವಾರದಂದು (ಡಿಸೆಂಬರ್ 4) ನಾಮಪತ್ರ ಸಲ್ಲಿಸುವುದಾಗಿ ವಿಶಾಲ್ ತಿಳಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲಾಗಿ ಚಿತ್ರರಂಗದ ಮಂದಿ ತಮಿಳುನಾಡು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. "ನಾನು ಕಮಲ್ ಹಾಸನ್ ರನ್ನು ಭೇಟಿ ಮಾಡಿಲ್ಲ" ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಎಐಎಡಿಎಂಕೆಯಿಂದ ಮಧುಸೂದನ್, ಡಿಎಂಕೆಯಿಂದ ಮರುಧು ಗಣೇಶ್ ಹಾಗೂ ಬಿಜೆಪಿಯಿಂದ ಕೆ.ನಾಗರಾಜನ್ ಕಣಕ್ಕಿಳಿದಿದ್ದಾರೆ. ಇನ್ನು ಎಐಎಡಿಎಂಕೆಯಿಂದ ಮೂಲೆಗುಂಪಾಗಿರುವ ಟಿಟಿವಿ ದಿನಕರನ್ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ.












Click it and Unblock the Notifications