ಸಿಧು-ಸಿಎಂ ಭೇಟಿ: ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲ್ಲಿದ್ದಾರೆ ಎಂದ ಸಹಾಯಕ
ಚಂಡೀಗಢ, ಸೆಪ್ಟೆಂಬರ್ 30: ಪಂಜಾಬ್ನಲ್ಲಿ ಕಾಂಗ್ರೆಸ್ನಲ್ಲಿ ಕಳೆದ ಹಲವು ದಿನಗಳಿಂದ ರಾಜಕೀಯ ಬಿಕ್ಕಟ್ಟು ಕಾಣಿಸಿಕೊಂಡಿದೆ. ದಿನಕ್ಕೊಂದು ಬದಲಾವಣೆ ಆಗುತ್ತಿದೆ. ಈ ನಡುವೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ ನವ್ಜೋತ್ ಸಿಂಗ್ ಸಿಧು ಕೊನೆಗೂ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿರನ್ನು ಗುರುವಾರ ಭೇಟಿಯಾಗಿದ್ದಾರೆ.
ಇನ್ನು ಇದಕ್ಕೂ ಮುನ್ನ ಇಂದು ಬೆಳಿಗ್ಗೆ ನವ್ಜೋತ್ ಸಿಂಗ್ ಸಿಧುರ ಸಹಾಯಕ ಸಿಧು ಪಂಜಾಬ್ ಕಾಂಗ್ರೆಸ್ನ ಮುಖ್ಯಸ್ಥರಾಗಿಯೇ ಮುಂದುವರಿಯುವ ಬಗ್ಗೆ ಸುಳಿವನ್ನು ನೀಡಿದ್ದರು. "ಸಿಧುರವರು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಉಳಿಯಲಿದ್ದಾರೆ. ಮುಂದಿನ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಯಕತ್ವ ವಹಿಸಿ ಮುನ್ನಡೆಯಲಿದ್ದಾರೆ," ಎಂದು ತಿಳಿಸಿದ್ದರು.
ಪಂಜಾಬಿನಲ್ಲಿ ನವಜೋತ್ ಸಿಧು ಪಕ್ಷದ ಸರ್ವೋಚ್ಛ ನಾಯಕ ಎಂದ ಸಿಎಂ ಚರಣ್ಜಿತ್ ಸಿಂಗ್
ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, "ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಚಂಡೀಗಢದ ಪಂಜಾಬ್ ಭವನಕ್ಕೆ ತೆರಳಿ ಮಾತುಕತೆ ನಡೆಸಲಿದ್ದೇನೆ. ಮಧಾಹ್ನ 3 ಗಂಟೆ ಸುಮಾರಿಗೆ ಭೇಟಿಯಾಗಲಿದ್ದೇನೆ. ಯಾವುದೇ ಮಾತುಕತೆ ನಡೆಸಲು ನಾನು ಅವರಿಗೆ ಸ್ವಾಗತ ನೀಡುತ್ತೇನೆ," ಎಂದಿದ್ದಾರೆ.
ನವಜೋತ್ ಸಿಂಗ್ ಸಿಧುರ ಸಲಹೆಹಾರ ಮೊಹಮ್ಮದ್ ಮುಸ್ತಾಫ ಎನ್ಡಿಟಿವಿ ಜೊತೆ ಮಾತನಾಡಿ, "ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು," ಎಂದು ಹೇಳಿದ್ದಾರೆ. "ನವ್ಜೋತ್ ಸಿಂಗ್ ಸಿಧುರನ್ನು ಕಾಂಗ್ರೆಸ್ ನಾಯಕತ್ವವು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಸಿಧು ಅವರು ಇನ್ನೂ ಕೂಡಾ ಕಾಂಗ್ರೆಸ್ ನಾಯಕತ್ವದಿಂದ ದೂರವಾಗಿಲ್ಲ. ನವ್ಜೋತ್ ಸಿಂಗ್ ಸಿಧು ಕಾಂಗ್ರೆಸ್ ಹಾಗೂ ಅದರ ನಾಯಕತ್ವದ ಬಗ್ಗೆ ಯಾವುದೇ ಚಿಂತೆಯನ್ನು ನಡೆಸದ ಅಮರೀಂದರ್ ಸಿಂಗ್ ಅಲ್ಲ," ಎಂದು ಹೇಳಿದ್ದಾರೆ. "ನವ್ಜೋತ್ ಸಿಂಗ್ ಸಿಧು ಆ ಸಮಯಕ್ಕೆ ಬಂದ ಭಾವನೆಗೆ ತಕ್ಕುದಾಗಿ ವರ್ತನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕತ್ವವು ಅರ್ಥ ಮಾಡಿಕೊಳ್ಳಲಿದೆ," ಎಂದು ಕೂಡಾ ಉಲ್ಲೇಖಿಸಿದ್ದಾರೆ.
