ಕೇಜ್ರಿವಾಲ್ರನ್ನು 'ರಾಜಕೀಯ ಪ್ರವಾಸಿ' ಎಂದು ಕರೆದ ಸಿಧು
ಚಂಡೀಗಢ, ಜನವರಿ 13: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗು ಸಿಧು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ''ರಾಜಕೀಯ ಪ್ರವಾಸಿ'' ಎಂದು ಕರೆದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ನಡೆಸಿದ ಸುದ್ದಿಗೋಷ್ಠಿ ಬಳಿಕ ಸಿಧು ಮಾತನಾಡಿದ್ದಾರೆ.
''ಕಳೆದ 4.5 ವರ್ಷದಿಂದ ರಾಜ್ಯಕ್ಕೆ ಕಾಲಿಡದ ಯಾರೋ ಒಬ್ಬರು ಇದೀಗ ಪಂಜಾಬ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ, ಎಎಪಿಯ ಪ್ರಚಾರ ಹಾಗೂ ಕಾರ್ಯಸೂಚಿಗಳು ಪಂಜಾಬ್ ಜನತೆಗೆ ತಮಾಷೆಯಂತೆ ಕಾಣುತ್ತಿದೆ. ಪಂಜಾಬ್ ಬಗ್ಗೆ ಮಾಹಿತಿ ಇಲ್ಲದೆ ದೆಹಲಿಯಿಂದ ಬರೆದ ಹತ್ತು ಅಂಶಗಳು ಎಂದಿಗೂ ಪಂಜಾಬ್ ಮಾದರಿಯಾಗಲು ಸಾಧ್ಯವಿಲ್ಲ ''ಎಂದು ಹೇಳಿದ್ದಾರೆ. ಸತ್ಯವೇನೆಂದರೆ ಕೇಜ್ರಿವಾಲ್ ಅವರ ಕಾರ್ಯನಿರ್ವಹಣೆ ಮಾಡೆಲ್ ಕಾಪಿ-ಕ್ಯಾಟ್ ಮಾಡೆಲ್, ಲಿಕ್ಕರ್ ಮಾಫಿಯಾ ಮಾಡೆಲ್, ಟಿಕೆಟ್ ಫಾರ್ ಮನಿ ಮಾಡೆಲ್ ಎಂದು ದೂರಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿಯ ಕೆಲವು ಅಂಶಗಳು:
ರಾಜ್ಯವನ್ನು ಬಹುವಾಗಿ ಕಾಡುತ್ತಿರುವ ಮಾದಕವಸ್ತು ಕಳ್ಳಸಾಗಾಣಿಕೆ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಹೇರಲಾಗುವುದು ಎಂದು ಕೇಜ್ರಿವಾಲ್ ಪಂಜಾಬ್ ಮತದಾರರಿಗೆ ಭರವಸೆ ನೀಡಿದ್ದಾರೆ.
ಪಂಜಾಬ್ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ಒಂದೇ ಹಂತದ ಮತದಾನ ನಡೆಯಲಿದೆ. ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.

10 ಅಂಶಗಳೇನು?
* ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದು
* ಶೈಕ್ಷಣಿಕ ಕ್ರಾಂತಿ
* ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ
* 24x7 ಉಚಿತ ವಿದ್ಯುತ್
* ಮಹಿಳೆಯರಿಗೆ 1000 ರೂ. ಮಾಸಾಶನ
* ಎಲ್ಲರಿಗೂ ಉದ್ಯೋಗ
* ರೈತರ ಸಮಸ್ಯೆಗಳಿಗೆ ಪರಿಹಾರ
* ಉದ್ಯಮ ಸ್ನೇಹಿ ಸರ್ಕಾರ.
* ಡ್ರಗ್ ಮಾಫಿಯಾಗೆ ಅಂತ್ಯ ಹಾಡುವುದು
* ಶಾಂತಿಯುತ ಪಂಜಾಬ್
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಗಾಗಿ ಪಕ್ಷ ಶ್ರಮಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಜಾಬ್ನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಬಗ್ಗೆ ಪ್ರಸ್ತಾಪಿಸಿ, ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿಗೆ ಮಾತ್ರವಲ್ಲ ಪಂಜಾಬ್ನ ಪ್ರತಿಯೊಬ್ಬರ ರಕ್ಷಣೆ ಬಗ್ಗೆಯೂ ನಾವು ಖಾತರಿ ಪಡಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ವಾರ ಆಮ್ ಆದ್ಮೀ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ನಾವು ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಹಾಗೆಯೇ ಪಂಜಾಬ್ನಲ್ಲಿ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂಸು ಸುವ್ಯವಸ್ಥೆ ಕುಸಿದಿದೆ. ಬಾಂಬ್ ಬ್ಲಾಸ್ಟ್, ಪ್ರಧಾನ ಮಂತ್ರಿಗಳ ಭದ್ರಲಾ ಲೋಪ ಉಂಟಾಗಿದೆ. ಎಎಪಿ ಪ್ರತಿಯೊಬ್ಬರ ಸುರಕ್ಷತೆ ಬಗ್ಗೆ ಗಮನ ಕೊಡಲಿದೆ ಎಂದು ಹೇಳಿದರು.












Click it and Unblock the Notifications