ಕಾಂಗ್ರೆಸ್ ಗೆಲುವು: ಬರೋಡಾದಲ್ಲಿ ಬಿಜೆಪಿಗೆ ಪಾಠ ಕಲಿಸಿದ ರೈತರು!
ಚಂಡೀಘರ್, ನವೆಂಬರ್.10: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳು ಹರಿಯಾಣದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ. ರೈತರ ಆಕ್ರೋಶದ ಕಿಚ್ಚಿಗೆ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೂಡಾ ಸೋಲು ಕಂಡಿದ್ದಾರೆ. ಬರೋಡಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂತಾರಾಷ್ಟ್ರೀಯ ಕುಸ್ತಿಪಟು ಯೋಗೇಶ್ವರ್ ದತ್ ಸೋಲಿನ ಕಹಿ ಉಂಡಿದ್ದಾರೆ.
ಬರೋಡಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದುರಾಜ್ ನರ್ವಾಲಾ ವಿರುದ್ಧ ಯೋಗೇಶ್ವರ್ ದತ್ 9200 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಮೊದಲೊಮ್ಮೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಅವರಿಗೆ ಇದು ಎರಡನೇ ಸೋಲಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ಕೃಷನ್ ಹೂಡಾ ವಿರುದ್ಧ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಸೋಲು ಅನುಭವಿಸಿದ್ದರು. ಅಂದು ಮೂರನೇ ಬಾರಿ ಶಾಸಕರಾಗಿ ಕೃಷನ್ ಹೂಡಾ ಗೆಲುವು ಸಾಧಿಸಿದ್ದರು. ಆದರೆ 2020ರ ಏಪ್ರಿಲ್ ನಲ್ಲಿ ಕೃಷನ್ ಹೂಡಾ ಅಕಾಲಿಕ ಮರಣದಿಂದಾಗಿ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಿದ್ದು, ನವೆಂಬರ್.03ರಂದು ಮತದಾನ ನಡೆಸಲಾಗಿತ್ತು.

ಜೆಜೆಪಿ ಬಿಜೆಪಿ ಮೈತ್ರಿಕೂಟಕ್ಕೆ ಸೋಲು
ಹರಿಯಾಣದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ-ಜೆಜೆಪಿ ಮೊದಲ ಬಾರಿ ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಸೋನೇಪತ್ ಜಿಲ್ಲೆಯ ಬರೋಡಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿಹೆಚ್ಚು ರೈತಾಪಿ ವರ್ಗದ ಜನರನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಜನರ ಆಕ್ರೋಶವು ಫಲಿತಾಂಶದ ಮುಖೇನ ಹೊರ ಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
|
ಬರೋಡಾದಲ್ಲಿ ಕಾಂಗ್ರೆಸ್ ಗೆಲುವು ರೈತರ ಗೆಲುವು
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕೃಷಿ ಸಂಬಂಧಿಕತ ಕಾಯ್ದೆಗಳು ರೈತ ವಿರೋಧಿಯಾಗಿದ್ದವು. ಈ ರೈತ ವಿರೋಧಿ ನಿಲುವಿನ ವಿರುದ್ಧ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಬರೋಡಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಗೆಲುವು ಕೃಷಿ ಸಂಬಂಧಿತ ಕಾಯ್ದೆಯ ವಿರೋಧಕ್ಕೆ ಸಿಕ್ಕ ಗೆಲುವು. ಇದು ರೈತರ ಗೆಲುವು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕುಮಾರಿ ಸೇಲ್ಜಾ ಟ್ವೀಟ್ ಮಾಡಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ 22000 ಮತಗಳು ಕಡಿಮೆ
ಕಳೆದ ಚುನಾವಣೆಗಿಂತಲೂ ಬರೋಡಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ 15000 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. 2019ರ ಚುನಾವಣೆಯಲ್ಲಿ 42500 ಮತಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ಸಿಗೆ ಈ ಬಾರಿ 57400 ಮತಗಳು ಬಂದಿವೆ. ಕಳೆದ ಬಾರಿ ಬಿಜೆಪಿಗೆ 37700 ಮತ್ತು ಜೆಜೆಪಿಗೆ 32500 ಮತಗಳು ಬಂದಿದ್ದವು. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಕೂಟದ ಅಭ್ಯರ್ಥಿಗೆ ಕೇವಲ 48000 ಮತಗಳು ಬಿದ್ದಿವೆ. ಅಂದರೆ ಮೊದಲಿಗಿಂತ 22000 ಮತಗಳನ್ನು ಮೈತ್ರಿಕೂಟವು ಕಳೆದುಕೊಂಡಂತೆ ಆಗಿದೆ.

ಹರಿಯಾಣ ರೈತರನ್ನು ಕೆರಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳು
ಹರಿಯಾಣದಲ್ಲಿ ಬಿಜೆಪಿ ಸೋಲಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳೇ ಕಾರಣ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ತೀವ್ರ ವಿರೋಧದ ನಡುವೆಯೂ ಹಠಕ್ಕೆ ಬಿದ್ದ ಸರ್ಕಾರವು ಮೂರು ಪ್ರಮುಖ ತಿದ್ದುಪಡಿ ಮಸೂದೆಗಳನ್ನು ಕಾಯ್ದೆಗಳಾಗಿ ಪರಿವರ್ತಿಸಿ ಜಾರಿಗೊಳಿಸಿತ್ತು. ಉತ್ತರದ ಬಹುತೇಕ ರಾಜ್ಯಗಳಲ್ಲಿ ಈ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗಿತ್ತು. ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ












Click it and Unblock the Notifications