ಚನ್ನಿ ಹೆಸರನ್ನು ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ: ಸಚಿವರ ಆಗ್ರಹ
ಚಂಡೀಗಢ, ಜನವರಿ 20: ಆಮ್ ಆದ್ಮಿ ಪಕ್ಷ ಭಗವಂತ್ ಮಾನ್ರನ್ನು ಪಂಜಾಬ್ನ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಒಂದು ದಿನದ ನಂತರ, ಚರಣ್ಜೀತ್ ಸಿಂಗ್ ಚನ್ನಿರನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಸಚಿವರುಗಳು ಆಗ್ರಹ ಮಾಡಲು ಆರಂಭ ಮಾಡಿದ್ದಾರೆ. ಪಂಜಾಬ್ನಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವಂತೆ ಹೈಕಮಾಂಡ್ಗೆ ಒತ್ತಾಯ ಮಾಡಿರುವ ಸಂಪುಟ ಸಚಿವ ಬ್ರಹ್ಮ ಮೊಹಿಂದ್ರಾ ಪಕ್ಷದ ಮುಖ್ಯಮಂತ್ರಿಯಾಗಿ ಚರಣ್ಜೀತ್ ಸಿಂಗ್ ಚನ್ನಿ ಹೆಸರನ್ನು ಘೋಷಣೆ ಮಾಡಿ ಎಂದು ಹೇಳಿದ್ದಾರೆ.
ರಾಣಾ ಗುರ್ಜಿತ್ ಸಿಂಗ್ ನಂತರ ಹಾಲಿ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಪರವಾಗಿ ಬ್ಯಾಟಿಂಗ್ ಮಾಡಿದ ಎರಡನೇ ಸಂಪುಟ ಸಚಿವರು ಬ್ರಹ್ಮ ಮೊಹಿಂದ್ರಾ ಆಗಿದ್ದಾರೆ. "ಎಲ್ಲರ ನಿರೀಕ್ಷೆಗೂ ಮೀರಿ ತನ್ನನ್ನು ತಾನು ಸಾಬೀತುಪಡಿಸಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಬೇಡ," ಎಂದು ಸಂಪುಟ ಸಚಿವ ಬ್ರಹ್ಮ ಮೊಹಿಂದ್ರಾ ತಿಳಿಸಿದ್ದಾರೆ.
"ಎಎಪಿ ಈಗಾಗಲೇ ಭಗವಂತ್ ಮಾನ್ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅದು ಹೆಚ್ಚು ಮಹತ್ವದ ವಿಚಾರವಾಗಿದೆ. ಇನ್ನು ಅಕಾಲಿದಳ ಈಗಾಗಲೇ ಸುಖ್ಬೀರ್ ಬಾದಲ್ರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಆದರೆ ಅಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯಾವುದೇ ನಿರ್ಧಾರವನ್ನು ಮಾಡದೆ ಇರಲು ಸಾಧ್ಯವಿಲ್ಲ," ಎಂದು ಸಚಿವ ಬ್ರಹ್ಮ ಮೊಹಿಂದ್ರಾ ಹೈಕಮಾಂಡ್ಗೆ ಸಲಹೆ ನೀಡಿದ್ದಾರೆ.

"ಮೂರು ತಿಂಗಳಲ್ಲೇ ತಮ್ಮನ್ನು ತಾವು ಸಾಬೀತುಪಡಿಸಿದ ಚನ್ನಿ"
"ಚರಣ್ಜೀತ್ ಸಿಂಗ್ ಚನ್ನಿ ಕೇವಲ ಮೂರು ತಿಂಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ," ಎಂದು ಒತ್ತಿ ಹೇಳಿದ ಬ್ರಹ್ಮ ಮೊಹಿಂದ್ರಾ, "ಕಾಂಗ್ರೆಸ್ ತಮ್ಮ ಸಂಪ್ರದಾಯವನ್ನು ಮುಂದುವರಿಸಬೇಕು, ಬೇರೆಯವರಿಗಿಂತ ಬೇಗ ಅಭ್ಯರ್ಥಿಯನ್ನು ಘೋಷಿಸಬೇಕು," ಎಂದು ಅಭಿಪ್ರಾಯಿಸಿದ್ದಾರೆ. "ಎಲ್ಲರ ನಿರೀಕ್ಷೆಗೂ ಮೀರಿ ತನ್ನನ್ನು ತಾನು ಸಾಬೀತುಪಡಿಸಿದವರು ಈಗಾಗಲೇ ಇರುವಾಗ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಬೇಡ," ಎಂದು ತಿಳಿಸಿದ್ದಾರೆ.
