ಪಟಿಯಾಲ ಘರ್ಷಣೆ ನಿಯಂತ್ರಣದಲ್ಲಿ ವೈಫಲ್ಯ: 3 ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಪಟಿಯಾಲ, ಏಪ್ರಿಲ್ 30: ಪಂಜಾಬಿನ ಪಟಿಯಾಲದಲ್ಲಿ ನಡೆದ ಖಲಿಸ್ತಾನ್ ವಿರೋಧಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ನಿಭಾಯಿಸುವಲ್ಲಿ ವಿಫಲರಾದ ಹಿನ್ನೆಲೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರವು ಶಿಸ್ತುಕ್ರಮ ತೆಗೆದುಕೊಂಡಿದೆ.
ಪಟಿಯಾಲದಲ್ಲಿ ನಡೆದ ಘರ್ಷಣೆಗಳು ಈ ಹಿಂದೆ ವರದಿ ಮಾಡಿದಂತೆ ರಾಜಕೀಯವೇ ಹೊರತು ಕೋಮುವಾದವಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ. ಈ ಸಂಬಂಧ ಮೂವರ ಹಿರಿಯ ಅಧಿಕಾರಿಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಪಂಜಾಬಿನ ಪಟಿಯಾಲದಲ್ಲಿ ನಡೆದ ಘರ್ಷಣೆಯ ಹಿಂದೆ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಶಿರೋಮಣಿ ಅಕಾಲಿದಳದ ಕಾರ್ಯಕರ್ತರಿದ್ದಾರೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ದೂಷಿಸಿದ್ದಾರೆ.
ಮೂವರು ಅಧಿಕಾರಿಗಳ ವರ್ಗಾವಣೆ:
ಪಟಿಯಾಲದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುರವ ಪ್ರತಿಕ್ರಿಯೆಯ ಬಗ್ಗೆ ಮುಖ್ಯಮಂತ್ರಿ ಭಗವಂತ್ ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟಿಯಾಲ ವಿಭಾಗದ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್, ಪಟಿಯಾಲಾ ಹಿರಿಯ ಪೊಲೀಸ್ ಅಧೀಕ್ಷಕ ಮತ್ತು ಪೊಲೀಸ್ ಅಧೀಕ್ಷಕರನ್ನು ಈ ಹಿನ್ನೆಲೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಪೊಲೀಸ್ ಅಧಿಕಾರಿಗಳ ನೇಮಕ:
ಪಟಿಯಾಲ ರೇಂಜ್ಗೆ ಐಜಿ ಆಗಿ ಮುಖ್ವಿಂದರ್ ಸಿಂಗ್ ಚಿನ್ನಾ ಅವರನ್ನು ನೇಮಿಸಲಾಗಿದೆ. ದೀಪಕ್ ಪಾರಿಕ್ ಅವರನ್ನು ಪಟಿಯಾಲದ ಹೊಸ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಇನ್ನು ವಜೀರ್ ಸಿಂಗ್ ಅವರನ್ನು ಪಟಿಯಾಲದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.
ಇಂಟರ್ನೆಟ್ ಮತ್ತು SMS ಸೇವೆಗಳ ನಿರ್ಬಂಧ:
ನಗರದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ವಿಧಿಸಲಾಗಿದ್ದ ಕರ್ಫ್ಯೂವನ್ನು ಇಂದು ಬೆಳಿಗ್ಗೆ 6 ಗಂಟೆಗೆ ತೆೆಗೆದು ಹಾಕಲಾಗಿದೆ. ಆದರೆ ವದಂತಿಗಳನ್ನು ಹರಡುವುದನ್ನು ತಡೆಯಲು ನಗರದಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು SMS ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧ್ವನಿ ಕರೆಗಳನ್ನು ಹೊರತುಪಡಿಸಿ ಎಲ್ಲಾ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಜಿಲ್ಲೆಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 6 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
"ಮೊಬೈಲ್ ಇಂಟರ್ನೆಟ್ ಸೇವೆಗಳು (2G/3G/4G/CDMA), ಎಲ್ಲಾ SMS ಸೇವೆಗಳು ಮತ್ತು ಎಲ್ಲಾ ಡೊಂಗಲ್ ಸೇವೆಗಳು ಇತ್ಯಾದಿಗಳನ್ನು ಮೊಬೈಲ್ ನೆಟ್ವರ್ಕ್ಗಳಲ್ಲಿ ಒದಗಿಸಲಾಗಿದೆ. ದೂರವಾಣಿ ಕರೆಗಳನ್ನು ಹೊರತುಪಡಿಸಿ ಪಟಿಯಾಲಾ ಜಿಲ್ಲೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿ 30 ಏಪ್ರಿಲ್ 2022ರಂದು ಬೆಳಿಗ್ಗೆ 9:30 ರಿಂದ ಸಂಜೆ 6 ರವರೆಗೆ ಈ ಆದೇಶದ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಪಂಜಾಬ್ ರಾಜ್ಯದ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು BSNL (ಪಂಜಾಬ್ ನ್ಯಾಯವ್ಯಾಪ್ತಿ) ಮುಖ್ಯಸ್ಥರಿಗೆ ಈ ಮೂಲಕ ನಿರ್ದೇಶಿಸಿದೆ," ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ವದಂತಿಗಳು ಹರಡದಂತೆ ಶಿಸ್ತುಕ್ರಮ:
ಪಂಜಾಬಿನ ಪಟಿಯಾಲದಲ್ಲಿ ನಡೆದಿರುವ ಘರ್ಷಣೆಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡುವುದನ್ನು ತಡೆಯಲು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪಟಿಯಾಲ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ. "ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಪರಿಸ್ಥಿತಿ ನಿಯಂತ್ರಣದಲ್ಲಿದೆ. ವದಂತಿಗಳನ್ನು ತಡೆಯಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೂರು ಪ್ರಕರಣಗಳಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ವಿಡಿಯೋ ತುಣುಕಿನಿಂದ ಸಂಗ್ರಹಿಸಿದ ಸಾಕ್ಷ್ಯದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು," ಎಂದು ಅವರು ಹೇಳಿದ್ದಾರೆ.
ಪಟಿಯಾಲದಲ್ಲಿ ನಡೆದ ಘರ್ಷಣೆಯ ಹಿನ್ನೆಲೆ ಏನು?:
ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಮತ್ತು ಕತ್ತಿಗಳು ಝಳಪಿಸಿವೆ. ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ರ್ಯಾಲಿಯ ಜನಸಂದಣಿಯಲ್ಲಿ ಕೆಲವರು "ಖಾಲಿಸ್ತಾನ್ ಮುರ್ದಾಬಾದ್" ಘೋಷಣೆಗಳನ್ನು ಕೂಗಿದರು. ಈ ವೇಳೆ ಸಿಖ್ ಸಂಘಟನೆಯ ಸದಸ್ಯರು ಮತ್ತು ಹಿಂದೂ ಸಂಘಟನೆಯ ಸದಸ್ಯರ ನಡುವೆ ರ್ಯಾಲಿಯಲ್ಲಿ ಪರಸ್ಪರ ಘರ್ಷಣೆ ನಡೆದಿದೆ. ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.