ತಮಿಳುನಾಡು ಚುನಾವಣೆ; ತಮ್ಮ ಸ್ಪರ್ಧಾ ಕಣ ಘೋಷಿಸಿದ ಕಮಲ ಹಾಸನ್
ಚೆನ್ನೈ, ಮಾರ್ಚ್ 12: ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಪಕ್ಷಗಳ ಮೈತ್ರಿ ಹಾಗೂ ಸೀಟು ಹಂಚಿಕೆ ಕಾರ್ಯ ಬಹುಪಾಲು ಅಂತ್ಯಗೊಂಡಿದೆ. ನಟ ಹಾಗೂ ಮಕ್ಕಳ ನೀದಿಮಯ್ಯಂ ಮುಖಂಡ ಕಮಲ ಹಾಸನ್ ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು, ತಾವು ಕಣಕ್ಕಿಳಿಯಲಿರುವ ಕ್ಷೇತ್ರವನ್ನು ಶುಕ್ರವಾರ ಘೋಷಿಸಿದ್ದಾರೆ.
ದಕ್ಷಿಣ ಕೊಯಮತ್ತೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸುವುದಾಗಿ ಕಮಲ ಹಾಸನ್ ಘೋಷಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕಣದಲ್ಲಿರಲಿದ್ದಾರೆ. ಮಹಿಳಾ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ವನತಿ ಶ್ರೀನಿವಾಸನ್ ಅವರನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಮುಂದೆ ಓದಿ...
"ಕೊಯಮತ್ತೂರು ನನ್ನ ಹೃದಯಕ್ಕೆ ಹತ್ತಿರ"
ಕೊಯಮತ್ತೂರು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಜಾಗ. ಈ ಕೊಂಗು ಪ್ರದೇಶ ಅಭಿವೃದ್ಧಿಯಾದರೆ, ಎಲ್ಲವೂ ಅಭಿವೃದ್ಧಿಯಾದಂತೆ ಎಂಬ ಮಾತಿದೆ. ಆದರೆ ಇದು ಈಗ ಭ್ರಷ್ಟಾಚಾರದ ನಗರವಾಗಿ ಮಾರ್ಪಟ್ಟಿದೆ. ಅದನ್ನು ಬದಲಿಸುವ ಯೋಜನೆ ನನ್ನದು. ನಾನು ಅಧಿಕಾರಕ್ಕೆ ಬಂದರೆ, ಕೊಯಮತ್ತೂರಿನಿಂದ ಶಂಖದ ಶಬ್ದದಂತೆ ನನ್ನ ಧ್ವನಿ ಮೊಳಗುತ್ತದೆ. ಆದರೆ ಇದನ್ನು ಸಾಧ್ಯವಾಗಿಸುವುದು ಜನರ ಕೈಯಲ್ಲಿದೆ ಎಂದು ತಮ್ಮ ಕ್ಷೇತ್ರ ಘೋಷಿಸುವ ಸಂದರ್ಭ ಕಮಲ್ ಹಾಸನ್ ಹೇಳಿದ್ದಾರೆ.
154 ಕ್ಷೇತ್ರಗಳಲ್ಲಿ ಕಮಲ ಹಾಸನ್ ಪಕ್ಷ ಸ್ಪರ್ಧೆ: 80 ಸೀಟುಗಳು ಮಿತ್ರಪಕ್ಷಗಳಿಗೆ
"ಗಾಂಧಿಯೇ ನನಗೆ ಪ್ರೇರಣೆ"
ನಾನು ನಾಯಕನಾಗಬೇಕು ಎಂದು ನನ್ನ ತಂದೆ ಬಯಸಿದ್ದರು. ಈ ಕ್ಷಣದಲ್ಲಿ ಅವರ ಮಾತು ನೆನಪಾಗುತ್ತಿದೆ. ನಾನು ರಾಜಕೀಯಕ್ಕೆ ಬರಲು ಗಾಂಧಿಯೇ ಪ್ರೇರಣೆ. ಅದು ಆಗ ನನಗೆ ಅರ್ಥವಾಗಿರಲಿಲ್ಲ. ವಾಕ್ಚಾತುರ್ಯ ಹಾಗೂ ಕೌಶಲ್ಯಕ್ಕೆ ಅವರೇ ನನ್ನ ಗುರು. ಅವರು ಚಿಕ್ಕ ವಯಸ್ಸಿನಿಂದಲೇ ನನಗೆ ಪ್ರಭಾವ ಬೀರಿದವರು ಎಂದು ಹೇಳಿಕೊಂಡಿದ್ದಾರೆ.
