117 ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಅಮೃತಸರಕ್ಕೆ ಭೇಟಿ ನೀಡಲು ರಾಹುಲ್ ಸಜ್ಜು
ಚಂಡೀಗಢ, ಜನವರಿ 26: 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ 117 ಪಕ್ಷದ ಅಭ್ಯರ್ಥಿಗಳೊಂದಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನವರಿ 27 ರಂದು ಅಮೃತಸರ ಮತ್ತು ಜಲಂಧರ್ಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಕ್ತಿ, ಒಗ್ಗಟ್ಟು ಪ್ರದರ್ಶನಕ್ಕೆ ರಾಹುಲ್ ಗಾಂಧಿ ಮುಂದಾಗಿದ್ದಾರೆ. ಮುಖ್ಯವಾಗಿ ರಾಹುಲ್ ಗಾಂಧಿ ಹಿಂದೂ, ಸಿಖ್ ಮತ್ತು ಪರಿಶಿಷ್ಟ ಜಾತಿ ಮತಗಳ ಮೇಲೆ ಕಣ್ಣಿಟ್ಟಿದ್ದು ಈ ಹಿನ್ನೆಲೆಯಿಂದಾಗಿ ಅಮೃತಸರ ಮತ್ತು ಜಲಂಧರ್ಗೆ ಭೇಟಿ ನೀಡಲು ಸಜ್ಜಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ರ್ಯಾಲಿಯನ್ನು ಜನವರಿ 3 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ದಿಡೀರ್ ಆಗಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಕೆಲವು ಗೊಂದಲಗಳು ಕೂಡಾ ಉಂಟಾಗಿದ್ದವು. ರಾಹುಲ್ ಗಾಂಧಿ ವಿದೇಶಕ್ಕೆ ಹೋದ ಕಾರಣದಿಂದಾಗಿ ಈ ರ್ಯಾಲಿಯನ್ನು ಮುಂದೂಡಿ ಬೇರೆ ದಿನಾಂಕ ನಿಗದಿ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿತ್ತು. ಆದರೆ ಜನವರಿ 15 ರವರೆಗೆ ರ್ಯಾಲಿಗಳನ್ನು ನಡೆಸುವುದನ್ನು ಭಾರತದ ಚುನಾವಣಾ ಆಯೋಗವು ನಿಷೇಧಿಸಿತ್ತು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮಂಗಳವಾರ ರಾಹುಲ್ ಗಾಂಧಿ ಪಂಜಾಬ್ ಪ್ರವಾಸದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೆಯೇ ರಾಹುಲ್ ಗಾಂಧಿ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನವಜೋತ್ ಸಿಂಗ್ ಸಿಧು ಟ್ವೀಟ್
"ನಮ್ಮ ದೂರದೃಷ್ಟಿಯ ನಾಯಕ ರಾಹುಲ್ ಗಾಂಧಿ ಅವರು ಜನವರಿ 27 ರಂದು ಪಂಜಾಬ್ಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಪಂಜಾಬ್ನಲ್ಲಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ," ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಪಂಜಾಬ್ ಭೇಟಿ ಯಾವಾಗ?
ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿರುವ ಕಾರ್ಯಕ್ರಮದ ಪ್ರಕಾರ, ರಾಹುಲ್ ಗಾಂಧಿ ಜನವರಿ 27 ರಂದು ಬೆಳಗ್ಗೆ 8 ರಿಂದ 9ರ ಸಮಯದಲ್ಲಿ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಅಮೃತಸರಕ್ಕೆ ಆಗಮಿಸುತ್ತಾರೆ. ಅಲ್ಲಿಂದ ರಾಹುಲ್ ಗಾಂಧಿ ಗೋಲ್ಡನ್ ಟೆಂಪಲ್ಗೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಪಕ್ಷದ 117 ಅಭ್ಯರ್ಥಿಗಳೊಂದಿಗೆ ಲಾಂಗಾರ್ನಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ದುರ್ಜಿಯಾನಾಗೆ ಭೇಟಿ ನೀಡುತ್ತಾರೆ. ನಂತರ 12.15 ರಿಂದ 2.30 ರ ನಡುವೆ ಜಲಂಧರ್ಗೆ ಹೋಗುವ ಮೊದಲು ದುರ್ಗಿಯಾನಾ ದೇವಸ್ಥಾನ ಮತ್ತು ಭಗವಾನ್ ವಾಲ್ಮೀಕಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ರ್ಯಾಲಿಯ ಮೇಲಿನ ನಿಷೇಧ ವಿಸ್ತರಣೆ
ರಾಹುಲ್ಗೆ ಒಂದು ಗಂಟೆ ಮೀಸಲು ಇರಿಸಲಾಗಿದೆ. ಮಧ್ಯಾಹ್ನ 3.30 ರಿಂದ 4.30 ರ ನಡುವೆ, ರಾಹುಲ್ ಗಾಂಧಿ ಪಂಜಾಬ್ ಫತೇಹ್ ಎಂಬ ಒಂದು ವರ್ಚುವಲ್ ರ್ಯಾಲಿಯನ್ನು ನಡೆಸುತ್ತಾರೆ. ನಂತರ 6.25 ರ ವೇಳೆಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಲು ರಸ್ತೆಯ ಮೂಲಕ ಆದಂಪುರಕ್ಕೆ ತೆರಳುತ್ತಾರೆ. ಇನ್ನು ಈ ನಡುವೆ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಚುನಾವಣೆಗಾಗಿ ರೋಡ್ಶೋಗಳು ಮತ್ತು ರ್ಯಾಲಿಯ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಈ ತಿಂಗಳ ಅಂತ್ಯದವರೆಗೆ ವಿಸ್ತರಣೆ ಮಾಡಿದೆ. ಆದರೆ ಜನವರಿ 28 ರಿಂದ ಫೆಬ್ರವರಿ 8 ರವರೆಗೆ ನಿಗದಿಪಡಿಸಿದ ತೆರೆದ ಸ್ಥಳಗಳಲ್ಲಿ , 500 ಜನರು ಅಥವಾ ಶೇಕಡ 50ರಷ್ಟು ಜನರ ಸಮ್ಮುಖದಲ್ಲಿ ಸಭೆಯನ್ನು ನಡೆಸಲು ಅವಕಾಶ ನೀಡಲಾಗಿದೆ.

ರಾಹುಲ್ ವಿದೇಶ ಪ್ರವಾಸದಿಂದ ಕಾಂಗ್ರೆಸ್ನಲ್ಲಿ ಅಸಮಾಧಾನ
ಈ ಹಿಂದೆ ಕಾರ್ಯಕ್ರಮ ನಿಗದಿ ಆದ ಬಳಿಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಹೊರಟ್ಟಿದ್ದರಿಂದ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಳೆದ್ದಿತ್ತು. ವಿಧಾನಸಭೆ ಚುನಾವಣೆಗಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ನಡುವೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿರುವುದು ಕಾಂಗ್ರೆಸ್ನಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. ನವೆಂಬರ್ನಲ್ಲಿ ಸುಮಾರು ಮೂರು ವಾರಗಳ ಕಾಲ ಅಜ್ಞಾತ ವಿದೇಶಿ ಸ್ಥಳದಲ್ಲಿ ರಾಹುಲ್ ಗಾಂಧಿ ಇದ್ದರು. ಈ ನಡುವೆ ಪಂಜಾಬ್ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಮತ್ತು ಪಕ್ಷಾಂತರ ನಡೆಯುತ್ತಿದೆ. ಈ ನಡುವೆ ಮತ್ತೆ ರಾಹುಲ್ ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್ನ ಪಂಜಾಬ್ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. (ಒನ್ಇಂಡಿಯಾ ಸುದ್ದಿ)












Click it and Unblock the Notifications