ನವ್ಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಾವುದೇ ನಾಯಕರ ಜೊತೆಗೆ ಮಾತುಕತೆ ನಡೆಸಿಲ್ಲ ಎಂದು ಹೇಳಲಾಗಿದೆ. ನಿನ್ನೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಸಿಧು, "ನನ್ನ ಹೋರಾಟವು ವಿಷಯದ ಮೇಲೆ ಆಧಾರಿತವಾಗಿದೆ. ನಾನು ಈ ವಿಷಯ ಬಗ್ಗೆ ಹಲವಾರು ಬಾರಿ ಹೇಳಿದ್ದೇವೆ. ನಾನು ನನ್ನ ಸಿದ್ದಾಂತದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ದವಿಲ್ಲ. ನಾನು ಹೈಕಮಾಂಡ್ ಅನ್ನು ತಪ್ಪು ದಾರಿಗೆ ಎಳಿಯುವುದಿಲ್ಲ, ಹಾಗೆಯೇ ಅವರು ಕೂಡಾ ನನ್ನನ್ನು ದಾರಿ ತಪ್ಪಿಸಲು ಬಿಡುವುದಿಲ್ಲ," ಎಂದು ಖಡಕ್ ಆಗಿಯೇ ಹೇಳಿದ್ದರು. ಇದನ್ನು ಪಂಜಾಬಿ ಭಾಷೆಯಲ್ಲಿ ಹೇಳಿದ್ದರು.
ಸಿಧು ಮನವೊಲಿಕೆ ನಡುವೆ ಪಂಜಾಬ್ನಲ್ಲಿ ಕಾಂಗ್ರೆಸ್ನಿಂದ ಪ್ಲ್ಯಾನ್ ಬಿ, ಏನಿದು?
ಇನ್ನು ನಿನ್ನೆ ನವ್ಜೋತ್ ಸಿಂಗ್ ಸಿಧು ಜೊತೆ ಫೋನ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, "ನವಜೋತ್ ಸಿಂಗ್ ಸಿಧುರಿಗೆ ಯಾವ ವಿಷಯಗಳ ಬಗ್ಗೆ ಆಕ್ಷೇಪಣೆಯಿದೆ ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ," ಎಂದು ತಿಳಿಸಿದ್ದಾರೆ. ಯಾವುದೇ ನೇಮಕಾತಿಯಲ್ಲಿ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ನಾನು ಆ ಬಗ್ಗೆ ಕಠಿಣ ನಿಲುವು ಹೊಂದಿಲ್ಲ, ನನಗೆ ಅಹಂ ಮತ್ತು ಜಗಳಗಳಿಲ್ಲ. ನಾನು ಅವರಿಗೆ ಪಕ್ಷದ ಸರ್ವೋಚ್ಚ ನಾಯಕ ಎಂದು ತಿಳಿದುಕೊಂಡಿದ್ದೇನೆ, ಮಾತನಾಡೋಣ ಬನ್ನಿ," ಎಂದು ಆಹ್ವಾನ ಮಾಡಿದ್ದಾರೆ.
ಈ ನಡುವೆ ನವಜೋತ್ ಸಿಂಗ್ ಸಿಧು ನೀಡಿರುವ ರಾಜೀನಾಮೆಯನ್ನು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ತಿರಸ್ಕರಿಸಿರುವ ಹೈಕಮಾಂಡ್ ನಾಯಕರು ರಾಜ್ಯ ಮಟ್ಟದಲ್ಲಿಯೇ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