ಹರಿಯಾಣದಲ್ಲಿ ರೈತರ ಪ್ರತಿಭಟನೆ ನಡುವೆ ಭಾನುವಾರದಿಂದಲೇ ಭತ್ತ, ರಾಗಿ ಖರೀದಿ
ಚಂಡೀಘರ್, ಅಕ್ಟೋಬರ್ 2: ಹರಿಯಾಣ ಸರ್ಕಾರವು ಭಾನುವಾರದಿಂದಲೇ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ ಘೋಷಿಸಿದ್ದಾರೆ.
ತಾವು ಬೆಳೆದ ಬೆಳೆಯನ್ನು ಖರೀದಿಸುವಲ್ಲಿ ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ಕರ್ನಾಲ್ ಜಿಲ್ಲೆಯ ಸಿಎಂ ಖಟ್ಟರ್ ನಿವಾಸದ ಎದುರು ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.
"ಮುಂಗಾರು ವಿಳಂಬದಿಂದಾಗಿ, ಕೇಂದ್ರ ಸರ್ಕಾರವು ಭತ್ತ ಮತ್ತು ರಾಗಿ ಖರೀದಿಯನ್ನು ಈ ವರ್ಷದ ಅಕ್ಟೋಬರ್ 1ರ ಬದಲಿಗೆ ಅಕ್ಟೋಬರ್ 11ಕ್ಕೆ ಮುಂದೂಡಿತ್ತು. ಆದರೆ ಬೇಗನೆ ಖರೀದಿ ಪ್ರಕ್ರಿಯೆ ಆರಂಭಿಸಲು ಬೇಡಿಕೆ ಹೆಚ್ಚಿದ ಹಿನ್ನೆಲೆ ನಾಳೆಯಿಂದ ಖರೀದಿ ಆರಂಭವಾಗಲಿದೆ" ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಸರ್ಕಾರದ ನಿರ್ಧಾರದಲ್ಲಿ ಯೂ-ಟರ್ನ್:
ಹರಿಯಾಣ ಸಿಎಂ ಖಟ್ಟರ್ ಮತ್ತು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವೆ ಅಶ್ವಿನಿ ಚೌಬೆ ನಡುವೆ ಶನಿವಾರ ನಡೆದ ಸಭೆಯ ನಂತರ ಸರ್ಕಾರದ ನಿರ್ಧಾರದಲ್ಲಿ ಯು-ಟರ್ನ್ ಹೊಡೆದಿದೆ. "ಹರಿಯಾಣದಲ್ಲಿ ಸೆಪ್ಟೆಂಬರ್ 20ರಿಂದಲೇ ಲಕ್ಷಾಂತರ ಕ್ವಿಂಟಾಲ್ ಭತ್ತ ಮಂಡಿಗಳಿಗೆ ಬರುತ್ತಿದ್ದು, ಒಂದೇ ಒಂದು ಧಾನ್ಯವನ್ನು ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಲಾಗುತ್ತಿಲ್ಲ," ಎಂದು ರಂದೀಪ್ ಸಿಂಗ್ ಸರ್ಜೇವಾಲಾ ದೂಷಿಸಿದ್ದಾರೆ.
ಸುಮಾರು 20 ಲಕ್ಷ ಕ್ವಿಂಟಾಲ್ ಭತ್ತವು ಮಂಡಿಗಳಲ್ಲಿ ಮೇಲ್ವಿಚಾರಣೆಯಿಲ್ಲದೇ ಬಂದು ಬಿದ್ದಿದೆ. ಅಂಬಾಲಾದಲ್ಲಿ 4.5 ಲಕ್ಷ ಕ್ವಿಂಟಾಲ್, ಕುರುಕ್ಷೇತ್ರ 5.5 ಲಕ್ಷ ಕ್ವಿಂಟಾಲ್, ಯಮುನಾನಗರ 2.25 ಲಕ್ಷ ಕ್ವಿಂಟಾಲ್, ಕೈಥಾಲ್ 2 ಲಕ್ಷ ಕ್ವಿಂಟಾಲ್ ಮತ್ತು ಕರ್ನಾಲ್ ಜಿಲ್ಲೆಯ ಮಂಡಿಗಳಲ್ಲಿ 1.75 ಲಕ್ಷ ಕ್ವಿಂಟಾಲ್ ಭತ್ತ ಬಂದು ಬಿದ್ದಿದೆ.