"ನನ್ನ ಪಕ್ಷದಲ್ಲಿ ಹಲವು ಐಎಎಸ್ ಅಧಿಕಾರಿಗಳಿದ್ದಾರೆ"
ನನ್ನ ಕುಟುಂಬದವರು, ಮುಂದೊಂದು ದಿನ ನೀನು ನಾಯಕನಾಗುತ್ತೀಯ ಎಂದಿದ್ದರು. ನನ್ನ ಸಹೋದರ ಚಂದ್ರಹಾಸನ್, ನಾನು, ರಾಜಕೀಯ ಹಾಗೂ ನನ್ನ ಶಿಕ್ಷಣ ಈ ಮೂರರ ನಡುವೆ ನಿಂತಿದ್ದರು. ಅವರಿಗೆ ನಾನು ಐಎಎಸ್ ಆಗಬೇಕು, ಆನಂತರ ರಾಜಕೀಯ ಪ್ರವೇಶಿಸಬೇಕು ಎಂಬ ಆಸೆಯಿತ್ತು. ಅವರ ಆಸೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗಿಲ್ಲ. ಆದರೆ ಈಗ ನನ್ನ ಪಕ್ಷದಲ್ಲಿ ಹಲವು ಐಎಎಸ್ ಅಧಿಕಾರಿಗಳಿದ್ದಾರೆ ಎಂದು ತಿಳಿಸಿದರು.
ತಮಿಳುನಾಡು ವಿಧಾನಸಭೆ ಚುನಾವಣೆ 2021: 171 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಐಎಡಿಎಂಕೆ
154 ಕ್ಷೇತ್ರಗಳಲ್ಲಿ ಕಮಲ ಹಾಸನ್ ಪಕ್ಷ ಸ್ಪರ್ಧೆ
ತಮಿಳುನಾಡು ವಿಧಾನಸಭೆ ಚುನಾವಣೆಯ 234 ಕ್ಷೇತ್ರಗಳ ಪೈಕಿ 154 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಂ ಪಕ್ಷ ಮಾರ್ಚ್ 9ರಂದು ಪ್ರಕಟಿಸಿತ್ತು. ಉಳಿದ 80 ಸೀಟುಗಳಲ್ಲಿ ಎಂಎನ್ಎಂನ ಮಿತ್ರ ಪಕ್ಷಗಳಾದ ಆಲ್ ಇಂಡಿಯಾ ಸಮತುವ ಮಕ್ಕಳ್ ಕಚ್ಚಿ ಮತ್ತು ಇಂಧಿಯಾ ಜನನಾಯಗ ಕಚ್ಚಿ ಪಕ್ಷಗಳು ತಲಾ 40 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿರುವುದಾಗಿ ಘೋಷಿಸಿತ್ತು. ಶುಕ್ರವಾರ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಮಾಜಿ ಐಎಎಸ್ ಅಧಿಕಾರಿ ಸಂತೋಷ್ ಬಾಬು ಪ್ರಮುಖರಾಗಿದ್ದಾರೆ. ನಟಿ ಶ್ರೀಪ್ರಿಯಾ ಅವರು ಮೈಲಾಪೋರ್ನಿಂದ ಸ್ಪರ್ಧಿಸಲಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ತಮಿಳುನಾಡು ವಿಧಾನಸಭೆಯ ಅವಧಿಯು ಮೇ 24ರಂದು ಅಂತ್ಯಗೊಳ್ಳಲಿದೆ.