ಜುಲೈ 1 ರಿಂದ 300 ಯೂನಿಟ್ ಉಚಿತ ವಿದ್ಯುತ್ : ಸಿಎಂ ಭಗವಂತ್ ಮಾನ್ ಘೋಷಣೆ
ಚಂಡೀಗಢ, ಏಪ್ರಿಲ್ 16 : ಪಂಜಾಬ್ನಲ್ಲಿ ಜುಲೈ 1 ರಿಂದ ಗೃಹ ಬಳಕೆಗಾಗಿ ಉಚಿತ 300 ಯೂನಿಟ್ ವಿದ್ಯುತ್ ಪೂರೈಕೆ ಮಾಡುವುದಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಭಗವಂತ ಮಾನ್ ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲೇ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಈ ಮೂಲಕ ಪಂಜಾಬ್ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.
ಇನ್ನು ಈ ಮಹತ್ವದ ಘೋಷಣೆಗೂ ಮುನ್ನ ಗುರುವಾರ ಮುಖ್ಯಮಂತ್ರಿ ಭಗವಂತ ಮಾನ್ ದೆಹಲಿಗೆ ತೆರಳಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಉಚಿತ ವಿದ್ಯುತ್ ಪೂರೈಕೆ ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಸ್ಥಾಪಿಸುವ ಮುನ್ನ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ ಉಚಿತ 300 ಯೂನಿಟ್ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಶನಿವಾರ ಭಗವಂತ ಮಾನ್ ಪಂಜಾಬ್ ಜನತೆಗೆ ತಾವು ನೀಡಿದ್ದ ಪ್ರಮುಖ ಭರವಸೆಯನ್ನು ನೇರವೇರಿಸುವುದಾಗಿ ಘೋಷಿಸಿದ್ದಾರೆ. ಜುಲೈ 1 ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಪ್ರತಿ ಮನೆಯ ಗೃಹ ಬಳಕೆಗೆ ಉಚಿತವಾಗಿ 300 ಯೂನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಬಹುತೇಕ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಎಎಪಿ ಸರ್ಕಾರ ಜಾಹೀರಾತು ನೀಡಿದ್ದು, ಉಚಿತ ವಿದ್ಯುತ್ ಘೋಷಿಸಲಾಗಿದೆ, ಇದರ ಜೊತೆಗೆ ಭ್ರಷ್ಟಚಾರ ವಿರೋಧಿ ಸಹಾಯವಾಣಿಯನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ.
ಕಳೆದ ತಿಂಗಳು ಮುಖ್ಯಮಂತ್ರಿ ಭಗವಂತ ಮಾನ್ "ಮನೆ ಬಾಗಿಲಿಗೆ ಪಡಿತರ ಯೋಜನೆ"ಯನ್ನ ಜಾರಿಗೆ ತಂದಿದ್ದರು. ಇದು ಕೂಡ ತಾವು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪ್ರಮುಖ ಭರವಸೆಯಲ್ಲಿ ಒಂದಾಗಿದೆ.

ಮಾರ್ಚ್ 10 ರಂದು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಇತಿಹಾಸ ನಿರ್ಮಿಸಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯನ್ನೇ ಧೂಳಿಪಟ ಮಾಡಿ ಅಧಿಕಾರದ ಗದ್ದುಗೆ ಏರಿತ್ತು. ಭಗವಂತ್ ಮಾನ್ ಅಧಿಕಾರ ಸ್ವೀಕರಿಸಿದ ಬಳಿಕ ತಾವು ನೀಡಿದ್ದ ಭರವಸೆಗಳನ್ನ ಆದಷ್ಟು ಬೇಗ ನೇರವೇರಿಸುವುದಾಗಿ ಘೋಷಿಸಿದ್ದರು. ಈಗ ಅದರಲ್ಲಿ ಪ್ರಮುಖವಾಗಿ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಹಾಗೂ ಮನೆ ಬಾಗಿಲಿಗೆ ಪಡಿತರ ಯೋಜನೆಯನ್ನ ಜಾರಿಗೆ ತಂದಿದೆ. ಈ ಮೂಲಕ ತಾವು ನೀಡಿದ್ದ ಪ್ರಮುಖ ಭರವಸೆಗಳನ್ನ ಈಡೇರಿಸುವಲ್ಲಿ ಆಪ್ ಸರ್ಕಾರ ಯಶಸ್ವಿಯಾಗಿದೆ.












Click it and Unblock the Notifications