ಭತ್ತ ಖರೀದಿಸಲು ಪಂಜಾಬ್ ಸಿಎಂ ಮನವಿ:
ಪ್ರಧಾನಿ ಭೇಟಿ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟಿದ್ದರು. ಈ ಪೈಕಿ "ಒಂದು ಪಂಜಾಬಿನಲ್ಲಿ ಅಕ್ಟೋಬರ್ 10ರ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸುವುದೇ ಆಗಿತ್ತು. ಸೂಕ್ತ ಸಮಯದಲ್ಲಿ ಬೆಳೆ ಖರೀದಿಸದಿದ್ದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯು ಹಾಳಾಗುತ್ತದೆ ಎಂದು ಚನ್ನಿ ಮನವಿ ಮಾಡಿಕೊಂಡಿದ್ದರು. ಇದರ ಜೊತೆಗೆ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಹಾಗೂ ಪ್ರತಿಭಟನಾನಿರತ ರೈತರೊಂದಿಗೆ ಸಂಧಾನ ಮಾತುಕತೆಯ ಮೂಲಕ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವುದು," ಎಂದು ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಹೇಳಿದ್ದರು.
ಸಿಎಂ ಖಟ್ಟರ್ ನಿವಾಸದ ಎದುರು ಪ್ರತಿಭಟನೆ:
ಶನಿವಾರ ಮುಂಜಾನೆ 1,000 ರಿಂದ 1,500 ರೈತರು ಕರ್ನಾಲ್ನಲ್ಲಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನೆಯ ಎದುರಿಗೆ ಪ್ರತಿಭಟನೆ ನಡಸಿದ್ದು, ತಕ್ಷಣವೇ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾತ್ರಿಯಿಡೀ ಸಿಎಂ ನಿವಾಸದ ಎದುರಿನಲ್ಲೇ ಜಾಗರಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ನಿಂತ ಪ್ರತಿಭಟನಾನಿರತ ರೈತರು ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಅತಿಹೆಚ್ಚು ಸಂಖ್ಯೆಯಲ್ಲಿ ಸೇರಿದ ರೈತರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಈ ವೇಳೆ ತಪ್ಪಿಸಿಕೊಳ್ಳುವುದಕ್ಕೆ ಕೆಲವು ರೈತರು ತಮ್ಮ ವಾಹನಗಳನ್ನು ಏರಲು ಶುರು ಮಾಡಿದರು, ಸ್ಥಳದಲ್ಲಿ ಅಶ್ರುವಾಯು ವಾಹನಗಳನ್ನು ಸಹ ನಿಯೋಜಿಸಲಾಗಿತ್ತು. ಹರಿಯಾಣದ ಹಲವು ಭಾಗಗಳಲ್ಲಿ ಇರುವ ಧಾನ್ಯ ಮಾರುಕಟ್ಟೆಗಳಲ್ಲಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಹಲವು ಜಿಲ್ಲೆಗಳಲ್ಲಿ ಆಡಳಿತಾರೂಢ ಬಿಜೆಪಿ-ಜನನಾಯಕ್ ಜನತಾ ಪಕ್ಷದ ಮೈತ್ರಿಯ ಶಾಸಕರ ಮನೆಗಳ ಎದುರಿಗೆ ರೈತರು ಪ್ರತಿಭಟನೆ ನಡೆಸಿದರು.
ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ:
ಹರಿಯಾಣದ ಜಜ್ಜಾರ್ನಲ್ಲಿ ಉಪ ಮುಖ್ಯಮಂತ್ರಿ ದುಷ್ಯಂತ ಚೌತಾಲಾ ಕಾರ್ಯಕ್ರಮದ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಹಂತದಲ್ಲಿ ಶುಕ್ರವಾರ ಪೊಲೀಸರು ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಸಂಘರ್ಷ ನಡೆಯಿತು. ರೈತರನ್ನು ತಡೆಯಲು ಜಲಫಿರಂಗಿ ಪ್ರಯೋಗಿಸಲಾಗಿತ್ತು. ತದನಂತರದಲ್ಲಿ ನಡದ ನಾಟಕೀಯ ಬೆಳವಣಿಗೆಯಲ್ಲಿ ಪುರುಷರು ಮತ್ತು ಮಹಿಳೆಯರು ಎನ್ನದೇ ಪೊಲೀಸ್ ಬ್ಯಾರಿಕೇಡ್ ಅನ್ನು ತಳ್ಳಿ ನುಗ್ಗಲು ಪ್ರಯತ್ನಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಡಿಸಿಎಂ ದುಷ್ಯಂತ್ ಚಾತಾಲಾ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಯಿತು.












Click it and Unblock the Notifications