"ಅದೂ ನಾವು ಇತರರಿಗಿಂತ ಉತ್ತಮ ಆಯ್ಕೆಯನ್ನು ಹೊಂದಿರುವಾಗ, ನಾವು ಘೋಷಣೆ ಮಾಡುವುದರಲ್ಲಿ ತಪ್ಪು ಏನಿದೆ? ನಾವು ಚರಣ್ಜೀತ್ ಸಿಂಗ್ ಚನ್ನಿರನ್ನು ಈಗಾಗಲೇ ಮುಖ್ಯಮಂತ್ರಿಯನ್ನಾಗಿಸಿ ಪರೀಕ್ಷೆ ಮಾಡಿ ಆಗಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಗೊಂದಲಗಳನ್ನು ಬಿಟ್ಟು ಚರಣ್ಜೀತ್ ಸಿಂಗ್ ಚನ್ನಿರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು. ಏಕೆಂದರೆ ಅದು ಪಕ್ಷದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಚನ್ನಿ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ರಾಣಾ ಗುರ್ಜಿತ್ ಸಿಂಗ್
"ಮೂರು ತಿಂಗಳ ಹಿಂದೆಯೇ ಪಂಜಾಬ್ನಲ್ಲಿ ಮುಖ್ಯಮಂತ್ರಿ ಹುದ್ದೆಯ ವಿಷಯವು ಕಾಂಗ್ರೆಸ್ಗೆ ಇತ್ಯರ್ಥವಾಗಿದೆ ಮತ್ತು ಅದರ ಬಗ್ಗೆ ಯಾವುದೇ ಚರ್ಚೆ ಸಭೆಯ ಅಗತ್ಯವಿಲ್ಲ," ಎಂದು ರಾಜ್ಯ ಸರ್ಕಾರದ ಸಂಪುಟ ಸಚಿವ, ಕಾಂಗ್ರೆಸ್ ಶಾಸಕ ರಾಣಾ ಗುರ್ಜಿತ್ ಸಿಂಗ್ ಹೇಳಿದ್ದರು. "ಮುಖ್ಯಮಂತ್ರಿಯವರು ಮುಂಚೂಣಿಯಿಂದ ಮುನ್ನಡೆಯುತ್ತಿರುವಾಗ ಮತ್ತು ಈಗಾಗಲೇ ಚುನಾವಣೆಗಳು ಘೋಷಣೆಯಾಗಿರುವಾಗ ಅವರ ಭವಿಷ್ಯದ ಬಗ್ಗೆ ಗೊಂದಲವನ್ನು ಹರಡಲಾಗುತ್ತಿದೆ," ಎಂದು ಈ ಸಂದರ್ಭದಲ್ಲೇ ರಾಣಾ ಗುರ್ಜಿತ್ ಸಿಂಗ್ ವಿಷಾಧ ವ್ಯಕ್ತಪಡಿಸಿದ್ದರು. "ನೀವು ಅದ್ಭುತ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಯನ್ನು ಈಗಾಗಲೇ ಹೊಂದಿರುವಾಗ ಚುನಾವಣೆಯಲ್ಲಿ ಗೆದ್ದ ನಂತರ ಅವರ ಮುಂದುವರಿಕೆ ಬಗ್ಗೆ ಪ್ರಶ್ನೆ ಹಾಕುವುದೇಕೆ," ಎಂದು ಕೂಡಾ ಶಾಸಕ ರಾಣಾ ಗುರ್ಜಿತ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications